Bangalore Stampade |ಆಸ್ಪತ್ರೆಗಳ ಮುಂದೆ ಪೋಷಕರ ಆರ್ತನಾದ; ಕಾಲ್ತುಳಿತದಲ್ಲಿ ಮೃತಪಟ್ಟವರ ವಿವರ ಇಲ್ಲಿದೆ
ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ನಾಲ್ವರು ವೈದೇಹಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಆರು ಮಂದಿ ಬೌರಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದರು.;
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊರಭಾಗದಲ್ಲಿ ಅಭಿಮಾನಿಗಳ ದಟ್ಟಣೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು (ಒಬ್ಬ ಬಾಲಕಿ) ಸೇರಿದಂತೆ 11 ಮಂದಿ ಮೃತಪಟ್ಟಿದ್ದು, ಆಸ್ಪತ್ರೆಗಳ ಮುಂದೆ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.
ಕ್ರಿಕೆಟ್ ಅಂದಾಭಿಮಾನದಲ್ಲಿ ಜೀವ ಕಳೆದುಕೊಂಡವರು ಕುಟುಂಬವನ್ನು ಅನಾಥವಾಗಿಸಿ ಬಾರದ ಲೋಕಕ್ಕೆ ಹೋಗಿರುವುದು ಪೋಷಕರನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಬುಧವಾರ ರಾತ್ರಿ ಹಾಗೂ ಗುರುವಾರ ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ, ಪಾರ್ಥಿವ ಶರೀರಗಳನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಕಾಲ್ತುಳಿತದಲ್ಲಿ ಕುಣಿಗಲ್ ಮೂಲದ ಮನೋಜ್ ಕುಮಾರ್ ಮೃತಪಟ್ಟಿದ್ದು, ಅವರ ತಂದೆ ಎನ್.ದೇವರಾಜ್ ಗೋಳಾಟ ಎಲ್ಲರ ಕಣ್ಣಾಲಿಗಳಲ್ಲಿ ನೀರು ತುಂಬಿಸಿತ್ತು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ದೇವರಾಜ್ ಅವರು ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಮನೋಜ್ ಕುಮಾರ್ ಬುಧವಾರ ಆರ್ಸಿಬಿ ತಂಡದ ಆಟಗಾರರನ್ನು ನೋಡಲೆಂದು ಸ್ನೇಹಿತರೊಟ್ಟಿಗೆ ಬೆಂಗಳೂರಿಗೆ ಬಂದಿದ್ದ. ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ನಡೆಸಲು ಉದ್ದೇಶಿಸಿದ್ದ ಸಂಭ್ರಮಾಚರಣೆ ಮುನ್ನ ಸಂಭವಿಸಿದ ಕಾಲ್ತುಳಿತಕ್ಕೆ ಆತ ಬಲಿಯಾಗಿದ್ದಾರೆ.
ನನ್ನ ಮಗನ ಬಗ್ಗೆ ನೂರಾರು ಕನಸು ಹೊಂದಿದ್ದೆ. ಅವೆಲ್ಲವೂ ಅವನ ಹಿಂದೆಯೇ ಹೊರಟು ಹೋದವು. ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲೆಂದು 22 ವರ್ಷಗಳ ಹಿಂದೆ ಊರು ಬಿಟ್ಟು ಬಂದು ಯಲಹಂಕದಲ್ಲಿ ವಾಸವಿದ್ದೆವು. ನಿನ್ನೆ ಊಟ ಮಾಡುವಾಗ ಸ್ನೇಹಿತರು ಕರೆಯುತ್ತಿದ್ದಂತೆ ಊಟವನ್ನು ಅರ್ಧಕ್ಕೆ ಬಿಟ್ಟು ಹೊರಟು ಹೋದ. ಮೊಬೈಲ್ಗೆ ಫೋನ್ ಮಾಡಿದಾಗ ಕಾಲ್ತುಳಿತ ಸಂಭವಿಸಿದೆ ಎಂಬ ವಿಚಾರ ತಿಳಿಯಿತು. ಪೊಲೀಸರು ಕರೆ ಮಾಡಿ ತಿಳಿಸಿದರು. ಇಲ್ಲಿಗೆ ಬಂದಾಗ ಮಗನ ಮೃತದೇಹವು ಶವಾಗಾರದಲ್ಲಿತ್ತು ಎಂದು ಹೇಳುತ್ತಲೇ ಕಣ್ಣೀರು ಹಾಕಿದರು.
