Iran war: A major blow to already struggling Indian airlines
x

ಜಗತ್ತಿನ ಪ್ರವೇಶ ದ್ವಾರದಂತಿರುವ ದುಬೈ ವಿಮಾನ ನಿಲ್ದಾಣದಲ್ಲಿ ಇದೀಗ ಯುದ್ಧದ ಕಾರ್ಮೋಡ ಕವಿದಿದೆ.  

ಇರಾನ್ ಯುದ್ಧ: ಈಗಾಗಲೇ ಸಂಕಷ್ಟದಲ್ಲಿರುವ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಭಾರೀ ಹೊಡೆತ

ಈ ಹಿಂದೆ ಪಶ್ಚಿಮ ಏಷ್ಯಾದ ಕಿರಿದಾದ ಕಾರಿಡಾರ್‌ಗಳನ್ನು ಬಳಸುತ್ತಿದ್ದ ಭಾರತ-ಯುರೋಪ್ ಮತ್ತು ಭಾರತ-ಅಮೆರಿಕ ವಿಮಾನಗಳು ಈಗ ಪರ್ಯಾಯ ದೀರ್ಘ ಮಾರ್ಗಗಳಲ್ಲಿ ಸಾಗಬೇಕಿದೆ.


Click the Play button to hear this message in audio format

ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಸಾರಿರುವ ಯುದ್ಧವು ಭಾರತೀಯ ವಿಮಾನಯಾನ ವಲಯಕ್ಕೆ ಭಾರಿ ಹೊಡೆತ ನೀಡಿದೆ. ಪಶ್ಚಿಮ ಏಷ್ಯಾದಾದ್ಯಂತ ಪ್ರಮುಖ ವಾಯುಪ್ರದೇಶಗಳನ್ನು ಮುಚ್ಚಿರುವುದರಿಂದ, ಭಾರತೀಯ ವಿಮಾನಯಾನ ಸಂಸ್ಥೆಗಳು ಒಂದೇ ದಿನದಲ್ಲಿ ಪಶ್ಚಿಮ ಏಷ್ಯಾಗೆ ತೆರಳುವ ಸುಮಾರು 180 ವಿಮಾನಗಳ ಹಾರಾಟವನ್ನು ದಿಢೀರ್ ರದ್ದುಗೊಳಿಸಿವೆ.

2026ರ ಹಣಕಾಸು ವರ್ಷದಲ್ಲಿ ಈಗಾಗಲೇ ಅಂದಾಜು 17,000-18,000 ಕೋಟಿ ರೂಪಾಯಿ ನಷ್ಟದ ಸುಳಿಗೆ ಸಿಲುಕಿದ್ದ ವಿಮಾನಯಾನ ವಲಯಕ್ಕೆ ಈ ಯುದ್ಧವು ಹೊಸ ಸಂಕಷ್ಟ ತಂದೊಡ್ಡಿದೆ. ಬಿಕ್ಕಟ್ಟು ಇನ್ನಷ್ಟು ವಾರಗಳ ಕಾಲ ಮುಂದುವರಿದರೆ ವಿಮಾನಯಾನ ಸಂಸ್ಥೆಗಳು ನೂರಾರು ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚ ಮತ್ತು ಆದಾಯ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಕಳೆದ ವರ್ಷ ಸಂಭವಿಸಿದ ಪ್ರಮುಖ ಅಪಘಾತಗಳು ಮತ್ತು ಪೈಲಟ್ ಬಿಕ್ಕಟ್ಟುಗಳಿಂದಾಗಿ ಭಾರತೀಯ ಸಂಸ್ಥೆಗಳು ಈಗಾಗಲೇ ಭಾರಿ ಒತ್ತಡದಲ್ಲಿದ್ದವು. ಇದೀಗ ಭಾರತ-ಯುಎಇ (UAE) ಮಾರ್ಗವು ನೇರವಾಗಿ ಸಂಘರ್ಷದ ವಲಯದ ಮಧ್ಯದಲ್ಲೇ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ವಾಯುಪ್ರದೇಶವನ್ನು ಮತ್ತೆ ತೆರೆಯುವ ಬಗ್ಗೆ ಯಾವುದೇ ಸ್ಪಷ್ಟ ಕಾಲಮಿತಿ ಇಲ್ಲದಿರುವುದರಿಂದ, ವಿಮಾನಯಾನ ಸಂಸ್ಥೆಗಳು ಇಂಧನ ವೆಚ್ಚ, ಸಿಬ್ಬಂದಿ ವೇಳಾಪಟ್ಟಿ ಮತ್ತು ಪ್ರಯಾಣಿಕರ ಹಣ ಮರುಪಾವತಿಯನ್ನು ಮರುಲೆಕ್ಕಾಚಾರ ಮಾಡುತ್ತಿವೆ.

ಅತ್ಯಂತ ಜನನಿಬಿಡ ಮಾರ್ಗಕ್ಕೆ ಅಡೆತಡೆ

ಇರಾನ್ ಮತ್ತು ಹಲವಾರು ಗಲ್ಫ್ ವಾಯುಪ್ರದೇಶಗಳು ಪ್ರವೇಶಕ್ಕೆ ಅಸಾಧ್ಯವಾಗಿರುವುದರಿಂದ, ಈ ಹಿಂದೆ ಪಶ್ಚಿಮ ಏಷ್ಯಾದ ಕಿರಿದಾದ ಕಾರಿಡಾರ್‌ಗಳನ್ನು ಬಳಸುತ್ತಿದ್ದ ಭಾರತ-ಯುರೋಪ್ ಮತ್ತು ಭಾರತ-ಅಮೆರಿಕ ವಿಮಾನಗಳು ಈಗ ಪರ್ಯಾಯ ದೀರ್ಘ ಮಾರ್ಗಗಳಲ್ಲಿ ಸಾಗಬೇಕಿದೆ. ಇದರಿಂದ ವಿಮಾನಗಳ ಹಾರಾಟದ ಸಮಯ ಗಣನೀಯವಾಗಿ ಹೆಚ್ಚಾಗಲಿದೆ. ವಲಸೆ ಕಾರ್ಮಿಕರು, ಉದ್ಯಮಿಗಳು ಮತ್ತು ಪ್ರವಾಸಿಗರನ್ನು ಹೊತ್ತೊಯ್ಯುವ ಭಾರತ-ಗಲ್ಫ್ ಕಾರಿಡಾರ್ ಅತ್ಯಂತ ಜನನಿಬಿಡ ಮಾರ್ಗವಾಗಿದೆ. ಇದೀಗ ಭಾರತ-ಯುಎಇ ನಡುವಿನ ಬಹುತೇಕ ಎಲ್ಲಾ ವಿಮಾನಗಳು ರದ್ದಾಗಿರುವುದರಿಂದ ಅಥವಾ ವಿಳಂಬವಾಗಿರುವುದರಿಂದ ಈ ಪ್ರಮುಖ ಸಂಪರ್ಕ ಕೊಂಡಿ ತಾತ್ಕಾಲಿಕವಾಗಿ ಕಡಿತಗೊಂಡಿದೆ.

ಇರಾನ್‌ನ ದಾಳಿಗೆ ಒಳಗಾಗುತ್ತಿರುವ ದುಬೈ ನಗರವು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಪ್ರಮುಖ ಕೇಂದ್ರವಾಗಿದೆ. ಸಾರಿಗೆ, ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನೇ ಅವಲಂಬಿಸಿರುವ ದುಬೈನ ಮೇಲೆ ಪದೇ ಪದೇ ನಡೆಯುತ್ತಿರುವ ದಾಳಿಗಳು ವ್ಯಾಪಾರ ಮತ್ತು ವಾಣಿಜ್ಯದ ಪ್ರಮುಖ ಹೆಬ್ಬಾಗಿಲು ಎಂಬ ಅದರ ಜಾಗತಿಕ ಸ್ಥಾನಮಾನದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ರಚನಾತ್ಮಕ ಬದಲಾವಣೆಗಳು

