ಉಗ್ರರೊಂದಿಗೆ ಪಾಕ್ ಸಂಬಂಧ: ಕಿಡಿಕಾರಿದ ಭಾರತ

ನೇಪಾಳದಲ್ಲಿ ಸುಶೀಲಾ ಕರ್ಕಿ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚಿಸುವುದನ್ನು ನಾವು ಸ್ವಾಗತಿಸಿದ್ದೇವೆ. ಮೋದಿ ಅವರು ಕರ್ಕಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿ, ಶಾಂತಿ ಮತ್ತು ಸ್ಥಿರತೆ ನೆಲೆಸಲು ಅಗತ್ಯವಾದ ಎಲ್ಲಾ ರೀತಿಯ ಬೆಂಬಲವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ.

Update: 2025-09-19 13:33 GMT

ರಣಧೀರ್ ಜೈಸ್ವಾಲ್

Click the Play button to listen to article

ಪಾಕಿಸ್ತಾನದ ಸೇನೆ ಮತ್ತು ಉಗ್ರರೊಂದಿಗೆ ಯಾವ ರೀತಿಯ ಸಂಬಂಧವಿದೆ ಎಂಬ ಬಗ್ಗೆ ಪ್ರಪಂಚಕ್ಕೆ ತಿಳಿದಿದೆ ಎಂಬುದರಲ್ಲಿ ಭಾರತಕ್ಕೆ ಅನುಮಾನವೇ ಇಲ್ಲ. ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗಳ ಕಮಾಂಡರ್ ಹೇಳಿಕೆ ನೀಡಿದ್ದ ಇತ್ತೀಚಿನ ವಿಡಿಯೊಗಳೇ ಇದಕ್ಕೆ ಸಾಕ್ಷಿ ಎಂದು ಭಾರತವು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯು ಉಗ್ರರೊಂದಿಗೆ ಯಾವ ರೀತಿಯ ಸಂಬಂಧ ಹೊಂದಿದೆ ಎಂದು ಪ್ರಪಂಚಕ್ಕೆ ಅರಿವಿದೆ ಎಂಬುದರಲ್ಲಿ ನಮಗೆ ಸ್ಪಷ್ಟತೆ ಇದೆ. ಗಡಿ ಭಯೋತ್ಪಾದನೆ ಮತ್ತು ಭಯೋತ್ಪಾದನೆ ವಿರುದ್ಧ ನಾವೆಲ್ಲರೂ ಒಟ್ಟಿಗೆ ಹೋರಾಡಬೇಕಿದೆ. ನಮ್ಮ ಈ ಹೋರಾಟಕ್ಕೆ ವಿಶ್ವವೇ ಬೆಂಬಲ ನೀಡಬೇಕೆಂದು ಜೈಸ್ವಾಲ್ ಕರೆ ಕೊಟ್ಟಿದ್ದಾರೆ.

ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದ ಕುರಿತು ಮಾತನಾಡಿದ ಜೈಸ್ವಾಲ್, ಭಾರತವು ಸೌದಿ ಅರೇಬಿಯಾ ಜೊತೆ ಅತ್ಯುತ್ತಮ ಬಾಂಧವ್ಯ ಹೊಂದಿದೆ. ನಮ್ಮ ಮತ್ತು ಸೌದಿ ನಡುವಿನ ಸಂಬಂಧ ವರ್ಷಗಳು ಕಳೆದಂತೆ ಆಳವಾಗಿ ಬೇರೂರಿದೆ. ನಮ್ಮ ಈ ಆಳ ಬಾಂಧವ್ಯವು ಉಭಯ ರಾಷ್ಟ್ರಗಳ ಹಿತಾಸಕ್ತಿಗೆ ಪೂರಕವಾಗಿರಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚಾಬಹಾರ್ ಬಂದರಿಗೆ ವಿಧಿಸಿರುವ ನಿರ್ಬಂಧದ ವಿನಾಯಿತಿಯನ್ನು ರದ್ದುಗೊಳಿಸಿರುವ ಕುರಿತು ಮಾತನಾಡಿ, ಈ ವಿಚಾರದಲ್ಲಿ ಭಾರತಕ್ಕೆ ಯಾವೆಲ್ಲಾ ತೊಡಕುಗಳಿವೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.

