ಸಿಂಗಾಪುರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಮೇಲೆ ಹಲ್ಲೆ: ಇಬ್ಬರು ಭಾರತೀಯ ಪ್ರವಾಸಿಗರಿಗೆ ಜೈಲು

ಆರೋಕ್ಕಿಯಸಾಮಿ ರಾಜೇಂದ್ರನ್ ಅವರಿಗೆ ಹಣದ ಅವಶ್ಯಕತೆ ಇತ್ತು. ಈ ವೇಳೆ ಮಹಿಳೆಯರನ್ನು ಸಂಪರ್ಕಿಸಿ ಹೋಟೆಲ್ ಕೋಣೆಯಲ್ಲಿ ದರೋಡೆ ಮಾಡಲು ಅವರು ಯೋಜನೆ ರೂಪಿಸುತ್ತಾರೆ. ಆ ದಿನ ಸಂಜೆ 6 ಗಂಟೆ ಸುಮಾರಿಗೆ ಹೋಟೆಲ್ ಕೋಣೆಯಲ್ಲಿ ಒಬ್ಬ ಮಹಿಳೆಯನ್ನು ಭೇಟಿಯಾಗಲು ಅವರು ವ್ಯವಸ್ಥೆ ಮಾಡಿದರು.

Update: 2025-10-04 09:54 GMT

ಆರೋಕ್ಕಿಯಸಾಮಿ ರಾಜೇಂದ್ರನ್ ಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ, ಮಹಿಳೆಯರನ್ನು ಸಂಪರ್ಕಿಸಿ ದರೋಡೆ ಮಾಡಲು ಸೂಚಿಸಿದರು.

Click the Play button to listen to article

ಸಿಂಗಾಪುರ ಪ್ರವಾಸದಲ್ಲಿದ್ದಾಗ ಇಬ್ಬರು ಲೈಂಗಿಕ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದ ಆರೋಪದ ಮೇಲೆ ಇಬ್ಬರು ಭಾರತೀಯರಿಗೆ ಅಲ್ಲಿನ ನ್ಯಾಯಾಲಯವು ತಲಾ ಐದು ವರ್ಷ ಮತ್ತು ಒಂದು ತಿಂಗಳ ಜೈಲು ಶಿಕ್ಷೆ ಹಾಗೂ 12 ಛಡಿ ಏಟುಗಳನ್ನು ವಿಧಿಸಿ ತೀರ್ಪು ನೀಡಿದೆ.

23 ವರ್ಷದ ಆರೋಕ್ಕಿಯಸಾಮಿ ಡೈಸನ್ ಮತ್ತು 27 ವರ್ಷದ ರಾಜೇಂದ್ರನ್ ಮಾಯಿಲರಸನ್ ಶಿಕ್ಷೆಗೊಳಗಾದ ಅಪರಾಧಿಗಳು. ಇಬ್ಬರೂ ದರೋಡೆ ಮಾಡುವಾಗ ಹಲ್ಲೆ ನಡೆಸಿರುವುದಾಗಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಘಟನೆಯ ವಿವರ

ವಿವರಗಳ ಪ್ರಕಾರ, ಆರೋಕ್ಕಿಯಸಾಮಿ ಮತ್ತು ರಾಜೇಂದ್ರನ್ ಏಪ್ರಿಲ್ 24 ರಂದು ರಜೆಗಾಗಿ ಭಾರತದಿಂದ ಸಿಂಗಪುರಕ್ಕೆ ತೆರಳಿದ್ದರು. ಎರಡು ದಿನಗಳ ನಂತರ 'ಲಿಟಲ್ ಇಂಡಿಯಾ' ಪ್ರದೇಶದಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ಇವರಿಗೆ ಇಬ್ಬರು ಲೈಂಗಿಕ ಕಾರ್ಯಕರ್ತೆಯರ ಸಂಪರ್ಕವನ್ನು ನೀಡಿದ್ದ. ಹಣದ ಅವಶ್ಯಕತೆಯಿದ್ದ ಕಾರಣ, ಇಬ್ಬರೂ ಮಹಿಳೆಯರನ್ನು ಹೋಟೆಲ್ ಕೋಣೆಗೆ ಕರೆಸಿ ದರೋಡೆ ಮಾಡಲು ಯೋಜನೆ ರೂಪಿಸಿದ್ದರು

