ಅಹಮದಾಬಾದ್ ವಿಮಾನ ದುರಂತ: ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಮಂಗಳೂರಿನವರು
8,200 ಗಂಟೆಗಳ ವೈಮಾನಿಕ ಅನುಭವ ಹೊಂದಿದ್ದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಪೈಲೆಟ್ ಆಗಿದ್ದರೆ, ಪೈಲಟ್ ಕ್ಲೈವ್ ಕುಂದರ್ ಅವರಿಗೆ 1,100 ಗಂಟೆಗಳ ಹಾರಾಟದ ಅನುಭವ ಕೂಡ ಇತ್ತು. ಆದರೆ, ಈ ವಿಮಾನ ಅವರ ಪ್ರಾಣಕ್ಕೆ ಎರವಾಯಿತು.;
ಗುರುವಾರ ಮಧ್ಯಾಹ್ನ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾದ ಫ್ಲೈಟ್ AI171, ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ ಒಟ್ಟು 242 ಮಂದಿ ದುರ್ಮರಣ ಹೊಂದಿದ್ದಾರೆ. ಈ ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರು ಮಂಗಳೂರಿನವರು ಎಂಬುದಾಗಿ ವರದಿಯಾಗಿದೆ.
8,200 ಗಂಟೆಗಳ ವೈಮಾನಿಕ ಅನುಭವ ಹೊಂದಿದ್ದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಪೈಲೆಟ್ ಆಗಿದ್ದರೆ, ಪೈಲಟ್ ಕ್ಲೈವ್ ಕುಂದರ್ ಅವರಿಗೆ 1,100 ಗಂಟೆಗಳ ಹಾರಾಟದ ಅನುಭವ ಕೂಡ ಇತ್ತು. ಆದರೆ, ವಿಮಾನ ಅನಿರೀಕ್ಷಿತವಾಗಿ ಪತನಗೊಂಡ ಕಾರಣ ಎಲ್ಲರೂ ಮೃತಪಟ್ಟಿದ್ದಾರೆ.
ಏರ್ ಇಂಡಿಯಾ ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಎದುರಿಸಿತ್ತು. 625 ಅಡಿ ಎತ್ತರದಲ್ಲಿ ವಿಮಾನವು ಏರ್ ಟ್ರಾಫಿಕ್ ಕಂಟ್ರೋಲ್ಗೆ (ATC) ತುರ್ತು ಕರೆ ಮಾಡಿತು. ಆನಂತರ ಯಾವುದೇ ಸಂಪರ್ಕವಿಲ್ಲದೆ, ವಿಮಾನವು ವಿಮಾನ ನಿಲ್ದಾಣದ ವ್ಯಾಪ್ತಿಯ ಆಚೆಗೆ ಇದ್ದ ಬಿಜೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ವಸತಿಗೃಹದ ಮೇಲೆ ಡಿಕ್ಕಿಯಾಗಿ ಸ್ಫೋಟಗೊಂಡಿದೆ
ಕ್ಲೈವ್ ಕುಂದರ್, ಮಂಗಳೂರಿನ ಹೆಮ್ಮೆ ಎಂಬ ಪೋಸ್ಟ್
ಫಸ್ಟ್ ಆಫೀಸರ್ ಕ್ಲೈವ್ ಕುಂದರ್. ಮಂಗಳೂರಿನ ಮೂಲದವರಾಗಿದ್ದು, ಮುಂಬೈನಲ್ಲಿ ನೆಲೆಸಿದ್ದರು. ಪ್ಯಾರಿಸ್ ಏರ್ ಇನ್ಕ್ನಲ್ಲಿ ತರಬೇತಿ ಪಡೆದಿದ್ದ ಅವರು, 1,100 ಗಂಟೆಗಳ ವೈಮಾನಿಕ ಹಾರಾಟದ ಅನುಭವ ಹೊಂದಿದ್ದರು. ಈ ದುರಂತದಲ್ಲಿ ಅವರ ನಿಧನಕ್ಕೆ ಮಂಗಳೂರಿನ ಸಹಪಾಠಿಗಳು, ಸ್ನೇಹಿತರು ಮತ್ತು ಸ್ಥಳೀಯ ಜನತೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಓಂ ಶಾಂತಿ. ನೀವು ನಿಮ್ಮ ಗರಿಷ್ಠ ಪ್ರಯತ್ನವನ್ನು ಮಾಡಿದ್ದೀರಿ. ದೇವರು ನಿಮ್ಮ ಕುಟುಂಬಕ್ಕೆ ಶಕ್ತಿಯನ್ನು ನೀಡಲಿ," ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡಿವೆ. ಕುಂದರ್ ಅವರ ಸೇವೆಗೆ ಗೌರವ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಂಗಳೂರು ಜನತೆ ಪ್ರಾರ್ಥಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆಗೆ ಆರು ಎನ್ಡಿಆರ್ಎಫ್ ತಂಡಗಳು, ಏಳು ಅಗ್ನಿಶಾಮಕ ವಾಹನಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF), ಪೊಲೀಸ್ ಮತ್ತು ವೈದ್ಯಕೀಯ ತಂಡಗಳು ತೊಡಗಿಕೊಂಡಿವೆ. 204 ಶವಗಳನ್ನು ಈಗಾಗಲೇ ಹೊರತೆಗೆಯಲಾಗಿದ್ದು, 41 ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ತಿಳಿಸಿದ್ದಾರೆ. ಕಟ್ಟಡಕ್ಕೆ ಗುದ್ದಿದ ಕಾರಣ 50ರಿಂದ60 ಎಂಬಿಬಿಎಸ್ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. 4ರಿಂದ 5 ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿದ್ದು, 2-3 ಮಂದಿ ಐಸಿಯುನಲ್ಲಿದ್ದಾರೆ ಎಂದು ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (FAIMA) ತಿಳಿಸಿದೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ತಂಡವು ತನಿಖೆಯನ್ನು ಆರಂಭಿಸಿದೆ. ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ಗಳನ್ನು ವಿಶ್ಲೇಷಿಸಲಾಗುತ್ತಿದೆ.
ಸ್ಥಳೀಯ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಪ್ರಕಾರ, ವಿಮಾನದಲ್ಲಿ ಇದ್ದವರು ಯಾರೂ ಬದುಕುಳಿಯುವ ಸಾಧ್ಯತೆಗಳು ಇಲ್ಲ. ಜೊತೆಗೆ, ವಸತಿಗೃಹದ ಮೇಲೆ ಬಿದ್ದ ಕಾರಣ, ಸ್ಥಳೀಯವಾಗಿ ಸಾವು, ನೋವುಗಳು ಸಂಭವಿಸಿರಬಹುದು ಎಂದು ಹೇಳಿದ್ದಾರೆ.