ದಕ್ಷಿಣ ಕರ್ನಾಟಕದಲ್ಲಿ ಆಶಾದಾಯಕ ಚಿತ್ರಣ
ಇದಕ್ಕೆ ಸಂಪೂರ್ಣ ವ್ಯತಿರಿಕ್ತ ಚಿತ್ರಣ ದಕ್ಷಿಣ ಕರ್ನಾಟಕದಲ್ಲಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಂತಹ ಬಯಲುಸೀಮೆ ಪ್ರದೇಶಗಳಲ್ಲಿ ಇದೇ ಮಳೆ 'ಅಮೃತಧಾರೆ'ಯಾಗಿ ಪರಿಣಮಿಸಿದೆ. ಬರಗಾಲದ ಅಂಚಿನಲ್ಲಿದ್ದ ಈ ಪ್ರದೇಶಗಳಲ್ಲಿ ಕೆರೆ-ಕಟ್ಟೆಗಳು ತುಂಬಿ, ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.
ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿದ ರೈತ ಮುಖಂಡ ವಾಸುದೇವ ಟಿ.ಜಿ., "ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಬಯಲು ಸೀಮೆ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬೆಳೆಗಳು ನಳನಳಿಸುತ್ತಿವೆ. ಕೊರಟಗೆರೆ, ಶಿರಾ ಭಾಗದಲ್ಲಿ ಶೇಂಗಾ ಬೆಳೆ ಕಟಾವು ಮಾಡಲು ಇದೀಗ ಮಳೆ ಬೇಕಿತ್ತು. ಮಳೆ ಬಂದಿರುವುದು ರೈತರಿಗೆ ಅನುಕೂಲವಾಗಿದೆ. ತೆನೆ ಕಟ್ಟುತ್ತಿರುವ ರಾಗಿ ಹಾಗೂ ಕೆಲವೆಡೆ ಹುರುಳಿ ಬೆಳೆಗೂ ಇದು ವರದಾನವಾಗಿದೆ. ಈ ಬಾರಿ ರಾಗಿ ಉತ್ತಮ ಇಳುವರಿಯಾಗುವ ಸಾಧ್ಯತೆ ಇದೆ" ಎಂದು ಸಂತಸ ವ್ಯಕ್ತಪಡಿಸಿದರು.
ಪರಿಹಾರಕ್ಕಾಗಿ ಮೊರೆ
ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ರೈತರು ಈಗ ಸಂಪೂರ್ಣವಾಗಿ ಸರ್ಕಾರದ ನೆರವನ್ನೇ ನೆಚ್ಚಿಕೊಂಡಿದ್ದಾರೆ. ಬ್ಯಾಂಕ್ಗಳಿಂದ ಸಾಲ ಪಡೆದ ರೈತರಿಗೆ ಮರುಪಾವತಿ ಮಾಡುವಂತೆ ನೋಟಿಸ್ಗಳು ಬರುತ್ತಿದ್ದು, ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ.
ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಎಚ್ ಕೊಮಾರ್, "ಅಕಾಲಿಕ ಮಳೆಯಿಂದ ಈರುಳ್ಳಿ, ಉದ್ದು, ತೊಗರಿ, ಸೋಯಾಬಿನ್ ಸಂಪೂರ್ಣ ನಾಶವಾಗಿವೆ. ಕ್ವಿಂಟಾಲ್ ಉದ್ದಿಗೆ 9,000 ಬೆಲೆ ಇರುತ್ತಿತ್ತು, ಇದೀಗ 4,000 ದಿಂದ ಇಳಿಕೆಯಾಗಿದೆ.. ಪ್ರತಿಪಕ್ಷದ ನಾಯಕರು ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಸೂಕ್ತ ಪರಿಹಾರ ಕೊಡಿಸಬೇಕು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕುಸಿದ ಮನೆಗಳಿಗೆ ತಲಾ 5 ಲಕ್ಷ ರೂ. ಹಾಗೂ ಬೆಳೆಗಳಿಗೆ ಉತ್ತಮ ಪರಿಹಾರ ನೀಡಿದ್ದರು. ಅದೇ ರೀತಿ, ಈಗಿನ ಸರ್ಕಾರವೂ ಹೆಚ್ಚಿನ ಪರಿಹಾರ ಘೋಷಿಸಬೇಕು" ಎಂದು ಆಗ್ರಹಿಸಿದರು.
ಬೆಲೆ ಇಲ್ಲ
ಇತ್ತ ದಕ್ಷಿಣದಲ್ಲಿ, ಉತ್ತಮ ಇಳುವರಿ ಬಂದರೂ ರಾಗಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಎಂಬ ಅಸಮಾಧಾನವಿದೆ. ಈ ಬಗ್ಗೆ ಅಭಿಪ್ರಾಯಪಟ್ಟ ರಾಜ್ಯ ರೈತ ಪ್ರಾಂತ ಸಂಘದ ಮುಖಂಡ ವಸಂತ್ ಕುಮಾರ್ ಸಿ.ಕೆ. ಮಾತನಾಡಿ, "ರಾಗಿ ಉತ್ತಮವಾಗಿ ಇಳುವರಿ ಬಂದರೂ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಸರ್ಕಾರ ಕ್ವಿಂಟಾಲ್ ರಾಗಿಗೆ 4,200 ರೂ. ನಿಗದಿಪಡಿಸಿದೆ. ಆದರೆ ಬೇಸಾಯದ ಖರ್ಚು ಹೆಚ್ಚಾಗಿದ್ದು, ಸರ್ಕಾರ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು" ಎಂದು ಒತ್ತಾಯಿಸಿದ್ದಾರೆ.