ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬೆಂಗಳೂರಿನಲ್ಲಿ ರೈತರೊಂದಿಗೆ ಸಂವಾದ

ಲ್ಯಾಬ್‌ನಿಂದ ಲ್ಯಾಂಡ್‌ಗೆ ಸಂಶೋಧನೆಯ ಫಲಿತಾಂಶಗಳು ತಕ್ಷಣವೇ ರೈತರಿಗೆ ತಲುಪಬೇಕು. ರೈತರ ಜ್ಞಾನವನ್ನು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು" ಎಂದು ಅವರು ಒತ್ತಿ ಹೇಳಿದರು.;

Update: 2025-06-08 12:42 GMT

ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ದ 11ನೇ ದಿನದಂದು ರೈತರೊಂದಿಗೆ ಸಂವಾದ ನಡೆಸಿದರು.

15 ದಿನಗಳ ಈ ಅಭಿಯಾನವು ಮೇ 29ರಂದು ಒಡಿಶಾದಿಂದ ಆರಂಭವಾಗಿದ್ದು, ಜೂನ್ 12 ರವರೆಗೆ ಮುಂದುವರಿಯಲಿದೆ. ಈಗಾಗಲೇ ಅವರು ಒಡಿಶಾ, ಜಮ್ಮು, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ ಮತ್ತು ಮಧ್ಯಪ್ರದೇಶದ ರೈತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಸಂವಾದದ ವೇಳೆ, ಚೌಹಾಣ್ ಅವರು ಬೆಂಗಳೂರು ಗ್ರಾಮೀಣ ಪ್ರದೇಶದ ರೈತರ ತೋಟಗಾರಿಕಾ ಸಾಧನೆಯನ್ನು ಶ್ಲಾಘಿಸಿದರು. ಕಮಲಂ (ಡ್ರಾಗನ್ ಫ್ರೂಟ್) ಕೃಷಿಯ ಬಗ್ಗೆ ಮಾತನಾಡಿದ ಅವರು, "ಮೊದಲ ಎರಡು ವರ್ಷಗಳಲ್ಲಿ ಲಾಭ ಕಡಿಮೆ ಇದ್ದರೂ, ಮೂರನೇ ವರ್ಷದಿಂದ ರೈತರು ವಾರ್ಷಿಕವಾಗಿ 6 ರಿಂದ 7 ಲಕ್ಷ ರೂಪಾಯಿಗಳ ಆದಾಯ ಗಳಿಸಬಹುದು" ಎಂದು ತಿಳಿಸಿದರು. ರೈತರು ಈಗ ವಿಜ್ಞಾನಿಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಕೃಷಿಯಲ್ಲಿ ಹೊಸ ಆಯಾಮವನ್ನು ಸೇರಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತೀಯ ತೋಟಗಾರಿಕೆ ಸಂಸ್ಥೆಯಲ್ಲಿ ನಡೆಯುತ್ತಿರುವ ಸಂಶೋಧನೆಯನ್ನು ಸಚಿವರು ಕೊಂಡಾಡಿದರು. "ಲ್ಯಾಬ್‌ನಿಂದ ಲ್ಯಾಂಡ್‌ಗೆ ಸಂಶೋಧನೆಯ ಫಲಿತಾಂಶಗಳು ತಕ್ಷಣವೇ ರೈತರಿಗೆ ತಲುಪಬೇಕು. ರೈತರ ಜ್ಞಾನವನ್ನು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು" ಎಂದು ಅವರು ಒತ್ತಿ ಹೇಳಿದರು.

