Spike in Heart Attacks |ಹಾಸನದಲ್ಲಿ ಸರಣಿ ಹೃದಯಾಘಾತ: ಯುವಜನರ ಅಕಾಲಿಕ ಸಾವುಗಳ ರಹಸ್ಯ ಭೇದಿಸಲು ತಜ್ಞರ ಸಮಿತಿ ರಚನೆ
ಹಾಸನ ಜಿಲ್ಲೆಯಲ್ಲಿ ಯುವಕರು ಮತ್ತು ಮಧ್ಯ ವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿರುವುದು ಕಳವಳಕಾರಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಲಾಗಿದೆ.;
ರಾಜ್ಯಾದ್ಯಂತ ತೀವ್ರ ತಲ್ಲಣ ಸೃಷ್ಟಿಸಿರುವ ಹಾಸನ ಜಿಲ್ಲೆಯಲ್ಲಿನ ಸರಣಿ ಹೃದಯಾಘಾತ ಪ್ರಕರಣಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಯುವಕರು ಮತ್ತು ಮಧ್ಯವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿರುವುದು ಕಳವಳಕಾರಿಯಾಗಿದ್ದು, ಈ ಸಾವಿನ ಸರಣಿಯ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚುವ ಗುರಿಯನ್ನು ಸಮಿತಿ ಹೊಂದಿದೆ.
ಹೃದಯಾಘಾತದಲ್ಲಿ ಸಾವಿನ ಹೆಚ್ಚಳ, ತನಿಖೆಗೆ ಆದೇಶ
ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಅನಿರೀಕ್ಷಿತವಾಗಿ ಹೆಚ್ಚಿದ್ದು, ಇದು ರಾಜ್ಯದ ಆರೋಗ್ಯ ವಲಯದಲ್ಲಿ ಆತಂಕ ಮೂಡಿಸಿದೆ. ಈ ಗಂಭೀರ ಬೆಳವಣಿಗೆಯನ್ನು ಪರಿಗಣಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳು ಮತ್ತು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು. ಇದಕ್ಕಾಗಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಡಿಎಚ್ಒ (ಜಿಲ್ಲಾ ಆರೋಗ್ಯ ಅಧಿಕಾರಿ) ಹಾಗೂ ವೈದ್ಯಾಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಹೃದಯಾಘಾತದಿಂದ ಸಂಭವಿಸಿದ ಸಾವುಗಳ ಬಗ್ಗೆ ಈ ಸಮಿತಿ ಅಧ್ಯಯನ ನಡೆಸಿ, 10 ದಿನಗಳೊಳಗೆ ವರದಿ ಸಲ್ಲಿಸಲಿದೆ" ಎಂದು ಸಚಿವರು ಮಾಹಿತಿ ನೀಡಿದರು.
ಹೃದಯಾಘಾತಕ್ಕೆ ಜೀವನಶೈಲಿ, ಲಸಿಕೆ ಮತ್ತು ಪರಿಸರ ಕುರಿತು ಅಧ್ಯಯನ
ಡಾ. ಕೆ.ಎಸ್. ರವೀಂದ್ರನಾಥ್ ಅವರು ಮಾತನಾಡಿ, ರಾಜ್ಯದಲ್ಲಿ ಯುವ ಜನರೇ ಹೃದಯಾಘಾತಕ್ಕೆ ತುತ್ತಾಗುತ್ತಿರುವುದಕ್ಕೆ ಕಾರಣಗಳೇನು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿವೆಯೇ ಎಂಬುದನ್ನೂ ಪರಿಶೀಲಿಸಲಾಗುವುದು. ಆಧುನಿಕ ಜೀವನಶೈಲಿ, ಆಹಾರ ಪದ್ಧತಿ, ಮೊಬೈಲ್ ಫೋನ್ಗಳ ಅತಿಯಾದ ಬಳಕೆ ಮತ್ತು ಡಿಜಿಟಲ್ ವ್ಯಸನದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂಬ ಅಭಿಪ್ರಾಯವಿದೆ. ಚಿಕ್ಕ ವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಆತಂಕಕಾರಿ ಬೆಳವಣಿಗೆಯಾಗಿದೆ. ವಾಯು ಮಾಲಿನ್ಯ, ನೀರಿನ ಮಾಲಿನ್ಯ ಮತ್ತು ಅನಾರೋಗ್ಯಕರ ಆಹಾರವು ಆರೋಗ್ಯದ ಕ್ಷೀಣತೆಗೆ ಕಾರಣವಾಗಿರಬಹುದೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ.
ಈ ಹಿಂದೆ, ಹೃದಯಾಘಾತ ಪ್ರಕರಣಗಳ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ರವೀಂದ್ರನಾಥ್ ನೇತೃತ್ವದಲ್ಲಿಯೇ ತಜ್ಞರ ಸಮಿತಿ ರಚಿಸಿದ್ದರು. ಈಗ ಇದೇ ಸಮಿತಿಗೆ ಹಾಸನ ಜಿಲ್ಲೆಯ ಪ್ರಕರಣಗಳ ಕುರಿತು ಪ್ರತ್ಯೇಕ ಅಧ್ಯಯನ ನಡೆಸಿ ವರದಿ ನೀಡುವ ಜವಾಬ್ದಾರಿ ವಹಿಸಲಾಗಿದೆ.
