ಭೋಪಾಲ್ನಲ್ಲಿ '90 ಡಿಗ್ರಿ ತಿರುವು' ಸೇತುವೆ ನಿರ್ಮಾಣ! 8 ಎಂಜಿನಿಯರ್ಗಳ ಅಮಾನತು
ಐಶ್ಬಾಗ್ ಪ್ರದೇಶದಲ್ಲಿ ನಿರ್ಮಿಸಲಾದ ಈ ಹೊಸ ಸೇತುವೆ, 90 ಡಿಗ್ರಿ ತೀಕ್ಷ್ಣ ತಿರುವಿನಿಂದಾಗಿ ಸಾರ್ವಜನಿಕರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರ ತೀವ್ರ ಟೀಕೆಗೆ ಗುರಿಯಾಗಿತ್ತು.;
ಭೋಪಾಲ್ನಲ್ಲಿ ನಿರ್ಮಿಸಲಾದ ರೈಲ್ವೆ ಓವರ್ಬ್ರಿಡ್ಜ್ನ (ROB) ದೋಷಪೂರಿತ ವಿನ್ಯಾಸ ಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರವು ಏಳು ಲೋಕೋಪಯೋಗಿ ಇಲಾಖೆ (PWD) ಎಂಜಿನಿಯರ್ಗಳನ್ನು ಅಮಾನತುಗೊಳಿಸಿದೆ. ಅಲ್ಲದೆ, ಒಬ್ಬ ನಿವೃತ್ತ ಅಧೀಕ್ಷಕ ಇಂಜಿನಿಯರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಶನಿವಾರ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ನಿರ್ಮಾಣ ಸಂಸ್ಥೆ ಮತ್ತು ವಿನ್ಯಾಸ ಸಲಹೆಗಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಈ ರೈಲ್ವೆ ಓವರ್ಬ್ರಿಡ್ಜ್ನಲ್ಲಿ ಅಗತ್ಯ ಸುಧಾರಣೆಗಳನ್ನು ಮಾಡಲು ಒಂದು ಸಮಿತಿಯನ್ನು ರಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ವಿವಾದಕ್ಕೆ ಕಾರಣವಾದ ಸೇತುವೆ ವಿನ್ಯಾಸ
ಐಶ್ಬಾಗ್ ಪ್ರದೇಶದಲ್ಲಿ ನಿರ್ಮಿಸಲಾದ ಈ ಹೊಸ ಸೇತುವೆ, 90 ಡಿಗ್ರಿ ತೀಕ್ಷ್ಣ ತಿರುವಿನಿಂದಾಗಿ ಸಾರ್ವಜನಿಕರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರ ತೀವ್ರ ಟೀಕೆಗೆ ಗುರಿಯಾಗಿತ್ತು. ಇಂತಹ ತಿರುವಿನಲ್ಲಿ ವಾಹನಗಳು ಹೇಗೆ ಸುರಕ್ಷಿತವಾಗಿ ಸಂಚರಿಸುತ್ತವೆ ಎಂಬ ಪ್ರಶ್ನೆಗಳು ವ್ಯಾಪಕವಾಗಿ ಕೇಳಿಬಂದಿದ್ದವು.
"ಐಶ್ಬಾಗ್ ROB ನಿರ್ಮಾಣದಲ್ಲಿನ ಗಂಭೀರ ಲೋಪದ ಬಗ್ಗೆ ನನಗೆ ಗಮನಕ್ಕೆ ಬಂದಿದ್ದು, ತಕ್ಷಣವೇ ತನಿಖೆಗೆ ಆದೇಶಿಸಿದ್ದೆ. ತನಿಖಾ ವರದಿಯ ಆಧಾರದ ಮೇಲೆ ಎಂಟು PWD ಇಂಜಿನಿಯರ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ," ಎಂದು ಮುಖ್ಯಮಂತ್ರಿ ಯಾದವ್ ಸ್ಪಷ್ಟಪಡಿಸಿದ್ದಾರೆ.
