ಉತ್ತರ ಕನ್ನಡ: ದೇವಿಮನೆ ಘಟ್ಟದಲ್ಲಿ ಮತ್ತೆ ಭೂಕುಸಿತ, ಶಿರಸಿ-ಕುಮಟಾ ಸಂಪರ್ಕ ಕಡಿತ
ಶನಿವಾರ ರಾತ್ರಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯೇ ಈ ಭೂಕುಸಿತಕ್ಕೆ ಕಾರಣ. ಪ್ರಸ್ತುತ ರಸ್ತೆ ನಿರ್ಮಾಣ ಕಂಪನಿಯು ತೆರವು ಕಾರ್ಯವನ್ನು ಆರಂಭಿಸಿದೆ ಎಂದು ತಾಲೂಕು ಆಡಳಿತ ಮಾಹಿತಿ ನೀಡಿದೆ.;
ಶಿರಸಿ-ಕುಮಟಾ ಸಂಪರ್ಕ ರಸ್ತೆಯ ಪ್ರಮುಖ ಪ್ರದೇಶವಾಗಿರುವ ದೇವಿಮನೆ ಘಟ್ಟ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ. ಕಳೆದೆರಡು ದಿನಗಳ ಅವಧಿಯಲ್ಲಿ ಇದೇ ಪ್ರದೇಶದಲ್ಲಿ ನಡೆದ ಎರಡನೇ ಭೂಕುಸಿತ ಇದಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಶನಿವಾರ ರಾತ್ರಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯೇ ಈ ಭೂಕುಸಿತಕ್ಕೆ ಕಾರಣ. ಪ್ರಸ್ತುತ ರಸ್ತೆ ನಿರ್ಮಾಣ ಕಂಪನಿಯು ತೆರವು ಕಾರ್ಯವನ್ನು ಆರಂಭಿಸಿದೆ ಎಂದು ತಾಲೂಕು ಆಡಳಿತ ಮಾಹಿತಿ ನೀಡಿದೆ.
ಆದರೆ, ಸ್ಥಳೀಯರು ಮತ್ತು ತಜ್ಞರ ಪ್ರಕಾರ, ಶಿರಸಿ ಮತ್ತು ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವೇಳೆ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಿರುವುದು ಪದೇ ಪದೇ ಭೂಕುಸಿತಕ್ಕೆ ಕಾರಣವಾಗುತ್ತಿದೆ. ಕಳೆದ ಮಳೆಗಾಲದ ಸಂದರ್ಭದಲ್ಲಿಯೂ ಇದೇ ಪ್ರದೇಶದಲ್ಲಿ ಭೂಕುಸಿತಗಳು ಸಂಭವಿಸಿದ್ದವು. ಈ ಬಾರಿ ಮಳೆಗಾಲದ ಆರಂಭದಲ್ಲೇ ಎರಡು ಬಾರಿ ಘಟನೆ ಜರುಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯರಾದ ದೇವರಾಜ ಮರಾಠಿ ಮಾತನಾಡಿ, "ಜೋರು ಮಳೆಯಾದರೆ ಇನ್ನಷ್ಟು ಕಡೆ ಅಪಾಯವಾಗುವ ಸಾಧ್ಯತೆಯಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಎಂದರೆ ಭಯದಲ್ಲೇ ಸಾಗುವಂತಾಗಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿಯ ವೈಜ್ಞಾನಿಕ ವಿಧಾನಗಳ ಬಗ್ಗೆ ತಜ್ಞರು ಪರಿಶೀಲಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಸದ್ಯಕ್ಕೆ, ಶಿರಸಿ-ಕುಮಟಾ ನಡುವಿನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸಬೇಕಿದೆ.