ರಾಜ್ಯಪಾಲೆ ತಮಿಳಿಸೈ ಸೌಂದರಾಜನ್‌ ರಾಜೀನಾಮೆ

Update: 2024-03-18 06:29 GMT

ತಮಿಳಿಸೈ ಸೌಂದರರಾಜನ್ ಅವರು ತೆಲಂಗಾಣದ ಗವರ್ನರ್ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪುದುಚೇರಿಯ ರಾಜಭವನ ಸುದ್ದಿಯನ್ನು ಖಚಿತಪಡಿಸಿದೆ.

ಅವರು ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಅವರು ರಾಜೀನಾಮೆಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿದ್ದಾರೆ. ಹೈದರಾಬಾದ್‌ನ ರಾಜಭವನದಿಂದ ಈವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ಈ ತಿಂಗಳ ಆರಂಭದಲ್ಲಿ ಫೆಡರಲ್‌ ಗೆ ನೀಡಿದ ಸಂದರ್ಶನದಲ್ಲಿ, ಚುನಾವಣಾ ರಾಜಕೀಯಕ್ಕೆ ಹಿಂತಿರುಗುತ್ತೀರಾ? ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ʻಇದು ದೇವರಿಗೆ ಬಿಟ್ಟದ್ದುʼ ಎಂದು ಪ್ರತಿಕ್ರಿಯಿಸಿದ್ದರು. 

2019ರವರೆಗೆ ಬಿಜೆಪಿಯ ತಮಿಳುನಾಡು ಘಟಕದ ನೇತೃತ್ವ ವಹಿಸಿದ್ದ ತಮಿಳಿಸೈ ಅವರನ್ನು ಸೆಪ್ಟೆಂಬರ್ 2019 ರಲ್ಲಿ ತೆಲಂಗಾಣ ರಾಜ್ಯಪಾಲರಾಗಿ ನೇಮಿಸಲಾಯಿತು. ಪುದುಚೇರಿಯಲ್ಲಿ ಕಿರಣ್ ಬೇಡಿ ಬದಲು ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಹಿರಿಯ ಕಾಂಗ್ರೆಸ್ಸಿಗ ಕುಮಾರಿ ಅನಂತನ್ ಅವರ ಪುತ್ರಿ ತಮಿಳಿಸೈ, ವೃತ್ತಿಯಲ್ಲಿ ವೈದ್ಯೆ. ಎರಡು ದಶಕಗಳಿಂದ ಬಿಜೆಪಿಯಲ್ಲಿದ್ದು, 2019 ರ ಲೋಕಸಭೆ ಚುನಾವಣೆಯಲ್ಲಿ ತೂತುಕುಡಿಯಿಂದ ಸ್ಪರ್ಧಿಸಿದ್ದರು. ಡಿಎಂಕೆ ನಾಯಕಿ ಕನಿಮೋಳಿ ವಿರುದ್ಧ ಸೋಲುಂಡರು.

Tags:    

Similar News