ಮುಂದಿನ ದಿನಗಳಲ್ಲಿ ಭಾರತೀಯರು ಪಶ್ಚಿಮದ ದೇಶಗಳಿಗೆ ಪ್ರಯಾಣಿಸುವ ರೀತಿಯಲ್ಲಿ ರಚನಾತ್ಮಕ ಬದಲಾವಣೆಗಳು ಕಂಡುಬರಬಹುದು. ಗಲ್ಫ್ ರಾಷ್ಟ್ರಗಳ ಮೇಲಿನ ಅವಲಂಬನೆ ಕಡಿಮೆಯಾಗಿ, ಯುರೋಪ್ ಅಥವಾ ಆಗ್ನೇಯ ಏಷ್ಯಾದ ಪರ್ಯಾಯ ಹಬ್‌ಗಳ ಬಳಕೆ ಹೆಚ್ಚಾಗಬಹುದು. ವಿಮಾನಗಳು ದೀರ್ಘ ಮಾರ್ಗಗಳಲ್ಲಿ ಸಂಚರಿಸುವುದರಿಂದ ಇಂಧನ ಬಳಕೆ ಹೆಚ್ಚಾಗಲಿದೆ, ಸಿಬ್ಬಂದಿಗಳ ಕೆಲಸದ ಅವಧಿಯ ಮೇಲೆ ಒತ್ತಡ ಬೀಳಲಿದೆ. ಇದು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆ ವೆಚ್ಚವನ್ನು ಹೆಚ್ಚಿಸಲಿದ್ದು, ಅನಿವಾರ್ಯವಾಗಿ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ದರಗಳು ದುಬಾರಿಯಾಗಲಿವೆ.

ಗಗನಕ್ಕೇರುತ್ತಿರುವ ತೈಲ ಬೆಲೆ

ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಅಡೆತಡೆ ಉಂಟಾದರೂ ಅದು ಜಾಗತಿಕ ತೈಲ ಬೆಲೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಎಚ್ಚರಿಸಿದ್ದಾರೆ. ಭಾರತದ ಕಚ್ಚಾ ತೈಲ ಆಮದಿನ ಬಹುಪಾಲು (ದಿನಕ್ಕೆ ಸುಮಾರು 2.6 ಮಿಲಿಯನ್ ಬ್ಯಾರೆಲ್‌ಗಳು) ಮತ್ತು ಶೇ. 54ರಷ್ಟು ಎಲ್‌ಎನ್‌ಜಿ (LNG) ಇದೇ ಮಾರ್ಗವಾಗಿ ಬರುತ್ತದೆ. ಈಗಾಗಲೇ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 65 ಡಾಲರ್‌ನಿಂದ 73 ಡಾಲರ್‌ಗೆ ಏರಿಕೆಯಾಗಿದ್ದು, ಶೀಘ್ರದಲ್ಲೇ 100 ಡಾಲರ್ ಗಡಿ ದಾಟುವ ಆತಂಕವಿದೆ. ವಿಮಾನಯಾನ ಇಂಧನ (ATF) ವೆಚ್ಚವು ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣೆ ವೆಚ್ಚದ ಶೇ. 35-40 ರಷ್ಟಿರುತ್ತದೆ. ಹೀಗಾಗಿ ತೈಲ ಬೆಲೆ ಏರಿಕೆಯು ವಿಮಾನಯಾನ ಸಂಸ್ಥೆಗಳ ಲಾಭದ ಅಂತರವನ್ನು ತಗ್ಗಿಸಲಿದೆ.

