ಕುಸುಮ್-ಸಿ ಯೋಜನೆಯಿಂದ ರೈತರಿಗೆ ಹಗಲಲ್ಲೂ ವಿದ್ಯುತ್, ನಾಳೆ ಸಿಎಂ ಚಾಲನೆ: ಸಚಿವ ಕೆ.ಜೆ. ಜಾರ್ಜ್
ಕುಸುಮ್-ಸಿ ಯೋಜನೆಯ ಮೂಲಕ ಡಿಸೆಂಬರ್ ವೇಳೆಗೆ 2,400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು ಪ್ರತಿ ಮೆಗಾ ವ್ಯಾಟ್ ಉತ್ಪಾದನೆಗೆ ಮೂರರಿಂದ ನಾಲ್ಕು ಕೋಟಿ ರೂ. ವೆಚ್ಚವಾಗಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.;
ಇಂಧನ ಸಚಿವ ಕೆ.ಜೆ. ಜಾರ್ಜ್
ರೈತರ ಪಂಪ್ಸೆಟ್ಗಳಿಗೆ ಕೇವಲ ರಾತ್ರಿ ವೇಳೆ ಮಾತ್ರ ವಿದ್ಯುತ್ ಸರಬರಾಜು ಮಾಡುತ್ತಿದ್ದ ರಾಜ್ಯ ಸರ್ಕಾರ ಇನ್ನು ಮುಂದೆ ಹಗಲಿನಲ್ಲಿಯೂ ವಿದ್ಯುತ್ ಪೂರೈಸಲಿದ್ದು ಈ ಯೋಜನೆಗೆ ಬುಧವಾರ (ಜೂ.11) ದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರಿಬಿದನೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಮಾಹಿತಿ ನೀಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಸುಮ್-ಸಿ ಯೋಜನೆಯ ಮೂಲಕ ಡಿಸೆಂಬರ್ ವೇಳೆಗೆ 2,400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು ಪ್ರತಿ ಮೆಗಾ ವ್ಯಾಟ್ ಉತ್ಪಾದನೆಗೆ ಮೂರರಿಂದ ನಾಲ್ಕು ಕೋಟಿ ರೂ. ವೆಚ್ಚವಾಗಲಿದೆ. ಈ ಪೈಕಿ ಒಂದು ಕೋಟಿ ರೂ. ಕೇಂದ್ರ ಸರ್ಕಾರ ನೀಡುತ್ತದೆ. ಟೆಂಡರ್ ಕರೆದು 2,400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಘಟಕಗಳ ಅಳವಡಿಕೆಗೆ ನಿರ್ಧರಿಸಿದ್ದು 10,000 ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆಯಿದೆ ಎಂದು ಹೇಳಿದರು.
ಸೋಲಾರ್ ಘಟಕಗಳ ಸ್ಥಾಪನೆ
ಕುಸುಮ್-ಸಿ ಯೋಜನೆಯಡಿ ನೀರಾವರಿಗೆ ವಿದ್ಯುತ್ ಪೂರೈಸುವ ಫೀಡರ್ಗಳ ಬಳಿ ಸೋಲಾರ್ ಘಟಕಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸಲಾಗುವುದು. ಬಳಿಕ ಅಲ್ಲಿಂದ ಫೀಡರ್ಗಳ ಮೂಲಕ ರೈತರ ಕೃಷಿ ಪಂಪ್ಸೆಟ್ಗಳಿಗೆ ಒದಗಿಸಲಾಗುವುದು. ಸ್ಥಳೀಯವಾಗಿಯೇ ವಿದ್ಯುತ್ ಉತ್ಪಾದಿಸಿ ಪೂರೈಸುವುದರಿಂದ ಗುಣಮಟ್ಟದ ವಿದ್ಯುತ್ ಲಭ್ಯವಾಗುತ್ತದೆ. ಇದರಿಂದ ಟ್ರಾನ್ಸ್ಫಾರ್ಮರ್ಗಳ ಮೇಲಿನ ಹೊರೆಯು ತಗ್ಗುತ್ತದೆ ಎಂದರು.
60 ಎಕರೆ ಖಾಸಗಿ ಜಮೀನು ಭೋಗ್ಯಕ್ಕೆ
ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿ ಮತ್ತು ಚರಕಮಟ್ಟೇನಹಳ್ಳಿಯ ಸುಮಾರು 60 ಎಕರೆ ಪ್ರದೇಶದಲ್ಲಿ 20 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಸ್ಥಾಪಿಸಲಾಗಿದ್ದು ಪ್ರಸ್ತುತ ಕುಸುಮ್ - ಸಿ ಯೋಜನೆಯಡಿ ಸ್ಥಾಪಿಸಲಾಗಿರುವ ರಾಜ್ಯದ ಅತಿದೊಡ್ಡ ಘಟಕವಾಗಿದ್ದು ಖಾಸಗಿ ಜಮೀನನ್ನು 25 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
6.19 ಲಕ್ಷ ಪಂಪ್ಸೆಟ್ಗಳಿಗೆ ವಿದ್ಯುತ್
2,400 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯಿಂದ 6.19 ಲಕ್ಷ ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬಹುದು. ಡಿಸೆಂಬರ್ ವೇಳೆಗೆ ಪೂರ್ಣ ಪ್ರಮಾಣದ ಗುರಿ ತಲುಪಲಾಗುವುದು. ಖಾಸಗಿ ಸೌರ ಘಟಕಗಳಿಂದಲೂ ಕೆಇಆರ್ಸಿ ನಿಗದಿಪಡಿಸಿರುವಂತೆ ಪ್ರತಿ ಯೂನಿಟ್ಗೆ 3.17 ರೂ. ನಂತೆ ವಿದ್ಯುತ್ ಖರೀದಿಸಲಾಗುವುದು ಎಂದರು
ಏನಿದು ಕುಸುಮ್ ಯೋಜನೆ
ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನವನ್ನು(ಕುಸುಮ್) ಪ್ರಾರಂಭಿಸಿತು, ಇದನ್ನು ಪಿಎಂ ಕುಸುಮ್ ಯೋಜನೆ ಎಂದೂ ಕರೆಯುತ್ತಾರೆ. ರೈತರು ಹೆಚ್ಚಿನ ಭದ್ರತೆಯನ್ನು ಸಾಧಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದ ಅನುಷ್ಠಾನದೊಂದಿಗೆ, 2030 ರ ವೇಳೆಗೆ ಭಾರತವು ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ನ ಪಾಲನ್ನು ಶೇ.40 ವರೆಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮವು ಭಾರತೀಯ ರೈತರಿಗೆ ರಿಯಾಯಿತಿ ಬೆಲೆಯಲ್ಲಿ ಸೌರ ನೀರಾವರಿ ಪಂಪ್ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ, ಇದು ರೈತರು ಡೀಸೆಲ್ ಚಾಲಿತ ಗ್ರಿಡ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಇದರ ಜತೆಗೆ, ಭಾರತ ಸರ್ಕಾರವು ವರ್ಷಾಂತ್ಯದ ವೇಳೆಗೆ 25,750 ಮೆಗಾವ್ಯಾಟ್ ಸಾಮರ್ಥ್ಯದ ಸೌರಶಕ್ತಿಯನ್ನು ಸ್ಥಾಪಿಸುವ ಗುರಿ ಹೊಂದಿದ್ದು ರೈತರ ಅನುಕೂಲಕ್ಕಾಗಿ 34,422 ಕೋಟಿ ರೂ. ಹೂಡಿಕೆ ಮಾಡಲು ಸಿದ್ಧವಾಗಿದೆ.