ಅಂಕಿತಾ ಭಂಡಾರಿ ಕೊಲೆ ಪ್ರಕರಣ: ಬಿಜೆಪಿ ನಾಯಕನ ಮಗ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ
ಉತ್ತರಾಖಂಡದ ಪೌರಿ ಜಿಲ್ಲಾ ನ್ಯಾಯಾಲಯವು, ರಾಜ್ಯದ ರೆಸಾರ್ಟ್ ಒಂದರಲ್ಲಿ ಸ್ವಾಗತಕಾರಿಣಿಯಾಗಿದ್ದ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.;
ಉತ್ತರಾಖಂಡದ ಪೌರಿ ಜಿಲ್ಲಾ ನ್ಯಾಯಾಲಯವು, ರಾಜ್ಯದ ರೆಸಾರ್ಟ್ ಒಂದರಲ್ಲಿ ಸ್ವಾಗತಕಾರಿಣಿಯಾಗಿದ್ದ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಪೌರಿ ಗರ್ವಾಲ್ ಜಿಲ್ಲೆಯಲ್ಲಿರುವ ವನತಾರಾ ರೆಸಾರ್ಟ್ನಲ್ಲಿ 19 ವರ್ಷದ ಅಂಕಿತಾ ಭಂಡಾರಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು. 2022ರ ಸೆಪ್ಟೆಂಬರ್ 18ರಂದು, ರೆಸಾರ್ಟ್ ಸಮೀಪದ ಕಾಲುವೆಯೊಂದರಲ್ಲಿ ಅಂಕಿತಾ ಅವರ ಮೃತದೇಹ ಪತ್ತೆಯಾಗಿತ್ತು.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ ಪೌರಿ ಜಿಲ್ಲಾ ಪೊಲೀಸರು, ವನತಾರಾ ರೆಸಾರ್ಟ್ನ ಮಾಲೀಕ ಪುಲಕೀತ್ ಆರ್ಯ ಸಿಬ್ಬಂದಿ ಹಾಗೂ ಪುಲಕೀತ್ನ ಸಹಚರರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವೈಮನಸ್ಸಿನಿಂದ ಅಂಕಿತಾಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ಜಿಲ್ಲಾ ನ್ಯಾಯಾಧೀಶೆ ರೀನಾ ನೇಗಿ ಅವರು ಮೂವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಘೋಷಿಸಿ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಅಂಕಿತಾ ಪರವಾಗಿ ವಕೀಲ ಅಜಯ್ ಪಂತ್ ವಾದಿಸಿದ್ದರು.
ಪ್ರಮುಖ ಆರೋಪಿ ಪುಲಕೀತ್ ಆರ್ಯ, ಉತ್ತರಾಖಂಡದ ಬಿಜೆಪಿ ನಾಯಕನಾಗಿದ್ದ ವಿನೋದ್ ಆರ್ಯ ಅವರ ಮಗನಾಗಿದ್ದಾನೆ. ಅಂಕಿತಾ ಕೊಲೆ ಪ್ರಕರಣದ ನಂತರ ವಿನೋದ್ ಆರ್ಯ ಅವರನ್ನು ಬಿಜೆಪಿಯಿಂದ ಹೊರಹಾಕಲಾಗಿತ್ತು.
ಅಂಕಿತಾ ಭಂಡಾರಿ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಗಮನ ಸೆಳೆದಿತ್ತು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರು ಮತ್ತು ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದವು. ಈ ತೀರ್ಪು ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಒದಗಿಸಿದೆ ಎಂದು ಪರಿಗಣಿಸಲಾಗಿದೆ.