Employees union opposes mandatory TET for serving teachers: Employees union begins signature collection
x

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.‌ ಷಡಾಕ್ಷರಿ

ಹಾಲಿ ಶಿಕ್ಷಕರಿಗೆ 'ಟಿಇಟಿ' ಕಡ್ಡಾಯಕ್ಕೆ ವಿರೋಧ: ನೌಕರರ ಸಂಘದಿಂದ ಸಹಿ ಸಂಗ್ರಹ

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಸೇವೆಯಲ್ಲಿರುವ ಶಿಕ್ಷಕರು ಕೂಡ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಒಂದು ವೇಳೆ ಪಾಸಾಗದಿದ್ದರೆ ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ.


Click the Play button to hear this message in audio format

ಸೇವಾ ನಿರತ ಶಿಕ್ಷಕರಿಗೂ 'ಶಿಕ್ಷಕರ ಅರ್ಹತಾ ಪರೀಕ್ಷೆ' (ಟಿಇಟಿ) ಕಡ್ಡಾಯಗೊಳಿಸಿರುವ ಆದೇಶವನ್ನು ಪ್ರಶ್ನಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಆದೇಶದಿಂದ ರಾಜ್ಯದ ಸುಮಾರು 70 ರಿಂದ 80 ಸಾವಿರ ಶಿಕ್ಷಕರ ಉದ್ಯೋಗಕ್ಕೆ ಕಂಟಕ ಎದುರಾಗುವ ಸಾಧ್ಯತೆಯಿದ್ದು, ಇದನ್ನು ವಿರೋಧಿಸಿ ರಾಜ್ಯಾದ್ಯಂತ ಸಹಿ ಸಂಗ್ರಹ ಚಳವಳಿ ಆರಂಭಿಸಲಾಗಿದೆ.

ಈ ಬಗ್ಗೆ ದ ಫೆಡರಲ್ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, "ಯಾವುದೋ ಒಂದು ರಾಜ್ಯದ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಆದರೆ ಇದು ನಮ್ಮ ರಾಜ್ಯದ ಸಾವಿರಾರು ಶಿಕ್ಷಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಉದ್ಯೋಗ ಕಳೆದುಕೊಳ್ಳುವ ಭೀತಿ

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಸೇವೆಯಲ್ಲಿರುವ ಶಿಕ್ಷಕರು ಕೂಡ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಒಂದು ವೇಳೆ ಪಾಸಾಗದಿದ್ದರೆ ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. "ನಮ್ಮಲ್ಲಿ ಈಗಾಗಲೇ ಸೇವೆಯಲ್ಲಿರುವ 70-80 ಸಾವಿರ ಶಿಕ್ಷಕರು ಟಿಇಟಿ ಪಾಸಾಗಿಲ್ಲ. ಅವರೆಲ್ಲರನ್ನೂ ಈಗ ಪರೀಕ್ಷೆ ಬರೆಸಿ, ಪಾಸಾಗದಿದ್ದರೆ ಕೆಲಸದಿಂದ ತೆಗೆಯುವುದು ಎಷ್ಟು ಸರಿ?" ಎಂದು ಷಡಾಕ್ಷರಿ ಪ್ರಶ್ನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಸಂಘವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಗೆ ಅಂಗೀಕಾರವಾಗಿದೆ . ನುರಿತ ವಕೀಲರೊಂದಿಗೆ ಚರ್ಚಿಸಿ, ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಶಿಕ್ಷಕರ ಬೇಡಿಕೆಗಳೇನು?

1. ವಿನಾಯಿತಿ ನೀಡಿ: ಈಗಾಗಲೇ ಸೇವೆಯಲ್ಲಿರುವ ಹಾಲಿ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು.

2. ಹೊಸಬರಿಗೆ ಮಾತ್ರ ಕಡ್ಡಾಯ ಮಾಡಿ: ಹೊಸದಾಗಿ ನೇಮಕವಾಗುವ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಹಳೆಯಬರಿಗೆ ಈ ನಿಯಮ ಹೇರಬಾರದು.

ಸಂಘವು ರಾಜ್ಯಾದ್ಯಂತ ಶಿಕ್ಷಕರಿಂದ ಸಹಿ ಸಂಗ್ರಹ ಚಳವಳಿಯನ್ನು ಹಮ್ಮಿಕೊಂಡಿದ್ದು, ಈ ಮೂಲಕ ಸರ್ಕಾರದ ಮತ್ತು ನ್ಯಾಯಾಲಯದ ಗಮನ ಸೆಳೆಯಲು ಮುಂದಾಗಿದೆ. "ಒಳ್ಳೆಯ ವಕೀಲರ ಮೂಲಕ ವಾದ ಮಂಡಿಸಿ, ಶಿಕ್ಷಕರಿಗೆ ನ್ಯಾಯ ಒದಗಿಸಲು ನಾವು ಬದ್ಧರಾಗಿದ್ದೇವೆ," ಎಂದು ಷಡಾಕ್ಷರಿ ಭರವಸೆ ನೀಡಿದ್ದಾರೆ.

Read More
Next Story