ಅದೇ ದಿನ ಸಂಜೆ, ಮೊದಲ ಮಹಿಳೆಯನ್ನು ಹೋಟೆಲ್ ಕೋಣೆಗೆ ಕರೆಸಿಕೊಂಡ ಇವರು, ಆಕೆಯ ಕೈ-ಕಾಲುಗಳನ್ನು ಕಟ್ಟಿ, ಹಲ್ಲೆ ನಡೆಸಿ ಆಭರಣಗಳು, 2,000 ಸಿಂಗಾಪುರ ಡಾಲರ್, ಪಾಸ್‌ಪೋರ್ಟ್ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ದೋಚಿದ್ದರು. ನಂತರ, ಅದೇ ರಾತ್ರಿ 11 ಗಂಟೆಗೆ, ಮತ್ತೊಂದು ಹೋಟೆಲ್‌ನಲ್ಲಿ ಎರಡನೇ ಮಹಿಳೆಯನ್ನು ಭೇಟಿಯಾಗಿ, ಆಕೆಯ ಮೇಲೆಯೂ ಹಲ್ಲೆ ನಡೆಸಿ 800 ಸಿಂಗಾಪುರ ಡಾಲರ್ ಎರಡು ಮೊಬೈಲ್ ಫೋನ್‌ಗಳು ಮತ್ತು ಪಾಸ್‌ಪೋರ್ಟ್ ಅನ್ನು ದೋಚಿದ್ದಾರೆ. ಕೋಣೆಯಿಂದ ಹೊರಹೋಗದಂತೆ ಆಕೆಗೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದರು.

ಮರುದಿನ, ಎರಡನೇ ಸಂತ್ರಸ್ತೆಯು ತನಗಾದ ಅನ್ಯಾಯವನ್ನು ಮತ್ತೊಬ್ಬ ವ್ಯಕ್ತಿಯ ಬಳಿ ಹೇಳಿಕೊಂಡಾಗ, ಈ ಕೃತ್ಯ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದರು.

ನಮ್ಮಲ್ಲಿ ಹಣವಿರಲಿಲ್ಲ ಎಂದು ತಪ್ಪೊಪ್ಪಿಕೊಂಡ  ಆರೋಪಿಗಳು

ನ್ಯಾಯಾಲಯದಲ್ಲಿ ತಮ್ಮ ಪರ ವಕೀಲರಿಲ್ಲದೆ ವಾದ ಮಂಡಿಸಿದ ಆರೋಪಿಗಳು, ಕಡಿಮೆ ಶಿಕ್ಷೆಗಾಗಿ ಮನವಿ ಮಾಡಿದರು. "ನನ್ನ ತಂದೆ ಕಳೆದ ವರ್ಷ ನಿಧನರಾಗಿದ್ದಾರೆ. ನಮ್ಮ ಬಳಿ ಹಣವಿರಲಿಲ್ಲ, ಅದಕ್ಕಾಗಿಯೇ ಈ ಕೃತ್ಯ ಎಸಗಿದೆವು," ಎಂದು ಆರೋಕ್ಕಿಯಸಾಮಿ ಹೇಳಿದರೆ, "ನನ್ನ ಹೆಂಡತಿ ಮತ್ತು ಮಗು ಭಾರತದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ," ಎಂದು ರಾಜೇಂದ್ರನ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ಸಿಂಗಪುರದ ಕಾನೂನಿನ ಪ್ರಕಾರ, ದರೋಡೆಯ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡುವವರಿಗೆ ಐದರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 12 ಛಡಿ ಏಟುಗಳನ್ನು ವಿಧಿಸಲಾಗುತ್ತದೆ. 

Tags:    

Similar News