ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಶೀಘ್ರದಲ್ಲೇ 10 ವಿದೇಶಿ ವನ್ಯಜೀವಿಗಳ ಆಗಮನ

ಜೈವಿಕ ಉದ್ಯಾನದಲ್ಲಿ ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್‌ನ ಪ್ರಾಯೋಗಿಕ ಸಂಚಾರಕ್ಕೆ ವಿಕಾಸಸೌಧದಲ್ಲಿ ವರ್ಚುವಲ್ ಮೂಲಕ ಸಚಿವ ಈಶ್ವರ್‌ ಖಂಡ್ರೆ ಚಾಲನೆ ನೀಡಿದರು.;

Update: 2025-06-18 10:50 GMT

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ವಿದ್ಯುತ್‌ ಚಾಲಿತ ಸಫಾರಿ ಬಸ್‌ಗೆ ವರ್ಚುವಲ್‌ ಮೂಲಕ ಚಾಲನೆ ನೀಡಿದರು. 

ಬನ್ನೇರುಘಟ್ಟ ಜೈವಿಕ ಉದ್ಯಾನವನವು (Bannerghatta Biological Park - BBP) ಇನ್ನು ಕೆಲವೇ ತಿಂಗಳುಗಳಲ್ಲಿ 10 ಹೊಸ ವಿದೇಶಿ ವನ್ಯಜೀವಿಗಳಿಗೆ ಆತಿಥ್ಯ ನೀಡಲು ಸಜ್ಜಾಗಿದೆ. ಚೀತಾ, ಚಿಂಪಾಂಜಿ, ಜಾಗ್ವಾರ್, ಪೂಮಾ ಮತ್ತು ಕ್ಯಾಪಚಿನ್ ಕೋತಿ ಸೇರಿದಂತೆ ವಿವಿಧ ಪ್ರಾಣಿಗಳು ಉದ್ಯಾನವನಕ್ಕೆ ಸೇರ್ಪಡೆಯಾಗಲಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಅಲ್ಲದೆ, ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್‌ಗೆ ಪ್ರಾಯೋಗಿಕವಾಗಿ ಚಾಲನೆ ನೀಡುವ ಮೂಲಕ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು.

ವಿಕಾಸಸೌಧದಲ್ಲಿ ವರ್ಚುವಲ್ ಮೂಲಕ ವಿದ್ಯುತ್ ಚಾಲಿತ ಸಫಾರಿ ಬಸ್‌ನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಮುಂದಿನ 5 ತಿಂಗಳಲ್ಲಿ ದಕ್ಷಿಣ ಅಮೆರಿಕಾದಿಂದ ಚೀತಾ ಮತ್ತು ಕ್ಯಾಪಚಿನ್ ಕೋತಿಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ಮುಂದಿನ ವರ್ಷ ಚಿಂಪಾಂಜಿ, ಜಾಗ್ವಾರ್, ಪೂಮಾ (ಉತ್ತರ ಅಮೇರಿಕಾ ಸಿಂಹ) ಸೇರಿದಂತೆ ಒಟ್ಟು 10 ವಿದೇಶಿ ವನ್ಯಜೀವಿಗಳು ಉದ್ಯಾನವನಕ್ಕೆ ಆಗಮಿಸಲಿವೆ ಎಂದು ಮಾಹಿತಿ ನೀಡಿದರು.

ದೇಶದ ಮೊದಲ ಇ-ಸಫಾರಿ ಬಸ್ ಮತ್ತು ಹಸಿರು ಭವಿಷ್ಯ 

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಸ್ತುತ ಹುಲಿ, ಚಿರತೆ, ಸಿಂಹ, ಮತ್ತು ಕರಡಿಗಳ ಸಫಾರಿಗೆ ಡೀಸೆಲ್ ವಾಹನಗಳನ್ನು ಬಳಸಲಾಗುತ್ತಿದೆ. ಇದರಿಂದ ಹೊರಹೊಮ್ಮುವ ಇಂಗಾಲದ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ದೇಶದಲ್ಲೇ ಇದೇ ಮೊದಲ ಬಾರಿಗೆ ವಿದ್ಯುತ್ ಚಾಲಿತ ಸಫಾರಿ ವಾಹನವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗುತ್ತಿದೆ.

ಪ್ರಸ್ತುತ, 22 ಆಸನಗಳ ಸಾಮರ್ಥ್ಯದ, 100 ಕೆ.ವಿ. ಬ್ಯಾಟರಿ ಹೊಂದಿರುವ ಒಂದು ವಿದ್ಯುತ್ ಚಾಲಿತ ಬಸ್ ಕಾರ್ಯಾರಂಭ ಮಾಡಲಿದೆ. ಸಚಿವ ಖಂಡ್ರೆ ಅವರು 2027ರೊಳಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಸಂಪೂರ್ಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ರಹಿತ ವಾಹನ ವಲಯವಾಗಿ ಪರಿವರ್ತಿಸುವ ಗುರಿಯನ್ನು ಘೋಷಿಸಿದರು.

ಸ್ಮಾರ್ಟ್ ಪಾರ್ಕಿಂಗ್  

ವಾರಾಂತ್ಯ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಬನ್ನೇರುಘಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಸಚಿವರು ತಿಳಿಸಿದರು. 

ಇತ್ತೀಚೆಗೆ, ಮೇ 2025ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸುಮಾರು 2.85 ಲಕ್ಷ ಪ್ರವಾಸಿಗರು ಆಗಮಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಚಿರತೆ ಸಫಾರಿ ಪ್ರಸ್ತುತ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿದೆ ಎಂದರು.

ಬೃಹತ್ ಮತ್ಸ್ಯಾಗಾರ ನಿರ್ಮಾಣ ಮತ್ತು ನೀರು ನಿರ್ವಹಣೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ಬೃಹತ್ ಮತ್ಸ್ಯಾಗಾರವನ್ನು ನಿರ್ಮಿಸುವ ಉದ್ದೇಶವಿದೆ. ಇದಕ್ಕಾಗಿ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಿ ಟೆಂಡರ್ ಕರೆಯಲಾಗುವುದು. ಉದ್ಯಾನವನದ ವ್ಯಾಪ್ತಿಯಲ್ಲಿ ಏಳು ಕೆರೆಗಳಿದ್ದು, ಜೊತೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದಲೂ ನೀರು ಪಡೆಯಲಾಗುತ್ತಿರುವುದರಿಂದ ಮತ್ಸ್ಯಾಗಾರಕ್ಕೆ ನೀರಿನ ಕೊರತೆಯಾಗುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು.

ಜೀಬ್ರಾ ಸಾವು ತನಿಖೆ ಮತ್ತು ಭವಿಷ್ಯದ ಯೋಜನೆಗಳು 

ಇತ್ತೀಚೆಗೆ ಉದ್ಯಾನವನದಲ್ಲಿ ಸಂಭವಿಸಿದ ಜೀಬ್ರಾ ಮತ್ತು ನೀಲಗಾಯ್ ಮೃತಪಟ್ಟ ಘಟನೆ ಕುರಿತು ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸಿಸಿಎಫ್‌ಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಭವಿಷ್ಯದಲ್ಲಿ ಯಾವುದೇ ವನ್ಯಜೀವಿ ಅಸಹಜವಾಗಿ ಮೃತಪಡದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಲಬುರಗಿಯಲ್ಲಿ ಹೊಸದಾಗಿ ಮೃಗಾಲಯ ನಿರ್ಮಿಸಲಾಗುತ್ತಿದ್ದು, ಅದು ಡಿಸೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು. 

Tags:    

Similar News