ಕಮಲ್ ಹಾಸನ್ ಭಾಷಾ ವಿವಾದ: ಥಗ್​ ಲೈಫ್​ ಚಿತ್ರಕ್ಕೆ ​ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂ.10ಕ್ಕೆ ಮುಂದೂಡಿದ ಹೈಕೋರ್ಟ್​

ಕಮಲ್ ಹಾಸನ್ ನಿರ್ಮಾಪಕರಾಗಿರುವ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್​ ಜೂನ್ 10ಕ್ಕೆ ಮುಂದೂಡಿದೆ. ಈ ವೇಳೆ ಕಮಲ್​ ಕ್ಷಮೆ ಕೋರಲು ನಿರಾಕರಿಸುತ್ತಿರುವ ಬಗ್ಗೆ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿತು.;

Update: 2025-06-03 10:06 GMT

ಕಮಲ್ ಹಾಸನ್ ನಿರ್ಮಾಪಕರಾಗಿರುವ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್​ ಜೂನ್ 10ಕ್ಕೆ ಮುಂದೂಡಿದೆ. ಈ ವೇಳೆ ಕಮಲ್​ ಕ್ಷಮೆ ಕೋರಲು ನಿರಾಕರಿಸುತ್ತಿರುವ ಬಗ್ಗೆ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿತು.

ಮಂಗಳವಾರ (ಜೂನ್​​3)ರಂದು ನಡೆದ ವಿಚಾರಣೆ ವೇಳೆ ಕಮಲ್ ಪರ ವಕೀಲರು, ಪೊಲೀಸ್​ ಭದ್ರತೆ ಕುರಿತ ವಿಷಯವನ್ನು ಹಿಂಪಡೆದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೋರಿದ್ದ ಕ್ಷಮಾಪಣೆ ಕುರಿತು ಸಮಾಲೋಚನೆ ನಡೆಸುವುದಾಗಿ ಹೇಳಿದ ಕಾರಣ ಅಂದು ಆ ವಿಷಯ ಮಾತ್ರ ವಿಚಾರಣೆಗೆ ಬರಲಿದೆ.

ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಕೆಎಫ್‌ಸಿಸಿ) ಕ್ಷಮೆ ಕೋರುವಂತೆ ಕೇಳಿತ್ತು. ವಿಚಾರಣೆ ನಡುವೆ ಅವರು ಕಮಲ್ ಸ್ಪಷ್ಟನೆಯ ಪತ್ರವೊಂದನ್ನು ವಾಣಿಜ್ಯ ಮಂಡಳಿಗೆ ರವಾನಿಸಿದೆ. ಅದನ್ನು ನ್ಯಾ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಕಮಲ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಓದಿದರು. ಆ ಪತ್ರದಲ್ಲಿ 'ಕ್ಷಮೆ' ಎಂಬ ಪದ ಇರಲಿಲ್ಲ. ಅದಕ್ಕೆ ಪೀಠ ಬೇಸರ ವ್ಯಕ್ತಪಡಿಸಿತು.

ವಿಚಾರಣೆ ಮುಂದೂಡಿಕೆ

ಬೆಳಗ್ಗೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್​​, ಆರಂಭದಲ್ಲಿಯೇ ಕಮಲ್ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿತು. ವಾಕ್​ ಸ್ವಾತಂತ್ರ್ಯ ಇದೆ ಎಂದು ಹೇಳಿಕೆಗಳನ್ನು ನೀಡಬಾರದು. ಇನ್ನೊಬ್ಬರ, ಪರ ಭಾಷಿಕರ ಭಾವನೆಗಳ ಬಗ್ಗೆಯೂ ಕಾಳಜಿ ಇರಬೇಕು ಎಂದು ಹೇಳಿತು. ನ್ಯಾಯ ಪೀಠ ಕ್ಷಮೆಯಿಂದ ಮಾತ್ರ ಕಮಲ್ ಪಾರಾಗಬಹುದು ಎಂದು ಅಭಿಪ್ರಾಯಪಡುತ್ತಿರುವುದನ್ನು ಗಮನಿಸಿದ ಕಮಲ್​ ಪರ ವಕೀಲರು ಕಮಲ್ ಅವರಿಗೆ ಸಂದೇಶ ರವಾನಿಸಲು ಸಮಯ ಕೊಡುವಂತೆ ಕೋರಿದರು. ಬಳಿಕ 2.30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಯಿತು.