ಕ್ರಮ ಕೈಗೊಂಡ ಇಂಜಿನಿಯರ್ಗಳು ಮತ್ತು ಸಂಸ್ಥೆಗಳು
ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ಮಂಡ್ಲೋಯ್ ಅವರು ಮಾಹಿತಿ ನೀಡಿದಂತೆ, ಮುಖ್ಯ ಇಂಜಿನಿಯರ್ಗಳಾದ ಸಂಜಯ್ ಖಾಂಡೆ ಮತ್ತು ಜಿ.ಪಿ. ವರ್ಮಾ, ಕಾರ್ಯನಿರ್ವಾಹಕ ಇಂಜಿನಿಯರ್ ಜಾವೇದ್ ಶಕೀಲ್, ಉಪ-ವಿಭಾಗೀಯ ಅಧಿಕಾರಿ ರವಿ ಶುಕ್ಲಾ, ಸಬ್-ಇಂಜಿನಿಯರ್ ಉಮಾಶಂಕರ್ ಮಿಶ್ರಾ, ಸಹಾಯಕ ಇಂಜಿನಿಯರ್ ಶಾನುಲ್ ಸಕ್ಸೇನಾ, ಕಾರ್ಯನಿರ್ವಾಹಕ ಇಂಜಿನಿಯರ್ ಶಬಾನಾ ರಜ್ಜಾಕ್, ಮತ್ತು ನಿವೃತ್ತ ಅಧೀಕ್ಷಕ ಇಂಜಿನಿಯರ್ ಎಂ.ಪಿ. ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜೊತೆಗೆ, ಸರ್ಕಾರವು ಆರ್ಕಿಟೆಕ್ಟ್ ಸಂಸ್ಥೆ ಪುನೀತ್ ಚಡ್ಡಾ ಮತ್ತು ವಿನ್ಯಾಸ ಸಲಹೆಗಾರ ಡೈನಾಮಿಕ್ ಕನ್ಸಲ್ಟಂಟ್ಸ್ಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ವಿನ್ಯಾಸದ ಸಮರ್ಥನೆ
18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಆರ್ಒಬಿ, ಮಹಾಮಾಯಿ ಕಾ ಬಾಗ್, ಪುಷ್ಪಾ ನಗರ ಮತ್ತು ಸ್ಟೇಷನ್ ಪ್ರದೇಶವನ್ನು ಹೊಸ ಭೋಪಾಲ್ನೊಂದಿಗೆ ಸಂಪರ್ಕಿಸುವ ಮೂಲಕ ಸುಮಾರು ಮೂರು ಲಕ್ಷ ಜನರಿಗೆ ಅನುಕೂಲ ಕಲ್ಪಿಸುವ ಗುರಿಯನ್ನು ಹೊಂದಿತ್ತು.
ಕಳೆದ ವಾರ, ವಾಹನಗಳ ಸುರಕ್ಷಿತ ಸಂಚಾರಕ್ಕಾಗಿ ಪರಿಹಾರ ಕಂಡುಕೊಳ್ಳಲು ಲೋಕಪಯೋಗಿ ಇಲಾಖೆ ಒಂದು ಸಮಿತಿ ರಚಿಸಿತ್ತು. ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು, ಭೂಮಿಯ ಕೊರತೆ ಮತ್ತು ಸಮೀಪದಲ್ಲಿ ಮೆಟ್ರೋ ರೈಲು ನಿಲ್ದಾಣವಿರುವ ಕಾರಣ ಇಂತಹ ವಿನ್ಯಾಸವನ್ನು ಅಳವಡಿಸಬೇಕಾಯಿತು ಎಂದು ವಾದಿಸಿದ್ದಾರೆ. ಸ್ವಲ್ಪ ಹೆಚ್ಚು ಜಾಗ ಸಿಕ್ಕರೆ, 90 ಡಿಗ್ರಿ ತಿರುವನ್ನು ವಕ್ರರೇಖೆಯಾಗಿ (ಕರ್ವ್) ಪರಿವರ್ತಿಸಬಹುದು ಎಂದು ಅವರು ತಿಳಿಸಿದ್ದಾರೆ.