ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಭೀಕರ ಸರಣಿ ಅಪಘಾತ: ಲಾರಿ ಚಾಲಕ ಸಾವು
ಹೆಬ್ಬಾಳದ ಕೊಡಿಗೇಹಳ್ಳಿ ಫ್ಲೈಓವರ್ ಮೇಲೆ ಇಂದು (ಶುಕ್ರವಾರ ಮಧ್ಯರಾತ್ರಿ) ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಮೂರು ವಾಹನಗಳ ನಡುವೆ ಡಿಕ್ಕಿಯಾಗಿ ಕಸದ ಲಾರಿ ಚಾಲಕರೊಬ್ಬರು ಮೃತಪಟ್ಟಿದ್ದಾರೆ.;

ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಮಧ್ಯರಾತ್ರಿ ಸುಮಾರು ಎರಡು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. 10 ಚಕ್ರಗಳ ಓಪನ್ ಬಾಡಿ ವಾಹನ, ಬಿಬಿಎಂಪಿ ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಕಸ ತುಂಬಿದ್ದ ಲಾರಿಯ ಮೇಲೆ ಕಲ್ಲು ತುಂಬಿದ್ದ ಟ್ರಕ್ ಪಲ್ಟಿಯಾಗಿದ್ದು, ಇದರ ಪರಿಣಾಮವಾಗಿ ಕಸದ ಲಾರಿ ಚಾಲಕ ಫಯಾಜ್ ಅಹಮ್ಮದ್ (ಬಿಹಾರ ಮೂಲದವರು) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇಬ್ಬರಿಗೆ ಗಾಯಗಳಾಗಿವೆ.
ಕಸದ ಲಾರಿ ಫ್ಲೈಓವರ್ನ ಬಲಬದಿಯಲ್ಲಿ ಕೆಟ್ಟು ನಿಂತಿತ್ತು ಎನ್ನಲಾಗಿದೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಲ್ಲು ತುಂಬಿದ್ದ 10 ಚಕ್ರಗಳ ಟ್ರಕ್, ಕೆಟ್ಟು ನಿಂತಿದ್ದ ಕಸದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಲ್ಲು ತುಂಬಿದ್ದ ಟ್ರಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಕಸದ ಲಾರಿ ಮತ್ತು ಪಲ್ಟಿಯಾದ ಟ್ರಕ್ನ ಮಧ್ಯೆ ಸಿಲುಕಿ ಲಾರಿ ಚಾಲಕ ಫಯಾಜ್ ಅಹಮ್ಮದ್ ಮೃತಪಟ್ಟಿದ್ದಾರೆ. ಅದೇ ಸಮಯದಲ್ಲಿ, ಹಿಂದೆ ಬರುತ್ತಿದ್ದ ಎರ್ಟಿಗಾ ಕಾರು ಸಹ ಅಪಘಾತಕ್ಕೀಡಾಗಿದೆ.
ಅಪಘಾತದಲ್ಲಿ ಮೃತಪಟ್ಟ ಚಾಲಕನ ದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯೇನು?
ಎರ್ಟಿಗಾ ಕಾರು ಚಾಲಕ ಸುನೀಲ್ ಮಾತನಾಡಿ "ಕಸದ ಲಾರಿ ರಸ್ತೆಯ ಬಲಗಡೆ ಕೆಟ್ಟು ನಿಂತಿತ್ತು. ಕಲ್ಲಿನ ಲಾರಿ ಚಾಲಕನಿಗೆ ಕೆಟ್ಟು ನಿಂತಿದ್ದ ಲಾರಿ ಕಾಣಿಸಿಲ್ಲ. ಹತ್ತಿರ ಬಂದು ಬ್ರೇಕ್ ಹಾಕಿದಾಗ ಕಂಟ್ರೋಲ್ ಸಿಗದೇ ಲಾರಿಗೆ ಗುದ್ದಿದ್ದಾನೆ. ನಾನು ಹಿಂದೆ ಬರುತ್ತಿದ್ದೆ, ಲಾರಿ ಗುದ್ದಿದ ರಭಸಕ್ಕೆ ಲಾರಿಯ ಕಲ್ಲುಗಳು ರಸ್ತೆಗೆ ಬಿದ್ದವು. ಎಡಭಾಗದಲ್ಲಿದ್ದ ನನ್ನ ಕಾರಿಗೂ ಲಾರಿ ಗುದ್ದಿತ್ತು. ನನ್ನ ಕಾರಿನಲ್ಲಿ ಒಂದು ಕುಟುಂಬವಿತ್ತು. ಕಾರು ಡಿವೈಡರ್ ಮೇಲೆ ಹತ್ತಿ ನಿಂತಿತ್ತು. ನಾನು ಕಾರಿನಲ್ಲಿದ್ದವರನ್ನು ಡೋರ್ ಓಪನ್ ಮಾಡಿ ಕೆಳಕ್ಕೆ ಇಳಿಸಿದೆ" ಎಂದು ಘಟನೆಯ ವಿವರ ನೀಡಿದ್ದಾರೆ.
ಈ ಭೀಕರ ಅಪಘಾತದಿಂದಾಗಿ ಹೆಬ್ಬಾಳ ಫ್ಲೈಓವರ್ನಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.