Hema report fallout | ಮೌನ ಮುರಿದ ಮೋಹನ್‌ಲಾಲ್: ʻತಾವು ಉದ್ಯಮದಲ್ಲಿನ ಯಾವುದೇ ಶಕ್ತಿ ಗುಂಪಿನ ಭಾಗವಾಗಿಲ್ಲʼ

AMMA ದ ಕೆಲವು ಸದಸ್ಯರ ವಿರುದ್ಧ ಲೈಂಗಿಕ ದುರ್ನಡತೆ ಮತ್ತು ದೌರ್ಜನ್ಯ ಆರೋಪಗಳನ್ನು ಉಲ್ಲೇಖಿಸಿ, ʻತಪ್ಪು ಮಾಡಿದವರ ವಿರುದ್ಧ ಪುರಾವೆಗಳಿದ್ದರೆ, ಅವರನ್ನು ಶಿಕ್ಷಿಸಬೇಕು,ʼ ಎಂದು ಮೋಹನ್‌ ಲಾಲ್‌ ಹೇಳಿದರು.

Update: 2024-08-31 12:31 GMT

ʻನಾನು ಮಲಯಾಳಂ ಚಿತ್ರರಂಗದ ಯಾವುದೇ ಶಕ್ತಿ ಗುಂಪಿನ ಭಾಗವಾಗಿಲ್ಲ ಮತ್ತು ಅಂತಹ ಯಾವುದೇ ಗುಂಪಿನ ಅಸ್ತಿತ್ವದ ಬಗ್ಗೆ ನನಗೆ ತಿಳಿದಿಲ್ಲ,ʼ ಎಂದು ಹಿರಿಯ ನಟ ಮೋಹನ್‌ಲಾಲ್ ಶನಿವಾರ ಹೇಳಿದ್ದಾರೆ.

ತಿರುವನಂತಪುರದಲ್ಲಿ ಕೇರಳ ಕ್ರಿಕೆಟ್ ಲೀಗ್ ಅನಾವರಣದ ನಂತರ ನಡೆದ ಮಾಧ್ಯಮ ಸಂವಾದದಲ್ಲಿ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. 

ʻಮಲಯಾಳಂ ಚಿತ್ರರಂಗವು ಸಾವಿರಾರು ಜನ ಕೆಲಸ ಮಾಡುವ ದೊಡ್ಡ ಉದ್ಯಮ. ಉದ್ಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(AMMA)ಕ್ಕೆ ಸಾಧ್ಯವಾಗಲಿಲ್ಲ.ನ್ಯಾ. ಹೇಮಾ ಸಮಿತಿಯ ವರದಿ ಬಿಡುಗಡೆ ನಂತರ ತಮ್ಮ ನೇತೃತ್ವದ ಸಂಘದ ಕಾರ್ಯಕಾರಿ ಮಂಡಳಿ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದೆ,ʼ ಎಂದು ಮಾಧ್ಯಮಗಳಿಗೆ ತಿಳಿಸಿದರು. 

'ತಪ್ಪು ಮಾಡಿದವರನ್ನು ಶಿಕ್ಷಿಸಿ': AMMA ದ ಕೆಲವು ಸದಸ್ಯರ ವಿರುದ್ಧ ಲೈಂಗಿಕ ದುರ್ನಡತೆ ಮತ್ತು ದೌರ್ಜನ್ಯ ಆರೋಪಗಳನ್ನು ಉಲ್ಲೇಖಿಸಿ, ʻತಪ್ಪು ಮಾಡಿದವರ ವಿರುದ್ಧ ಪುರಾವೆಗಳಿದ್ದರೆ, ಅವರನ್ನು ಶಿಕ್ಷಿಸಬೇಕು,ʼ ಎಂದು ಹೇಳಿದರು. ʻಎಲ್ಲ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ.ನ್ಯಾ. ಹೇಮಾ ವರದಿಯಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ.ಸರ್ಕಾರ ಅದನ್ನು ಅನುಸರಿಸಲಿ. ಸಮಸ್ಯೆ ಬಗೆಹರಿಸಲು ಸಾಮೂಹಿಕ ಕ್ರಮ ಅಗತ್ಯವಿದೆ,ʼ ಎಂದರು. ಆದರೆ, ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ನೊಂದಿಗೆ ಸಮಸ್ಯೆ ಕುರಿತು ಚರ್ಚಿಸುವ  ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. 