ಡಿಜಿಸಿಎ (DGCA) ನಿರ್ದೇಶನ

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಶ್ಚಿಮ ಏಷ್ಯಾದ 11 ಫ್ಲೈಟ್ ಇನ್ಫರ್ಮೇಷನ್ ರೀಜನ್‌ಗಳನ್ನು (FIR) ಬಳಸದಂತೆ ಮಾರ್ಚ್ 2, 2026 ರವರೆಗೆ ಕಟ್ಟುನಿಟ್ಟಿನ ಸುರಕ್ಷತಾ ಎಚ್ಚರಿಕೆ ನೀಡಿದೆ. ಟೆಹ್ರಾನ್ (ಇರಾನ್), ಟೆಲ್ ಅವಿವ್ (ಇಸ್ರೇಲ್), ಬೈರುತ್ (ಲೆಬನಾನ್), ಜೆಡ್ಡಾ (ಸೌದಿ ಅರೇಬಿಯಾ), ಬಹ್ರೇನ್, ಮಸ್ಕತ್ (ಒಮಾನ್), ಬಾಗ್ದಾದ್ (ಇರಾಕ್), ಅಮ್ಮಾನ್ (ಜೋರ್ಡಾನ್), ಕುವೈತ್, ಎಮಿರೇಟ್ಸ್ (ಯುಎಇ) ಮತ್ತು ದೋಹಾ (ಕತಾರ್) ವಾಯುಪ್ರದೇಶಗಳಲ್ಲಿ ವಿಮಾನ ಹಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇದು ಅಲ್ಪಾವಧಿಯ ಹವಾಮಾನ ವೈಪರೀತ್ಯವಲ್ಲ, ಬದಲಿಗೆ ಅತ್ಯಂತ ಅಪಾಯಕಾರಿ ವಾಯು ರಕ್ಷಣಾ ಪರಿಸ್ಥಿತಿ ಎಂದು ಡಿಜಿಸಿಎ ಪರಿಗಣಿಸಿದೆ.

ಅತಂತ್ರರಾದ ಸಾವಿರಾರು ಪ್ರಯಾಣಿಕರು

ಏರ್ ಇಂಡಿಯಾ, ಇಂಡಿಗೊ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಸ್ಪೈಸ್‌ಜೆಟ್ ಸೇರಿದಂತೆ ಪ್ರಮುಖ ಸಂಸ್ಥೆಗಳು ದುಬೈ, ಅಬುಧಾಬಿ, ಶಾರ್ಜಾ, ದೋಹಾ, ಮಸ್ಕತ್ ಮತ್ತು ಜೆಡ್ಡಾಗೆ ತೆರಳುವ ಬಹುತೇಕ ವಿಮಾನಗಳನ್ನು ರದ್ದುಗೊಳಿಸಿವೆ. ಇದರಿಂದಾಗಿ ಹತ್ತಾರು ಸಾವಿರ ಪ್ರಯಾಣಿಕರು ಅತಂತ್ರರಾಗಿದ್ದಾರೆ. ಏರ್ ಇಂಡಿಯಾ ಸಂಸ್ಥೆಯು ಲಂಡನ್‌ನ ಹೀಥ್ರೂ, ಆಮ್ಸ್ಟರ್‌ಡ್ಯಾಮ್, ಫ್ರಾಂಕ್‌ಫರ್ಟ್ ಮತ್ತು ಕೋಪನ್‌ಹೇಗನ್‌ಗೆ ತೆರಳುವ ವಿಮಾನಗಳನ್ನೂ ರದ್ದುಗೊಳಿಸಿದೆ. ದಿನಕ್ಕೆ ಸುಮಾರು 110 ಗಲ್ಫ್ ವಿಮಾನಗಳನ್ನು ನಿರ್ವಹಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್, ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಎಮಿರೇಟ್ಸ್, ಇತಿಹಾದ್‌ನಂತಹ ಗಲ್ಫ್ ವಿಮಾನಯಾನ ಸಂಸ್ಥೆಗಳೂ ತಮ್ಮ ಹಾರಾಟವನ್ನು ಕಡಿತಗೊಳಿಸಿವೆ. ಇದು ಕೇವಲ ವಿಮಾನ ಸಂಚಾರದ ಮೇಲಷ್ಟೇ ಅಲ್ಲದೆ, ವಲಸೆ ಕಾರ್ಮಿಕರು, ವ್ಯಾಪಾರಸ್ಥರ ಓಡಾಟ ಮತ್ತು ವೈದ್ಯಕೀಯ ಪ್ರವಾಸೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರಲಿದೆ.

Read More
Next Story