ಸರ್ಕಾರದ ನೆರವಿನ ಭವರಸೆ 

ದೇಶದ ಜಿಡಿಪಿಯಲ್ಲಿ ಕೃಷಿಯ 5.4% ಕೊಡುಗೆಯನ್ನು ಶ್ಲಾಘಿಸಿದ ಚೌಹಾಣ್, "ಕೃಷಿ ಉತ್ಪಾದನೆ ದಾಖಲೆ ಮಟ್ಟದಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 145 ಕೋಟಿ ಜನಸಂಖ್ಯೆಗೆ ಪೋಷಕ ಆಹಾರವನ್ನು ಒದಗಿಸುವ ಗುರಿಯನ್ನು ಸಾಧಿಸಲಾಗುತ್ತಿದೆ" ಎಂದರು. ಆಹಾರ ಭದ್ರತೆ, ಪೋಷಕ ಆಹಾರ, ಲಾಭದಾಯಕ ಕೃಷಿ ಮತ್ತು ಮಣ್ಣಿನ ಸೃಜನಶಕ್ತಿಯ ರಕ್ಷಣೆ, ಇವೇ ಸರ್ಕಾರದ ನಾಲ್ಕು ಪ್ರಮುಖ ಗುರಿಗಳಾಗಿವೆ ಎಂದು ಅವರು ಸ್ಪಷ್ಟಪಡಿಸಿದರು.

ನಕಲಿ ಬೀಜಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ನಕಲಿ ಬೀಜಗಳು ಮತ್ತು ಕೀಟನಾಶಕಗಳ ತಯಾರಕರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ಚೌಹಾಣ್ ಎಚ್ಚರಿಕೆ ನೀಡಿದರು. "ರೈತರ ಆರ್ಥಿಕ ಯೋಗಕ್ಷೇಮಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. 'ಒಂದು ರಾಷ್ಟ್ರ – ಒಂದು ಕೃಷಿ – ಒಂದು ತಂಡ' ಎಂಬ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಅವರು ತಿಳಿಸಿದರು.

ರೈತರು ಪಾರಂಪರಿಕ ಕೃಷಿಗೆ ಮಾತ್ರ ಸೀಮಿತವಾಗದೆ, ವೈವಿಧ್ಯಮಯ ಕೃಷಿ, ಆಹಾರ ಸಂಸ್ಕರಣೆ, ಮತ್ತು ರಫ್ತು ಸಾಧನೆಗಳತ್ತ ಗಮನ ಹರಿಸಬೇಕು ಎಂದು ಸಚಿವರು ಸಲಹೆ ನೀಡಿದರು. "ರೈತರ ಸಮೃದ್ಧಿಯೇ ನಮ್ಮ ಗುರಿಯಾಗಿದೆ. ಕೇಂದ್ರ ಸರ್ಕಾರ ಯಾವತ್ತೂ ರೈತರ ಬೆಂಬಲಕ್ಕೆ ನಿಂತಿದೆ" ಎಂದು ಅವರು ಒತ್ತಿ ಹೇಳಿದರು.

ಸಂಸದ ಸುಧಾಕರ್, ಶಾಸಕ ಎಸ್.ಆರ್. ವಿಶ್ವನಾಥ್, ಭಾರತೀಯ ತೋಟಗಾರಿಕೆ ಸಂಸ್ಥೆಯ ಮಹಾನಿರ್ದೇಶಕ ಡಾ. ಎಸ್.ಕೆ. ಸಿಂಗ್. ಪಶುವೈದ್ಯಕೀಯ ಸಂಸ್ಥೆಯ ಮಹಾನಿರ್ದೇಶಕ ಡಾ. ರಾಘವೇಂದ್ರ ಭಟ್ಟ, ಬೆಂಗಳೂರಿನ ತೋಟಗಾರಿಕೆ ಸಂಸ್ಥೆಯ ನಿರ್ದೇಶಕ ಡಾ. ವಿ. ಸುಬ್ರಮಣ್ಯಂ ಸೇರಿದಂತೆ ಹಲವಾರು ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ರೈತರು ಉಪಸ್ಥಿತರಿದ್ದರು.

ಈ ಅಭಿಯಾನದ ಮೂಲಕ ಕೇಂದ್ರ ಸರ್ಕಾರವು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ಸಂಶೋಧನೆ, ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

---

Tags:    

Similar News