'ಅಮ್ಮ ಏಕೈಕ ಗುರಿ': ಇದನ್ನು AMMA ಮತ್ತು ವಿಮೆನ್‌ ಕಲೆಕ್ಟಿವ್‌ ನಡುವಿನ ಸಮಸ್ಯೆಯನ್ನಾಗಿ ಮಾಡಬೇಡಿ. ಇದು ಇಡೀ ಉದ್ಯಮಕ್ಕೆ ಸಂಬಂಧಿಸಿದೆ ಮತ್ತು ಅದನ್ನು ಪುನರ್ನಿರ್ಮಾಣ ಮಾಡಲು ಎಲ್ಲರೂ ಕೆಲಸ ಮಾಡಬೇಕು. ವರದಿಯಲ್ಲಿ ಪ್ರಸ್ತಾಪಿಸಿದ ವಿಷಯಗಳ ತನಿಖೆಯನ್ನು ಯಾರೂ ವಿರೋಧಿಸುವುದಿಲ್ಲ,ʼ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

ತಮ್ಮ ಸುದೀರ್ಘ ವೃತ್ತಿಜೀವನದ ಬಗ್ಗೆ ವಿವರಿಸಿ, ʻನಾನು ಎಂದಿಗೂ ಓಡಿಹೋಗಿಲ್ಲ. ಕಳೆದ 47 ವರ್ಷಗಳಿಂದ ನಾನು ನಿಮ್ಮ ಮುಂದೆ ಇದ್ದೇನೆ. ಇತ್ತೀಚಿನ ಗೈರುಹಾಜರಿ ವೈಯಕ್ತಿಕ ವಿಷಯಗಳಿಂದ, ನಿರ್ದಿಷ್ಟವಾಗಿ, ಪತ್ನಿಯ ಶಸ್ತ್ರಚಿಕಿತ್ಸೆಯಿಂದ  ಚಿತ್ರ 'ಬರೋಜ್' ಬಿಡುಗಡೆ ವಿಳಂಬವಾಯಿತು,ʼ ಎಂದು ವಿವರಿಸಿದರು. 

ʻಅಮ್ಮ ಒಂದು ಟ್ರೇಡ್ ಯೂನಿಯನ್ ಅಲ್ಲ; ಕಲಾವಿದರ ಕಲ್ಯಾಣಕ್ಕಾಗಿ ಇರುವ ಒಂದು ಕುಟುಂಬ.ಸಂಘದ ಮೇಲೆ ಆರೋಪ ಹೊರಿಸದೆ, ಹೇಮಾ ಸಮಿತಿ ವರದಿಗೆ ಪ್ರತಿಕ್ರಿಯಿಸಲು ಇಡೀ ಮಲಯಾಳಂ ಚಿತ್ರರಂಗ ಒಗ್ಗೂಡಬೇಕು. ಈಗ ಪ್ರತಿಯೊಂದು ಬೆರಳು ಅಮ್ಮ ಕಡೆಗೆ ಇದೆ. ಸಾಮೂಹಿಕ ಜವಾಬ್ದಾರಿ ಅಗತ್ಯವಿದೆ,ʼ ಎಂದರು.

ಮರುನಿರ್ಮಾಣಕ್ಕೆ ಸಲಹೆ: ʻನಮ್ಮ ಕಾರ್ಯವೈಖರಿಯನ್ನು ಟೀಕಿಸುವವರು ಮುಂದೆ ಬಂದು ನಾಯಕತ್ವ ವಹಿಸಬೇಕು. ಉದ್ಯಮವನ್ನು ಪುನರ್ ನಿರ್ಮಾಣ ಮಾಡಬೇಕಿದೆ. ಹಲವರ ಬೆವರು, ರಕ್ತದ ಫಲ ಈ ಉದ್ಯಮ. ವಿಪತ್ತು ಪೀಡಿತ ವಯನಾಡಿನಲ್ಲಿ ಮಾಡುತ್ತಿರುವಂತೆ ಇಡೀ ಉದ್ಯಮವನ್ನು ಪುನರ್ನಿರ್ಮಿಸಬೇಕು. ಕಿರಿಯ ಕಲಾವಿದರು ಸಂಘ ರಚಿಸಿಕೊಳ್ಳಳು ಮತ್ತು ಉದ್ಯಮದಲ್ಲಿರುವ ಎಲ್ಲರನ್ನು ರಕ್ಷಿಸಲು ಶಾಸನ ಅಗತ್ಯವಿದೆ,ʼ ಎಂದು ಹೇಳಿದರು.

Tags:    

Similar News