ಹೃದಯಾಘಾತ ಹೆಚ್ಚಳದ ಕುರಿತು ಆರೋಗ್ಯ ಇಲಾಖೆಯಿಂದ ಸಭೆ
ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಾವುಗಳ ಪ್ರಕರಣಗಳ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಸೋಮವಾರ ತಜ್ಞರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಯುವಕರು ಮತ್ತು ಮಧ್ಯವಯಸ್ಕರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಹೃದಯಾಘಾತದಲ್ಲಿ 40 ದಿನಗಳಲ್ಲಿ 22 ಸಾವುಗಳು: ಆತಂಕಕಾರಿ ಸಂಖ್ಯೆ
ಕಳೆದ 40 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ 22ಕ್ಕೆ ಏರಿದೆ. ಇತ್ತೀಚಿನ ಕೆಲವು ಪ್ರಕರಣಗಳು ಈ ಆತಂಕಕ್ಕೆ ಸಾಕ್ಷಿಯಾಗಿವೆ:
- ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಸೇನೆಯ ಯೋಧ ಲೋಹಿತ್ (38), ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದು, ಭಾನುವಾರ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ದಿಢೀರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
- ಸೋಮವಾರ ಬೇಲೂರು ಪಟ್ಟಣದ ಜೆ.ಪಿ ನಗರದ ಗೃಹಿಣಿ ಲೇಪಾಕ್ಷಿ (50) ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
- ಹೊಳೆನರಸೀಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುತ್ತಯ್ಯ (58) ಅವರು ಕಾಲೇಜು ಕ್ಯಾಂಟಿನ್ನಲ್ಲಿ ಟೀ ಕುಡಿಯುವ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
- ಮೂರು ದಿನಗಳ ಹಿಂದಷ್ಟೇ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಹ್ಯಾರಾನೆ ಗ್ರಾಮದ ಗಿರೀಶ್ (41), ಜೋಳದ ಹೊಲಕ್ಕೆ ಗೊಬ್ಬರ ಹಾಕಲು ಹೋಗಿ ಮರಳಿ ಬಂದ ಬಳಿಕ ಮನೆಯಲ್ಲೇ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
- ಶನಿವಾರ (ಜೂನ್ 28) ಆಟೋ ಚಾಲಕ ಗೋವಿಂದ (37) ಹೃದಯಾಘಾತದಿಂದ ಮೃತಪಟ್ಟಿದ್ದರು.
ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಜಿಲ್ಲೆಯ ಹೊರಭಾಗಗಳಲ್ಲೂ ಹಾಸನದ ಯುವಜನರು ಹೃದಯಾಘಾತದಿಂದ ಸಾವಿಗೀಡಾಗುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಮೇ 20 ರಂದು ಅರಕಲಗೂಡು ತಾಲೂಕಿನ ಅಭಿಷೇಕ್ ಬೆಂಗಳೂರಿನಲ್ಲಿ ಮೃತಪಟ್ಟಿದ್ದರೆ, ಅದೇ ದಿನ ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂಧ್ಯಾ ಹೃದಯಾಘಾತಕ್ಕೆ ಬಲಿಯಾಗಿದ್ದರು. ಮೇ 28 ರಂದು ಕವನ, ಜೂನ್ 11 ರಂದು ನಿಶಾಂತ್, ಜೂನ್ 12 ರಂದು ನಾಗಪ್ಪ, ನೀಲಕಂಠಪ್ಪ, ಜೂನ್ 13 ರಂದು ದೇವರಾಜ್, ಸತೀಶ್, ಜೂನ್ 14 ರಂದು ಕಾಂತರಾಜು, ಜೂನ್ 18 ರಂದು ನವೀನ್, ತೀರ್ಥಪ್ಪ, ಜೂನ್ 21 ರಂದು ನಿಶಾದ್ ಅಹ್ಮದ್ ಮತ್ತು ಚೇತನ್ ನಿಧನರಾಗಿದ್ದಾರೆ. ಜೂನ್ 25 ರಂದು ಯೋಗೇಶ್. ಎಂ.ಕೆ, ಮಂಜುನಾಥ್ ಮೃತಪಟ್ಟಿದ್ದರೆ, ಜೂನ್ 26 ರಂದು 22 ವರ್ಷದ ಸುಪ್ರೀತಾ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಿಧನರಾಗಿದ್ದರು. ಜೂನ್ 28ರಂದು ಆಟೋ ಚಾಲಕ ಗೋವಿಂದ (37) ಕೂಡ ಮೃತಪಟ್ಟಿದ್ದರು.
---