ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ನೌಷಾದ್ ಮೇಲೆ ಕೈದಿಗಳಿಂದ ಹಲ್ಲೆಗೆ ಯತ್ನ

ವಿಚಾರಣಾಧೀನ ಕೈದಿಗಳು ತನ್ನ ಕಚೇರಿಯ ಮುಂಭಾಗ ನಿಂತು ಬಿ ಬ್ಯಾರಕ್‌ನಲ್ಲಿರುವ ಕೆಲವು ವಿಚಾರಣಾ ಕೈದಿಗಳನ್ನು ಗುರಾಯಿಸಿ ನೋಡಿದರು ಎಂಬ ಕಾರಣಕ್ಕೆ ಪರಸ್ಪರ ಅವಾಚ್ಯ ಶಬ್ದದಿಂದ ಬೈದಾಡಿಕೊಂಡರು. ಅಲ್ಲದೆ ಸಿಮೆಂಟ್ ಬ್ಲಾಕ್‌ಗಳನ್ನು ಹೊಡೆದು ಅದರ ತುಂಡುಗಳನ್ನು ಎಸೆದಿದ್ದಾರೆ.;

Update: 2025-05-20 06:58 GMT

ಸುಹಾಸ್‌ ಕೊಲೆ ಪ್ರಕರಣದ ಆರೋಪಿ ನೌಶಾದ್‌

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಮೊಹಮ್ಮದ್ ಫಾಝಿಲ್ ಕೊಲೆ ಪ್ರಕರಣದ ಆರೋಪಿಯೊಬ್ಬನ ಮೇಲೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸಹ ಕೈದಿಗಳು ದಾಳಿ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಚೊಟ್ಟೆ ನೌಷಾದ್ ಮೇಲೆ ಈ ದಾಳಿ ನಡೆದಿದೆ.

ಮಾಹಿತಿಗಳ ಪ್ರಕಾರ, ಚೊಟ್ಟೆ ನೌಷಾದ್ ಮೇಲೆ ಸಹ ಕೈದಿಗಳು ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದು, ಇದರಿಂದ ಆತನಿಗೆ ಗಾಯಗಳಾಗಿವೆ. ನೌಷಾದ್‌ನ ಪೊಲೀಸ್ ಕಸ್ಟಡಿ ಅವಧಿ ಸೋಮವಾರ ಕೊನೆಗೊಂಡಿತ್ತು. ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮೈಸೂರು ಕಾರಾಗೃಹಕ್ಕೆ ರವಾನಿಸಲು ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ, ಮಂಗಳೂರಿನ ಕಾರಾಗೃಹದಲ್ಲಿದ್ದ ತನ್ನ ಪರಿಚಯದ ಮತ್ತೊಬ್ಬ ಕೈದಿಯನ್ನು ಭೇಟಿಯಾಗಬೇಕೆಂದು ನೌಷಾದ್ ತಿಳಿಸಿದ್ದಾನೆ. ಅದಕ್ಕಾಗಿ ಪೊಲೀಸರು ಆತನನ್ನು ಕರೆತಂದಾಗ, ಇದ್ದಕ್ಕಿದ್ದಂತೆ ಸಹ ಕೈದಿಗಳು ನೌಷಾದ್ ಮೇಲೆ ದಾಳಿ ನಡೆಸಿದ್ದಾರೆ.

ಕಾರಾಗೃಹದಲ್ಲಿ ನಡೆದ ಗಲಾಟೆ

ಕಾರಾಗೃಹದ ಅಧೀಕ್ಷಕರು ನೀಡಿದ ದೂರಿನಂತೆ, ವಿಚಾರಣಾಧೀನ ಕೈದಿಗಳು ತಮ್ಮ ಕಚೇರಿಯ ಮುಂಭಾಗ ನಿಂತು ಬಿ ಬ್ಯಾರಕ್‌ನಲ್ಲಿರುವ ಕೆಲವು ವಿಚಾರಣಾ ಕೈದಿಗಳನ್ನು ಗುರಾಯಿಸಿ ನೋಡಿದ್ದಾರೆ. ಇದರಿಂದ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ನಂತರ ಸಿಮೆಂಟ್ ಬ್ಲಾಕ್‌ಗಳನ್ನು ಒಡೆದು ಅದರ ತುಂಡುಗಳನ್ನು ಎಸೆದಿದ್ದಾರೆ. ಬಿ ಬ್ಯಾರಕ್‌ನ ಮಧ್ಯದ್ವಾರದ ಗೇಟನ್ನು ದೂಡಿ ಹೊರಬಂದು ಕಚೇರಿಯ ಕೋಣೆಗೆ ನುಗ್ಗಿ ಬಾಗಿಲಿನ ಗ್ಲಾಸ್‌ನ್ನು ಕೈಯಿಂದ ಹೊಡೆದು ಹಾಳು ಮಾಡಿದ್ದಾರೆ. ಈ ಘಟನೆಯಲ್ಲಿ ಒಬ್ಬ ಕೈದಿಯ ಕಾಲಿಗೆ ಗಾಯವಾಗಿದೆ. ಈ ಸಂಬಂಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಕೂಡಲೇ ನಗರ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ದೌಡಾಯಿಸಿದ್ದು, ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಯಾರು ಈ ನೌಷಾದ್?

ಆರೋಪಿ ನೌಷಾದ್ ಅಲಿಯಾಸ್ ವಾಮಂಜೂರು ನೌಷಾದ್ ಅಲಿಯಾಸ್ ಚೊಟ್ಟೆ ನೌಷಾದ್, ಸುಹಾಸ್ ಶೆಟ್ಟಿ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ. ಇತನ ವಿರುದ್ಧ ಸುರತ್ಕಲ್, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ. ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 11 ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನೂ ಪ್ರತ್ಯೇಕ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. 

Tags:    

Similar News