ಅಮರನಾಥ ಯಾತ್ರೆಗೆ ಬಿಗಿ ಭದ್ರತೆ; ಎಚ್ಚರಿಕೆಯಿಂದಿರಲು ಭದ್ರತಾ ಪಡೆಗಳಿಗೆ ಅಮಿತ್ ಶಾ ಸೂಚನೆ

ಯಾತ್ರಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ. ಗುರುವಾರ ರಾತ್ರಿ ಜಮ್ಮುವಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಶಾ ಈ ಹೇಳಿಕೆ ನೀಡಿದ್ದಾರೆ.;

Update: 2025-05-30 05:32 GMT

ಮುಂಬರುವ ಅಮರನಾಥ ಯಾತ್ರೆಯು ಸುಗಮವಾಗಿ ನಡೆಯುವುದಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ವೇಳೆ ಅವರು ಭದ್ರತಾ ಪಡೆಗಳಿಗೆ ಗರಿಷ್ಠ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.

ಯಾತ್ರಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ. ಗುರುವಾರ ರಾತ್ರಿ ಜಮ್ಮುವಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಶಾ ಈ ಹೇಳಿಕೆ ನೀಡಿದ್ದಾರೆ.

ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಸ್ತುತ ಭದ್ರತಾ ಪರಿಸ್ಥಿತಿ ಮತ್ತು ಅಮರನಾಥ ಯಾತ್ರೆಗೆ ಮಾಡಿರುವ ಸಿದ್ಧತೆಗಳನ್ನು ವಿವರವಾಗಿ ಪರಿಶೀಲಿಸಲಾಯಿತು. "ಅಮರನಾಥ ಯಾತ್ರೆಗಾಗಿ ಸಭೆ ನಡೆಸಿ, ಯಾತ್ರಿಗಳಿಗಾಗಿ ಮಾಡಿರುವ ಭದ್ರತಾ ವ್ಯವಸ್ಥೆಗಳು ಮತ್ತು ಸಿದ್ಧತೆಗಳನ್ನು ಮೌಲ್ಯಮಾಪನ ಮಾಡಿದೆ. ಗರಿಷ್ಠ ಎಚ್ಚರಿಕೆಯಿಂದಿರಲು ಮತ್ತು ಈ ಯಾತ್ರೆಯನ್ನು ಸುಗಮವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ," ಎಂದು ಶಾ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಾರ್ಷಿಕ ಅಮರನಾಥ ಯಾತ್ರೆಯು ಜುಲೈ 3ರಂದು ಪ್ರಾರಂಭವಾಗಿ ಆಗಸ್ಟ್ 9ರಂದು ಕೊನೆಗೊಳ್ಳಲಿದೆ.

ಅಮಿತ್ ಶಾ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿ

ಗುರುವಾರ ಸಂಜೆ ಬಿಗಿ ಭದ್ರತೆಯೊಂದಿಗೆ ಶಾ ಜಮ್ಮುವಿಗೆ ಭೇಟಿ ನೀಡಿದರು. ಇದು 'ಆಪರೇಷನ್ ಸಿಂದೂರ್' ನಂತರದ ಎರಡನೇ ಭೇಟಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರ, ಅಮಿತ್ ಶಾ ಅವರು ಪೂಂಚ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಪಾಕಿಸ್ತಾನದ ಗುಂಡಿನ ದಾಳಿಯಿಂದ ಬಾಧಿತರಾದ ಜನರನ್ನು ಭೇಟಿಯಾಗಿ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಜೊತೆಗೆ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ಇತ್ತೀಚೆಗೆ ಮೇ 7ರಿಂದ ಮೇ 10 ರವರೆಗೆ ಪಾಕಿಸ್ತಾನದ ಗುಂಡಿನ ದಾಳಿ ಮತ್ತು ಡ್ರೋನ್ ದಾಳಿಗಳಿಂದ ಒಟ್ಟು 28 ಸಾವುಗಳು ಸಂಭವಿಸಿದೆ.

ಬೃಹತ್ ಭದ್ರತಾ ನಿಯೋಜನೆ

ಅಮರನಾಥ ಯಾತ್ರೆಯ ಸುರಕ್ಷತೆಗಾಗಿ ಕೇಂದ್ರವು ಬೃಹತ್ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲು ನಿರ್ಧರಿಸಿದೆ. ಅಧಿಕಾರಿ ಮೂಲಗಳ ಪ್ರಕಾರ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) 581 ಕಂಪನಿಗಳನ್ನು, ಅಂದಾಜು 42,000 ಆನ್-ಗ್ರೌಂಡ್ ಸಿಬ್ಬಂದಿಯನ್ನು ನಿಯೋಜಿಸಲು ಆದೇಶಿಸಲಾಗಿದೆ. ಇದರಲ್ಲಿ 424 ಕಂಪನಿಗಳನ್ನು ಜಮ್ಮು ಕಾಶ್ಮೀರಕ್ಕೆ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಉಳಿದ ಕಂಪನಿಗಳು, 'ಆಪರೇಷನ್ ಸಿಂದೂರ್' ಸಮಯದಲ್ಲಿ ಜಮ್ಮು-ಕಾಶ್ಮೀರಕ್ಕೆ ನಿಯೋಜಿಸಲಾಗಿದ್ದ ಸುಮಾರು 80 ಕಂಪನಿಗಳನ್ನು ಒಳಗೊಂಡಿದ್ದು, ಯಾತ್ರಾ ಮಾರ್ಗ, ಯಾತ್ರಿಗಳು ಮತ್ತು ಶ್ರೀನಗರ ಸೇರಿದಂತೆ ಇತರ ಪ್ರದೇಶಗಳಲ್ಲಿ ಭದ್ರತೆ ಏರ್ಪಡಿಸಲಿದೆ.

Tags:    

Similar News