ಇನ್ನು ವಿಕ್ಟೋರಿಯಾ, ಬೌರಿಂಗ್, ವೈದೇಹಿ ಹಾಗೂ ಮಣಿಪಾಲ್ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಯಲಹಂತ ತಾಲೂಕಿನ ಕಟ್ಟಿಗೇನಹಳ್ಳಿ ನಿವಾಸಿ ದಿವ್ಯಾಂಶಿ(14), ಉತ್ತರ ಕನಕ್ನಡ ಜಿಲ್ಲೆಯ ರವೀಂದ್ರ ನಗರದ ನಿವಾಸಿ ಅಕ್ಷತಾ ಪೈ(26), ಬೆಂಗಳೂರಿನ ಎಂ.ಎಸ್.ರಾಮಯ್ಯ ಬಡಾವಣೆ ನಿವಾಸಿ ಭೂಮಿಕ್(19), ಕೋಲಾರದ ಎಸ್ವಿ ಲೇಔಟ್ ನಿವಾಸಿ ಸಹನಾ (23), ದೊಡ್ಡಕಲ್ಲಸಂದ್ರದ ನಾರಾಯಣನಗರ ನಿವಾಸಿ ಚಿನ್ಮಯ ಶೆಟ್ಟಿ(19), ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ನಾಗಸಂದ್ರ ಗ್ರಾಮದ ಮನೋಜ್ ಕುಮಾರ್(20), ಚಿಂತಾಮಣಿ ತಾಲೂಕಿನ ಕುರುಟಹಳ್ಳಿ ಗ್ರಾಮದ ನಿವಾಸಿ ಶ್ರವಣ ಕೆ.ಟಿ(20), ಯಾದಗಿರಿ ತಾಲೂಕು ಹೊನಗೇರಿ ಗ್ರಾಮದ ಶಿವಲಿಂಗ(17), ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರ ನಿವಾಸಿ ಪೂರ್ಣಚಂದ್ರ (20), ತಮಿಳುನಾಡಿನ ಕೊಯಮತ್ತೂರಿನ ಉಡಮಲಪೇಟ್ ನಿವಾಸಿ ಕಾಮಾಕ್ಷಿದೇವಿ(29) ಹಾಗೂ ಯಲಹಂಕ ನ್ಯೂ ಟೌನ್ ನಿವಾಸಿ ಪ್ರಜ್ವಲ್ (22) ಎಂದು ಗುರುತಿಸಲಾಗಿದೆ. ಎಲ್ಲರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ.
ಮೃತರಲ್ಲಿ ನಾಲ್ವರು ವೈದೇಹಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಆರು ಮಂದಿ ಬೌರಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದ ಹೊರೆಗೆ ಏಕಾಏಕಿ ಜನದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ ಒಟ್ಟು 56 ಮಂದಿ ಗಾಯಗೊಂಡಿದ್ದಾರೆ. ಇವರ ಪೈಕಿ 46 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಉಳಿದ 10 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಮೃತರಲ್ಲಿ ಬಹುತೇಕರು ಉಸಿರಾಟದ ತೊಂದರೆಯಿಂದ ಕೊನೆಉಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಆಯೋಜಿಸಿದ್ದ ಆರ್ಸಿಬಿ ತಂಡದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೂ ವಿಧಾನಸೌಧದ ಎದುರು ಸುಮಾರು ಒಂದು ಲಕ್ಷ ಅಭಿಮಾನಿಗಳು ಜಮಾಯಿಸಿದ್ದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಆರ್ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮದ ವಿಹಂಗಮ ನೋಟ
ವಿಧಾನಸೌಧದಿಂದ ತೆರೆದ ವಾಹನದಲ್ಲಿ ಆರ್ಸಿಬಿ ಆಟಗಾರರ ಮೆರವಣಿಗೆಗೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಹೆಚ್ಚು ಜನರು ಬಂದಿದ್ದರು. 35ಸಾವಿರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಉಚಿತ ಪ್ರವೇಶದ ವದಂತಿಗೆ ಕಿವಿಗೊಟ್ಟು ಕಾರ್ಯಕ್ರಮ ವೀಕ್ಷಣೆಗಾಗಿ ಅಂದಾಜು 2ರಿಂದ 3 ಲಕ್ಷ ಅಭಿಮಾನಿಗಳು ಜಮಾಯಿಸಿದ್ದರು.
ಅಸ್ವಸ್ಥರನ್ನು ಅಂಬುಲೆನ್ಸ್ಗೆ ಸಾಗಿಸುತ್ತಿರುವ ಪೊಲೀಸ್ ಅಧಿಕಾರಿ
ವಿಧಾನಸೌಧದ ಬಳಿ ಆಟಗಾರರಿಗೆ ಅಭಿನಂದನೆ ಕಾರ್ಯಕ್ರಮ ನಡೆಯುತ್ತಿರುವಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಗೇಟ್ಗಳನ್ನು ತೆರೆಯುತ್ತಿದ್ದಂತೆ ನೂಕುನುಗ್ಗಲು ಹೆಚ್ಚಾಯಿತು. ಈ ವೇಳೆ ಪೊಲೀಸರು ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ ನಡೆಸಿ, ದಟ್ಟಣೆ ಚೆದುರಿಸಿದರು. ಇದೇ ವೇಳೆ ಮಳೆ ಆರಂಭವಾಗುತ್ತಿದ್ದಂತೆ ಅಭಿಮಾನಿಗಳ ಮಧ್ಯೆ ತಳ್ಳಾಟ ನೂಕಾಟ ನಡೆದು ಕಾಲ್ತುಳಿತಕ್ಕೆ ಕಾರಣವಾಯಿತು.
ಅಂಬು ಲೆನ್ಸ್ ಸಂಚಾರಕ್ಕೆ ಜಾಗ ಇರದ ಕಾರಣ ಉಸಿರಾಟ ಸಮಸ್ಯೆಗೆ ಒಳಗಾದ ಹಲವರನ್ನು ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಹೆಗಲ ಮೇಲೆ ಹೊತ್ತುಕೊಂಡು ಅಂಬುಲೆನ್ಸ್ಗಳಿಗೆ ಸ್ಥಳಾಂತರಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ಸಂಖ್ಯೆ 7 ,16,17,18-21,2,2A 6,7 ರಲ್ಲಿ ಕಾಲ್ತುಳಿತ ಸಂಭವಿಸಿ ಹೆಚ್ಚಿನ ಸಾವುನೋವಿಗೆ ಕಾರಣವಾಗಿದೆ.