ಭಾರತ-ನೇಪಾಳ ಬಾಂಧವ್ಯ

ನೇಪಾಳದ ಪ್ರಸಕ್ತ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ನೇಪಾಳದ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಹಿಮಾಲಯದ ನಾಡಿನಲ್ಲಿ ಮತ್ತೆ ಶಾಂತಿ ನೆಲೆಗೊಳ್ಳಲು ಅಗತ್ಯವಾದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ನೀವು ನೋಡಿರಬಹುದು. ನೇಪಾಳದಲ್ಲಿ ಸುಶೀಲಾ ಕರ್ಕಿ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚಿಸುವುದನ್ನು ನಾವು ಸ್ವಾಗತಿಸಿದ್ದೇವೆ. ಮೋದಿ ಅವರು ಕರ್ಕಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿ, ಶಾಂತಿ ಮತ್ತು ಸ್ಥಿರತೆ ನೆಲೆಸಲು ಅಗತ್ಯವಾದ ಎಲ್ಲಾ ರೀತಿಯ ಬೆಂಬಲವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ನೆರೆಯ ಪ್ರಜಾಪ್ರಭುತ್ವ ದೇಶವಾಗಿರುವ ನೇಪಾಳದಲ್ಲಿ ಸುದೀರ್ಘ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭಾರತ ಕೈಜೋಡಿಸಿದೆ. ಉಭಯ ದೇಶಗಳ ನಾಗರಿಕರ ಉತ್ತಮ ಭವಿಷ್ಯಕ್ಕಾಗಿ ಭಾರತವು ನೇಪಾಳಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದಾರೆ.

'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಲ್ಲಿ ಹತರಾದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗಳ ಸದಸ್ಯರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಬಹವಾಲ್ಪುರ್ ಸೇನಾ ವಿಭಾಗದ ಅಧಿಕಾರಿಗಳು ಭಾಗವಹಿಸಬೇಕೆಂದು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಆದೇಶಿಸಿದ್ದರೆಂದು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಹಿರಿಯ ಕಮಾಂಡರ್ ಇಲಿಯಾಸ್ ಕಾಶ್ಮೀರಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮೊನ್ನೆಯಷ್ಟೇ ವೈರಲ್ ಆಗಿತ್ತು. ಅಲ್ಲದೆ ವಿಡಿಯೋದಲ್ಲಿ 25 ವರ್ಷಗಳ ಬಳಿಕ ಸೇನೆ ಮತ್ತು ನಾವು ಒಗ್ಗಟ್ಟಾಗಿದ್ದೇವೆ ಎಂದು ಉಗ್ರ ಹೇಳಿದ್ದ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಮಿಷನ್ ಮುಸ್ತಫಾ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಉಗ್ರ ಇಲಿಯಾಸ್, ಕಳೆದ ಮೇ 7ರಂದು ಭಾರತ ಸೇನೆ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಿಂದ ಆದ ಸಾವು-ನೋವುಗಳ ಬಗ್ಗೆ ಪ್ರಸ್ತಾಪಿಸಿ, ಪಾಕಿಸ್ತಾನ ಸರ್ಕಾರವು ಇದೀಗ ನಮ್ಮ ಜಿಹಾದಿ ತತ್ವದೊಂದಿಗೆ ಕೈಜೋಡಿಸಿದೆ ಎಂದು ಘೋಷಿಸಿದ್ದ.

ಇದಕ್ಕೂ ಮೊದಲು ಮಾತನಾಡಿದ್ದ ಉಗ್ರ, ಭಾರತದ ಸೇನಾ ಕಾರ್ಯಾಚರಣೆಯಿಂದ ನಾವು ಸಾಕಷ್ಟು ನಷ್ಟವನ್ನು ಅನುಭವಿಸಿದೆವು. ಕಾರ್ಯಾಚರಣೆಯಲ್ಲಿ ಅಜರ್ ಅವರ ಇಡೀ ಕುಟುಂಬ ಛಿದ್ರಛಿದ್ರವಾಯಿತು. ಪಾಕಿಸ್ತಾನದ ಭೌಗೋಳಿಕತೆ ಹಾಗೂ ಸಿದ್ಧಾಂತವನ್ನು ಕಾಪಾಡಲು ನಮ್ಮ ಸಂಘಟನೆ ದೆಹಲಿ, ಕಂದಹಾರ್ ಹಾಗೂ ಕಾಬೂಲ್ ಮೇಲೆ ಹಲವು ಬಾರಿ ದಾಳಿ ಮಾಡಿದೆ. ಬೆದರಿಕೆಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ನಮ್ಮ ಸಂಘಟನೆ ಈಗಲೂ ಬದ್ಧವಿದೆ ಎಂದಿದ್ದ.

Tags:    

Similar News