ಕುರಿಗಾಹಿಗಳಿಗೆ ಬಂದೂಕು ಪರವಾನಗಿ; ಅಧಿಕಾರಿಗಳಿಗೆ ಸಿಎಂ ಸೂಚನೆ

ಕುರಿಗಾಹಿಗಳ ಮೇಲೆ ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಕೇಸು ದಾಖಲಿಸಿ ಅನಗತ್ಯ ತೊಂದರೆ ಕೊಡುವ ಬಗ್ಗೆ ದೂರುಗಳು ಬಂದಿವೆ. ಇದನ್ನು ನಿಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.;

Update: 2025-05-31 12:14 GMT

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. 

ಕುರಿಗಾಹಿಗಳಿಗೆ ಕುರಿಗಳು ಹಾಗೂ ತಮ್ಮ ಜೀವ ರಕ್ಷಣೆಗಾಗಿ ಬಂದೂಕು ಪರವಾನಗಿ ಕೊಡಬೇಕು ಎಂಬ ಸೂಚನೆ ಪಾಲಿಸದ ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆಯೇ ಬಂದೂಕು ಪರವಾನಗಿ ವಿತರಣೆಗೆ ಸೂಚಿಸಲಾಗಿತ್ತು. ಆದರೆ, ಹಲವು ಕಡೆ ಇಂದಿಗೂ ಪರವಾನಗಿ ವಿತರಿಸದಿರುವುದು ಗಮನಕ್ಕೆ ಬಂದಿದೆ.  ಕುರಿಗಳ್ಳರ ಕಾಟ, ಕಾಡುಪ್ರಾಣಿಗಳ ದಾಳಿ ಭೀತಿಯಿಂದ ರಕ್ಷಿಸಿಕೊಳ್ಳಲು ಕೂಡಲೇ ಬಂದೂಕು ಪರವಾನಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮತ್ತೊಮ್ಮೆ ಸೂಚನೆ ನೀಡಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕುರಿಗಾಹಿಗಳ ಮೇಲೆ ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಕೇಸು ದಾಖಲಿಸುವುದು. ಅನಗತ್ಯ ತೊಂದರೆ ಕೊಡುವ ಬಗ್ಗೆ ವರದಿಗಳು, ದೂರುಗಳು ಬಂದಿವೆ. ಇದನ್ನು ನಿಲ್ಲಿಸಬೇಕು. ಅರಣ್ಯ ಸಿಬ್ಬಂದಿಯ ತಪ್ಪುಗ್ರಹಿಕೆಯಿಂದ ಕುರಿಗಾಹಿಗಳಿಗೆ ತೊಂದರೆ ಆಗುತ್ತಿದೆ ಎಂದರು.

ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು, ಕುರಿಗಾಹಿಗಳಿಗೆ ಬಂದೂಕು ಪರವಾನಗಿ ನೀಡುವ ಬಗ್ಗೆ ನಿಗಾ ಇಡಲು ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ನೀವೆಲ್ಲಾ ಯುವ ಜಿಲ್ಲಾಧಿಕಾರಿಗಳಿದ್ದೀರಿ. ನಿಮಗೆ ಜಿಲ್ಲೆಯಲ್ಲಿ ಉತ್ತಮ ಅನುಭವವಿರುತ್ತದೆ. ನೀವು ಕೆಲಸ ಮಾಡುವ ಜಿಲ್ಲೆಗಳಲ್ಲಿ ಹೆಜ್ಜೆ ಗುರುತು ಉಳಿಸಬೇಕು. ಸೃಜನಾತ್ಮಕಾವಾಗಿ ಕೆಲಸ ಮಾಡಿ ತೋರಿಸಬೇಕು. ನಿಮ್ಮ ಹೆಸರು ಜಿಲ್ಲೆಗಳಲ್ಲಿ ಹಾಗೂ ರಾಜ್ಯದಲ್ಲಿ ಅಚ್ಚಳಿಯದೆ ಉಳಿಯುವ ರೀತಿ ಕೆಲಸ ಮಾಡಿ ತೋರಿಸಬೇಕು ಎಂದು ಅಧಿಕಾರಿಗಳನ್ನು  ಹುರಿದುಂಬಿಸಿದರು.

ಯುವನಿಧಿ ಫಲಾನುಭವಿಗಳಿಗೆ ತರಬೇತಿ 

ಯುವನಿಧಿ ಫಲಾನುಭವಿ ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ತರಬೇತಿ ನೀಡಬೇಕು. ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ತರಬೇತಿ ನೀಡಿ, ಉದ್ಯೋಗಕ್ಕೆ ಅಣಿಗೊಳಿಸಬೇಕು. ತರಬೇತಿ ಪಡೆದವರೆಲ್ಲರಿಗೂ ಉದ್ಯೋಗ ಸಿಗದೇ ಹೋಗಬಹುದು. ಆದರೆ, ನಿರುದ್ಯೋಗಿ ಮತ್ತು ಯುವನಿಧಿ ಫಲಾನುಭವಿಗಳಿಗೆ ತರಬೇತಿ ನೀಡಬೇಕು ಎಂದು ಸಿಎಂ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ಡೈರಿ ಬರೆಯಬೇಕು

ಜಿಲ್ಲಾಧಿಕಾರಿಗಳು ನಿಯಮಿತವಾಗಿ ಡೈರಿ ಬರೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಡೈರಿಯಲ್ಲಿ ಕೆಲಸ ಮಾಡಿದ ಅನುಭವ, ಸಮಸ್ಯೆ, ಪರಿಹಾರಗಳ ಬಗ್ಗೆಯೂ ಉಲ್ಲೇಖವಿರಬೇಕು. ಈ ಹಿಂದೆ ಕೂಡಲೇ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದೆ. ಆದರೆ, ಹಲವರು ಸಮರ್ಪಕವಾಗಿ ಡೈರಿಯಲ್ಲಿ ವಿವರ ನಮೂದಿಸುತ್ತಿಲ್ಲ ಎನ್ನುವ ಮಾಹಿತಿ ಇದೆ. ನೀವು ಬರೆದ ಡೈರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಲುಪಿಸಿದರೆ ಅದನ್ನು ನಾನೂ ಗಮನಿಸುತ್ತೇನೆ ಎಂದು ತಿಳಿಸಿದರು.

Tags:    

Similar News