ಅನರ್ಹ ಪಡಿತರ ಚೀಟಿದಾರರಿಗೆ ಕಾದಿದೆ ಸಂಕಷ್ಟ : ಜೂ 30ರೊಳಗೆ ಆಧಾರ್ ಜೋಡಣೆ, ಇ-ಕೆವೈಸಿ ಕಡ್ಡಾಯ

ಪಡಿತರ ಫಲಾನುಭವಿಗಳು ಬಯೋಮೆಟ್ರಿಕ್‌ ನೀಡುವಾಗ ಬೆರಳಿನಲ್ಲಿರುವ ರೇಖೆಗಳು ಮುದ್ರಣವಾಗದಿದ್ದಲ್ಲಿ ಅಂತಹ ಪಡಿತರ ಫಲಾನುಭವಿಗಳ ಹೆಸರನ್ನು ಪಟ್ಟಿ ಮಾಡಿ ಭೌತಿಕವಾಗಿ ಪರಿಶೀಲಿಸಿ ವಿನಾಯಿತಿ ನೀಡುವಂತೆ ಆಹಾರ ಇಲಾಖೆ ಕಾರ್ಯದರ್ಶಿ ಮನೋಜ್‌ ಜೈನ್ ತಿಳಿಸಿದ್ದಾರೆ.;

Update: 2025-06-10 08:08 GMT

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಅನರ್ಹ ಪಡಿತರ ಚೀಟಿದಾರರನ್ನು ಗುರುತಿಸಿ, ಅವರಿಗೆ ಆಹಾರ ಧಾನ್ಯಗಳ ವಿತರಣೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎಲ್ಲಾ ಪಡಿತರ ಚೀಟಿದಾರರ ಆಧಾರ್ ಜೋಡಣೆ ಮತ್ತು ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಜೂನ್ 30ರೊಳಗೆ ಶೇಕಡಾ 100ರಷ್ಟು ಪೂರ್ಣಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಅವರು ರಾಜ್ಯದ ಎಲ್ಲಾ ಜಂಟಿ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪಡಿತರ ಫಲಾನುಭವಿಗಳು ಬಯೋಮೆಟ್ರಿಕ್ ನೀಡುವಾಗ ಬೆರಳಿನ ರೇಖೆಗಳು ಮುದ್ರಣವಾಗದಿದ್ದಲ್ಲಿ, ಅಂತಹ ಫಲಾನುಭವಿಗಳ ಹೆಸರನ್ನು ಪಟ್ಟಿ ಮಾಡಿ ಭೌತಿಕವಾಗಿ ಪರಿಶೀಲಿಸಿ ವಿನಾಯಿತಿ ನೀಡುವಂತೆ ಸೂಚಿಸಲಾಗಿದೆ.

ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳೇ ಹೊಣೆ

ಕೆಲವು ಪಡಿತರ ಫಲಾನುಭವಿಗಳು ತಪ್ಪು ಮಾಹಿತಿ ನೀಡಿ ಇ-ಕೆವೈಸಿ ಮಾಡಿಸಿದರೆ, ಅದಕ್ಕೆ ಜಿಲ್ಲಾ ಜಂಟಿ ಹಾಗೂ ಉಪನಿರ್ದೇಶಕರುಗಳು ಜವಾಬ್ದಾರರಾಗಿರುತ್ತಾರೆ ಎಂದು ಮನೋಜ್ ಜೈನ್ ಸ್ಪಷ್ಟಪಡಿಸಿದ್ದಾರೆ. ಅನರ್ಹ ಪಡಿತರದಾರರನ್ನು ನಿಯಮಾನುಸಾರ ಗುರುತಿಸಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರಿಗೆ ಮಾಹಿತಿ ನೀಡಬೇಕು ಹಾಗೂ ಅಂತಹ ಅನರ್ಹ ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇ-ಕೆವೈಸಿ ಬಾಕಿ: ಜೂನ್ 30 ಗಡುವು

ಸುಪ್ರೀಂ ಕೋರ್ಟ್ ಆದೇಶದ ಅನ್ವಯ, ಜೂನ್ 2ರಲ್ಲಿದ್ದಂತೆ ರಾಜ್ಯದಲ್ಲಿ ಬಾಕಿ ಉಳಿದಿರುವ 7,39,676 ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಇಲಾಖೆ ಸೂಚಿಸಿದೆ. ನಿಗದಿಪಡಿಸಿದ ಕಾಲಾವಧಿಯಲ್ಲಿ ಇ-ಕೆವೈಸಿ ಪೂರ್ಣಗೊಳಿಸಲು ವಿಫಲವಾದಲ್ಲಿ ಸಂಬಂಧಪಟ್ಟ ಜಿಲ್ಲಾ ಜಂಟಿ ಹಾಗೂ ಉಪ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕಟ್ಟುನಿಟ್ಟಿನ ಕ್ರಮವು ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಅನರ್ಹ ಫಲಾನುಭವಿಗಳನ್ನು ಹೊರಗಿಡಲು ಸಹಕಾರಿಯಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.

Tags:    

Similar News