ಟಿಎಂಸಿ ಯುವಜನರ ಭವಿಷ್ಯದ ಜೊತೆ ಆಟವಾಡುತ್ತಿದೆ: ಮೋದಿ ವಾಗ್ದಾಳಿ

Update: 2024-04-26 08:40 GMT

ಏಪ್ರಿಲ್‌ 26- ಟಿಎಂಸಿಯ ʻಕಟಾವು ಮತ್ತು ಕಮಿಷನ್ʼ ಸಂಸ್ಕೃತಿಯಿಂದ ಪಶ್ಚಿಮ ಬಂಗಾಳದ ಯುವಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟಿಎಂಸಿ ಸರ್ಕಾರ ವಂಚನೆಗೆ ಸಮಾನಾರ್ಥಕ ಪದ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. 

ಮಾಲ್ಡಾದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಮಾತನಾಡಿ, ʻಟಿಎಂಸಿ ನಾಯಕರಿಗೆ ಲಂಚ ನೀಡಲು ಸಾಲ ಮಾಡಿದ ಯುವಜನರು ಈಗ ಹೊರೆ ಹೊರಬೇಕಾಗಿ ಬಂದಿದೆ. ಟಿಎಂಸಿ ಹಗರಣಗಳಲ್ಲಿ ತೊಡಗಿರುವುದರಿಂದ, ರಾಜ್ಯದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಪಕ್ಷ ಬಂಗಾಳದ ಯುವಜನರ ಭವಿಷ್ಯದ ಜೊತೆ ಆಟವಾಡುತ್ತಿದೆʼ ಎಂದು ಹೇಳಿದರು. 

ಹಗರಣಗಳ ಸರ್ಕಾರ: ʻಶಿಕ್ಷಕರ ನೇಮಕ ಹಗರಣವು ಸುಮಾರು 26,000 ಕುಟುಂಬಗಳ ಜೀವನೋಪಾಯವನ್ನು ಕಿತ್ತುಕೊಂಡಿದೆ. ಟಿಎಂಸಿ ಆಡಳಿತದಲ್ಲಿ ಇರುವುದು ಸಾವಿರಾರು ಕೋಟಿ ರೂ. ಹಗರಣಗಳು ಮಾತ್ರ. ಅಪರಾಧಿ ಟಿಎಂಸಿಯಾದರೂ, ಇಡೀ ರಾಜ್ಯ ಅದರ ಫಲವನ್ನು ಬಲವಂತವಾಗಿಯಾದರೂ ಪಾವತಿಸ ಬೇಕಾಗಿ ಬಂದಿದೆʼ ಎಂದು ಹೇಳಿದರು. 

ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು/ಬೋಧಕೇತರ ಸಿಬ್ಬಂದಿ ಆಯ್ಕೆಗೆ ನಡೆದ ಆಯ್ಕೆ ಪರೀಕ್ಷೆ(ಎಸ್‌ಎಲ್‌ಎಸ್‌ಟಿ)ಯನ್ನು ಕಲ್ಕತ್ತಾ ಹೈಕೋರ್ಟ್ ಅನೂರ್ಜಿತಗೊಳಿಸಿತ್ತು. ಆ ಮೂಲಕ ಮಾಡಿದ ಎಲ್ಲ ನೇಮಕಗಳನ್ನು ರದ್ದುಗೊಳಿಸುವಂತೆ ಆದೇಶಿಸಿತ್ತು.

ಅಪಪ್ರಚಾರ: ʻಕಾಂಗ್ರೆಸ್ ಮತ್ತು ಟಿಎಂಸಿ, ಸಿಎಎ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ಕಾಯ್ದೆ ಪೌರತ್ವವನ್ನು ನೀಡುವುದೇ ಹೊರತು ಕಸಿದುಕೊಳ್ಳುವುದಿಲ್ಲ. ಈ ಎರಡು ಪಕ್ಷಗಳ ನಡುವೆ ತುಷ್ಟೀಕರಣದ ಸ್ಪರ್ಧೆ ನಡೆಯುತ್ತಿದೆ. ಕಾಂಗ್ರೆಸ್ ನಿಮ್ಮ ಆಸ್ತಿಯನ್ನು ಕಬಳಿಸಲು ಬಯಸುತ್ತಿದ್ದು, ಟಿಎಂಸಿ ಇದರ ವಿರುದ್ಧ ಒಂದೇ ಒಂದು ಮಾತು ಆಡುತ್ತಿಲ್ಲ. ರಾಜ್ಯ ಸರ್ಕಾರ ಬಾಂಗ್ಲಾದೇಶಿ ನುಸುಳುಕೋರರು ಬಂಗಾಳದಲ್ಲಿ ನೆಲೆಗೊಳಿಸಲು ಕೆಲಸ ಮಾಡುತ್ತಿದೆ; ಕಾಂಗ್ರೆಸ್ ನಿಮ್ಮ ಸಂಪತ್ತನ್ನು ಅವರಿಗೆ ಹಂಚುವ ಬಗ್ಗೆ ಮಾತನಾಡುತ್ತಿದೆ,ʼಎಂದು ಅವರು ಹೇಳಿದರು.

Tags:    

Similar News