ರಾಜ್ಯದಲ್ಲಿ ಸಂಭವಿಸಿದ 2ನೇ ಅತಿದೊಡ್ಡ ಕಾಲ್ತುಳಿತ ದುರಂತ
1981ರಲ್ಲಿ ನಡೆದ ವೀನಸ್ ಸರ್ಕಸ್ ಪ್ರದರ್ಶನದ ವೇಳೆ ಬೆಂಕಿ ಅನಾಹುತದಿಂದಾಗಿ 92 ಮಂದಿ ಸಾವನ್ನಪ್ಪಿದರು. ಇದೀಗ ರಾಜ್ಯದಲ್ಲಿ ನಡೆದ ಘಟನೆ ಎರಡನೇ ಅತಿ ದೊಡ್ಡ ಕಾಲ್ತುಳಿತ ದುರಂತವಾಗಿದೆ.;
18 ವರ್ಷಗಳ ಬಳಿಕ ಆರ್ಸಿಬಿ ತಂಡವು ಐಪಿಎಲ್ನ ಚೊಚ್ಚಲ ಕಪ್ ಪಡೆದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ದುರಂತ ಸಂಭವಿಸಿ ಹಲವು ಕುಟುಂಬಗಳಲ್ಲಿ ಸೂತಕ ಮನೆ ಮಾಡಿದೆ. ಆರ್ಸಿಬಿ ವಿಜಯೋತ್ಸವ ವೇಳೆ ನಡೆದ ಅವಘಡಕ್ಕೆ ಜನಾಕ್ರೋಶ ವ್ಯಕ್ತವಾಗುತ್ತಿದೆ.
ರಾಜ್ಯದ ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ರಾಜ್ಯದಲ್ಲಿ ಕಾಲ್ತುಳಿತ ಸಂಭವಿಸಿರುವುದು ರಾಜ್ಯದಲ್ಲಿ ಇದೇ ಮೊದಲಲ್ಲ. 44 ವರ್ಷಗಳ ಹಿಂದೆ ರಾಜ್ಯದಲ್ಲಿ ದೊಡ್ಡ ಕಾಲ್ತುಳಿತ ದುರಂತ ನಡೆದಿತ್ತು. ಈ ಸಂದರ್ಭದಲ್ಲಿ 92 ಮಂದಿ ಸಾವನ್ನಪ್ಪಿದ್ದರು. ನಂತರ ರಾಜ್ಯದಲ್ಲಿ ಕೆಲವೊಂದು ಕಾಲ್ತುಳಿತ ಸಂಭವಿಸಿವೆಯಾದರೂ ಇಷ್ಟೊಂದು ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿರಲಿಲ್ಲ. ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತವು ರಾಜ್ಯದಲ್ಲಿ ಸಂಭವಿಸಿದ ಎರಡನೇ ದೊಡ್ಡ ಕಾಲ್ತುಳಿತ ದುರಂತವಾಗಿದೆ.
ಆರ್ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಬಂದ ವೇಳೆ ಕಾಲ್ತುಳಿತಕ್ಕೆ 11 ಜನರು ಸಾವನ್ನಪ್ಪಿರುವುದು ರಾಜ್ಯದ ಕಾಲ್ತುಳಿತ ದುರಂತದ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಘಟನೆಯಾಗಿದೆ. ಈ ಹಿಂದೆ ೧೯೮೧ರಲ್ಲಿ ಬೆಂಗಳೂರಲ್ಲಿ ನಡೆದ ವೀನಸ್ ಸರ್ಕಸ್ ಅವಘಡ ನಡೆದಿತ್ತು. ಈ ದುರಂತದಲ್ಲಿ 92 ಮಂದಿ ಸಾವಪ್ಪಿದ್ದರು. ಬಳಿಕ ಈ ರೀತಿಯ ದೊಡ್ಡ ಕಾಲ್ತುಳಿತ ಸಂಭವಿಸಿರಲಿಲ್ಲ. ಇದೀಗ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಜಕ್ಕರಾಯನಕೆರೆಯಲ್ಲಿ 1981ರ ಫೆಬ್ರವರಿ 7ರಂದು ವೀನಸ್ ಸರ್ಕಸ್ ಪ್ರದರ್ಶನನಡೆಯುತ್ತಿತ್ತು. ಈ ಸಂದರ್ಭದಲ್ಲಿ ಎಲೆಕ್ಟ್ರಿಕಲ್ ಕೇಬಲ್ನಲ್ಲಿ ಶಾರ್ಟ್ ಸರ್ಕೂಟ್ ಸಂಭವಿಸಿತು. ಪರಿಣಾಮ ಸರ್ಕಸ್ನ ಟೆಂಟ್ಗೆ ಬೆಂಕಿ ಹೊತ್ತಿಕೊಂಡಿತು. ಅಂದು ಶಾಲಾ ಮಕ್ಕಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸರ್ಕಸ್ ವೀಕ್ಷಣೆ ಮಾಡುತ್ತಿದ್ದರು. ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಕೂಡಲೇ ಒಳಗೆ ಇದ್ದ ಜನರು ಓಡಿ ಹೋಗಲು ಮುಂದಾದರು. ಈ ವೇಳೆ ಭಾರೀ ಕಾಲ್ತುಳಿತ ಸಂಭವಿಸಿತು. ಓಡಿ ಹೋಗಲು ಸಾಧ್ಯವಾಗದೆ ಕೆಲವರು ಬೆಂಕಿಗೆ ಸಿಲುಕಬೇಕಾಯಿತು. ಕಾಲ್ತುಳಿತ ದುರಂತದಲ್ಲಿ 56 ಮಕ್ಕಳು ಸೇರಿದಂತೆ 92 ಮಂದಿ ಸಾವನ್ನಪ್ಪಿದ್ದರು. 300ಕ್ಕೂ ಹೆಚ್ಚಿನ ಮಂದಿ ಸುಟ್ಟ ಗಾಯಗಳಿಗೆ ತುತ್ತಾಗಿದ್ದರು ಎಂದು ಹೇಳಲಾಗಿದೆ.
ಬಳಿಕ 2016ರಲ್ಲಿ ಬೆಂಗಳೂರಿನ ಬಂಬೂ ಬಜಾರ್ನ ಎಕೆಪಿ ಕನ್ವೆಷನ್ ಸೆಂಟರ್ನಲ್ಲಿ ರೇಷನ್ ಟೋಕನ್ ನೀಡುವ ವೇಳೆ ನೂಕುನುಗ್ಗಲು ಸಂಭವಿಸಿ ಕಾಲ್ತುಳಿತ ನಡೆಯಿತು. ಟೋಕನ್ ಪಡೆಯುವುದಕ್ಕಾಗಿ ಏಕಾಏಕಿ ಹಲವು ಮಂದಿ ಬಂದ ಹಿನ್ನೆಲೆಯಲ್ಲಿ ದುರ್ಘಟನೆ ನಡೆದಿತ್ತು. ಇದರಲ್ಲಿ ಜೀನತ್ ಉನ್ನೀಸಾ ಎಂಬುವವರು ಸಾವನ್ನಪ್ಪಿದ್ದರು.
ಇನ್ನು,2024ರಲ್ಲಿ ವಿಜಯಪುರದ ಲಚಾಣ್ಯ ಗ್ರಾಮದಲ್ಲಿ ಸಿದ್ದಲಿಂಗ ಮಹಾರಾಜರ ರಥೋತ್ಸವ ಸಂದರ್ಭದಲ್ಲಿ ಎರಡು ದಿನಗಳ ಕಾಲ ಕಾಲ್ತುಳಿತ ಸಂಭವಿಸಿತು. ಎರಡು ದಿನ ನಡೆದ ಕಾಲ್ತುಳಿತದಲ್ಲಿ ಐವರು ಮೃತಪಟ್ಟಿದ್ದರು. 2024ರ ಏಪ್ರಿಲ್ 28ರಂದು ರಥೋತ್ಸವದ ಆರಂಭವಾಗಿದ್ದು, ಅದೇ ದಿನ ಕಾಲ್ತುಳಿತ ಸಂಭವಿಸಿ ಇಬ್ಬರು ಮೃತಪಟ್ಟರು. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದರು. ಮರುದಿನ ಏಪ್ರಿಲ್ 29ರಂದು ರಥ ಎಳೆಯುವ ವೇಳೆ ನೂಕುನುಗ್ಗಲು ಉಂಟಾಗಿ ಹಲವು ಮಂದಿ ರಥದ ಚಕ್ರಕ್ಕೆ ಸಿಲುಕಿದ್ದರು. ಘಟನೆಯಲ್ಲಿ ಮೂವರು ಸಾವನಪ್ಪಿ, ನಾಲ್ವರು ಗಾಯಗೊಂಡಿದ್ದರು.
ಇದೀಗ ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂಗೆ ಪ್ರವೇಶಿಸಲು ಏಕಾಏಕು ನುಗ್ಗಿದ ಪರಿಣಾಮ ಉಂಟಾದ ನೂಕುನುಗ್ಗಲಿನಿಂದಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.