ಮಧ್ಯಾಹ್ನದ ಬಳಿಕ ವಿಚಾರಣೆ ಆರಂಭಿಸಿದ ಕೋರ್ಟ್​ ಮುಂದೆ ನ್ಯಾಯವಾದಿ ಧ್ಯಾನ್ ಚಿನ್ನಪ್ಪ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಳುಹಿಸಿದ ಪತ್ರದ ಬಗ್ಗೆ ವಿವರಿಸಿದರು.

ವಿಚಾರಣೆಯ ಸಂದರ್ಭದಲ್ಲಿ ಪೀಠವು, ಕಮಲ್ ಹಾಸನ್ ಅವರ ಹೇಳಿಕೆಯಿಂದ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. " ಕಮಲ್​ ಹಾಸನ್​ ತಮ್ಮ ಪತ್ರದಲ್ಲಿ ಕ್ಷಮೆಯ ವಿಷಯ ಸೇರಿಸಿದ್ದರೆ ಈ ಸಮಸ್ಯೆ ತಲೆದೋರಿರಲಿಲ್ಲ" ಎಂದು ಪೀಠವು ಅಭಿಪ್ರಾಯಪಟ್ಟಿತು. ಇದಕ್ಕೆ ಪ್ರತಿಕ್ರಿಯಿಸಿದ ಧ್ಯಾನ್ ಚಿನ್ನಪ್ಪ, "ಕಮಲ್ ಹಾಸನ್ ಅವರಿಗೆ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಅಪಾರ ಅಭಿಮಾನವಿದೆ. ಅವರು ತಮ್ಮ ವೈಯಕ್ತಿಕ ನಿಲುವನ್ನು ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ" ಎಂದು ವಾದಿಸಿದರು.

ಈ ವೇಳೆ ನ್ಯಾಯಪೀಠ ಪತ್ರವನ್ನು ಯಾವಾಗ ಕಳುಹಿಸಿದ್ದಾರೆ ಎಂದು ಕೇಳಿದರು. ಈ ವೇಳೆ ವಕೀಲರು, ಕಮಲ್ ಹಾಸನ್ ವಿದೇಶದಲ್ಲಿದ್ದ ಕಾರಣ ಪತ್ರವನ್ನು ತಡವಾಗಿ ಕಳುಹಿಸಿದ್ದಾರೆ ಎಂದು ತಿಳಿಸಿದರು. ಅಲ್ಲದೆ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಚರ್ಚೆಗೆ ಸಿದ್ಧರಿರುವುದಾಗಿ ಹೇಳಿ ವಿಚಾರಣೆಯನ್ನು ಒಂದು ವಾರ ಮುಂದೂಡಲು ಕೋರಿದರು. ಈ ವೇಳೆ ಪೊಲೀಸ್ ಬಂದೋಬಸ್ತ್ ಅಗತ್ಯವಿಲ್ಲದ ಎಂದು ಕೋರ್ಟ್ ಹೇಳಿದ ಪೀಠವು ಈ ಮಾತುಕತೆಯ ಕೋರಿಕೆಯನ್ನು ಒಪ್ಪಿಕೊಂಡು ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು.

ವಿಚಾರಣೆಯ ಸಂದರ್ಭದಲ್ಲಿ​ "ಹಲವು ಭಾಷೆಗಳಿರಬಹುದು, ಆದರೆ ದೇಶ ಒಂದೇ" ಎಂದು ಪೀಠವು ಒತ್ತಿ ಹೇಳಿತು. ಇದಕ್ಕೆ ಧ್ಯಾನ್ ಚಿನ್ನಪ್ಪ, "ತಮಿಳು ಸೇರಿದಂತೆ ಎಲ್ಲ ಭಾಷೆಗಳಿಗೂ ಇಲ್ಲಿ ಸ್ಥಾನವಿದೆ. ಎಲ್ಲರೂ ಒಟ್ಟಿಗೆ ಉಳಿಯಬೇಕು" ಎಂದು ಪ್ರತಿಕ್ರಿಯಿಸಿದರು. ಕಮಲ್ ಹಾಸನ್ ಪರವಾಗಿ ಧ್ಯಾನ್ ಚಿನ್ನಪ್ಪ ಅವರ ವಾದವನ್ನು ಗಮನಿಸಿದ ನ್ಯಾಯಪೀಠ, "ಶೌರ್ಯದ ಮಹತ್ವ ಅಡಕವಾಗಿರುವುದು ವಿವೇಚನೆಯಲ್ಲಿ (Even now, discretion is the best part of valour)" ಎಂದು ಮೌಖಿಕವಾಗಿ ಹೇಳಿತು. 

Tags:    

Similar News