ರಾಜ್‌ಕೋಟ್‌ ಗೇಮ್‌ ಝೋನ್‌ ಬೆಂಕಿ ದುರಂತ: 6 ಅಧಿಕಾರಿಗಳು ಅಮಾನತು

Update: 2024-05-27 08:24 GMT

27 ಜನರನ್ನು ಬಲಿತೆಗೆದುಕೊಂಡ ರಾಜ್‌ಕೋಟ್ ಗೇಮ್ ಝೋನ್ ಬೆಂಕಿಗೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರವು ಆರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಸೋಮವಾರ (ಮೇ 27) ಆದೇಶ ಹೊರಡಿಸಿದೆ. 

ʻಅಗತ್ಯ ಅನುಮೋದನೆಗಳಿಲ್ಲದೆ ಕಾರ್ಯನಿರ್ವಹಿಸಲು ಅನುಮತಿ ನೀಡುವ ಮೂಲಕ ನಿರ್ಲಕ್ಷ್ಯ ತೋರಿರುವʼ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನ ನಗರ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್ ಜೈದೀಪ್ ಚೌಧರಿ, ಆರ್‌ಎಂಸಿ ಸಹಾಯಕ ನಗರ ಯೋಜಕ ಗೌತಮ್ ಜೋಶಿ, ರಾಜ್‌ಕೋಟ್ ರಸ್ತೆ ಮತ್ತು ಕಟ್ಟಡ ಇಲಾಖೆಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್‌ ಗಳಾದ ಎಂ.ಆರ್. ಸುಮಾ ಮತ್ತು ಪಾರಸ್ ಕೊಥಿಯಾ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವಿ.ಆರ್. ಪಟೇಲ್ ಮತ್ತು ಎನ್‌.ಐ. ರಾಥೋಡ್ ಅಮಾನತುಗೊಂಡವರು. 

ನಿರಾಕ್ಷೇಪ ಪ್ರಮಾಣಪತ್ರ ಇರಲಿಲ್ಲ: ಗೇಮ್‌ ಝೋನ್‌ ಅಗ್ನಿಶಾಮಕ ಎನ್‌ಒಸಿ (ನಿರಾಕ್ಷೇಪ ಪ್ರಮಾಣಪತ್ರ) ಇಲ್ಲದೆ ಕಾರ್ಯನಿರ್ವ ಹಿಸುತ್ತಿತ್ತು. ʻಆಟದ ವಲಯವು ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯಿಂದ ಅನುಮತಿ ಪಡೆದಿದೆ. ಅಗ್ನಿಶಾಮಕ ಎನ್‌ಒಸಿ ಪಡೆಯಲು ಅಗ್ನಿಶಾಮಕ ಸುರಕ್ಷತೆ ಸಲಕರಣೆಗಳ ದಾಖಲೆಗಳನ್ನು ಸಲ್ಲಿಸಿದೆ. ಆದರೆ,‌ ಪ್ರಮಾಣಪತ್ರ ನೀಡಿಕೆ ಪ್ರಕ್ರಿಯೆ ಚಾಲನೆಯಲ್ಲಿದೆ,ʼ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದರು. 

ಶನಿವಾರ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸ್ಥಳ ಪರಿಶೀಲಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಮತ್ತು ಶಿಕ್ಷಾರ್ಹ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ ಒಂದು ದಿನದ ನಂತರ ಆರು ಅಧಿಕಾರಿ ಗಳನ್ನು ಅಮಾನತುಗೊಳಿಸಲಾಗಿದೆ. 

ಇಬ್ಬರ ಬಂಧನ, 7 ಮಂದಿ ವಿರುದ್ಧ ಎಫ್‌ಐಆರ್: ಘಟನೆಯಲ್ಲಿ ಮಕ್ಕಳು ಸೇರಿದಂತೆ 27 ಜನರು ಸಾವನ್ನಪ್ಪಿದ್ದಾರೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಗೇಮ್ ಝೋನ್‌ನ ಆರು ಪಾಲುದಾರರು ಮತ್ತು ಇನ್ನೊಬ್ಬ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. 

ಮಾನವ ನಿರ್ಮಿತ ದುರಂತ: ಗುಜರಾತ್ ಹೈಕೋರ್ಟ್- ಗುಜರಾತ್ ಹೈಕೋರ್ಟ್ ಭಾನುವಾರ (ಮೇ 26) ದುರಂತವನ್ನು ʻಮಾನವ ನಿರ್ಮಿತʼ ಎಂದು ಬಣ್ಣಿಸಿದೆ. ಪೆಟ್ರೋಲ್, ಫೈಬರ್‌ ಮತ್ತು ಫೈಬರ್‌ಗ್ಲಾಸ್ ಶೀಟ್‌ಗಳಂತಹ ದಹನಶೀಲ ವಸ್ತುಗಳನ್ನು ಸ್ಥಳದಲ್ಲಿ ಸಂಗ್ರಹಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. 

ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ್ದು, ಮೃತರ ಕುಟುಂಬಕ್ಕೆ 4 ಲಕ್ಷ ರೂ.ಮತ್ತು ಕೇಂದ್ರ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಿಸಿದೆ. 

Tags:    

Similar News