ಕರಾವಳಿಯಲ್ಲಿ ಕೋಮು ಸಂಘರ್ಷ ತಡೆಯಲು ರಚಿಸಿದ 'ಸ್ಪೆಷಲ್ ಆ್ಯಕ್ಷನ್ ಫೋರ್ಸ್'ಗೆ ಚಾಲನೆ
ಸ್ಪೆಷಲ್ ಆ್ಯಕ್ಷನ್ ಫೋರ್ಸ್ (SAF) ಎಂದು ಕರೆಯಲ್ಪಡುವ ಈ ಹೊಸ ಘಟಕವು, ಈಗಾಗಲೇ ಅಸ್ತಿತ್ವದಲ್ಲಿರುವ ಆ್ಯಂಟಿ-ನಕ್ಸಲ್ ಫೋರ್ಸ್ (ANF) ನಿಂದ 248 ಸಿಬ್ಬಂದಿಗಳನ್ನು ಬಳಸಿಕೊಂಡಿದೆ.;
ಕರಾವಳಿ ಭಾಗದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಕೋಮು ಸಂಘರ್ಷಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಚಿಸಲಾಗಿರುವ 'ಸ್ಪೆಷಲ್ ಆ್ಯಕ್ಷನ್ ಫೋರ್ಸ್' (SAF) ರಚನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ. ಈ ವಿಶೇಷ ಕಾರ್ಯಪಡೆಯು ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾಪಾಡಲು ಕಾರ್ಯನಿರ್ವಹಿಸಲಿದೆ.
ಕಳೆದ ಕೆಲವು ತಿಂಗಳುಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಕೋಮು ಘಟನೆಗಳು ಹೆಚ್ಚಾಗಿದ್ದು, ಇದು ಪ್ರದೇಶದ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಹಾಗೂ ಇಂತಹ ಘಟನೆಗಳು ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವ ಆತಂಕವನ್ನು ತಡೆಯಲು ಈ ವಿಶೇಷ ಕಾರ್ಯಪಡೆ ರಚಿಸಿದೆ.
ಎಎನ್ಎಫ್ ಸಿಬ್ಬಂದಿಗಳನ್ನು ಒಳಗೊಂಡ ಎಸ್ಎಎಫ್
ಸ್ಪೆಷಲ್ ಆ್ಯಕ್ಷನ್ ಫೋರ್ಸ್ (SAF) ಎಂದು ಕರೆಯಲ್ಪಡುವ ಈ ಹೊಸ ಘಟಕವು, ಈಗಾಗಲೇ ಅಸ್ತಿತ್ವದಲ್ಲಿರುವ ಆ್ಯಂಟಿ-ನಕ್ಸಲ್ ಫೋರ್ಸ್ (ANF) ನಿಂದ 248 ಸಿಬ್ಬಂದಿಗಳನ್ನು ಬಳಸಿಕೊಂಡಿದೆ. ಈ ಪಡೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಿದೆ.
4 ಜಿಲ್ಲೆಗಳಿಗೆ 248 ಸಿಬ್ಬಂದಿಗಳ ಬಲ
ಈ ವಿಶೇಷ ಕಾರ್ಯಪಡೆಯು ಒಟ್ಟು 248 ಹುದ್ದೆಗಳನ್ನು ಒಳಗೊಂಡಿದೆ. ಇದರಲ್ಲಿ ಡಿಐಜಿಪಿ-1, ಡಿವೈಎಸ್ಪಿ (ಸಿವಿಲ್)-1, ಸಹಾಯಕ ಕಮಾಂಡೆಂಟ್-1, ಪಿಐ/ಆರ್ಪಿಐ-4, ಪಿಎಸ್ಐ/ಆರ್ಎಸ್ಐ/ಎಸ್ಐ-16, ಸಿಎಚ್ಸಿ-60, ಸಿಪಿಸಿ/ಎಪಿಸಿ-150 ಮತ್ತು ಅನುಯಾಯಿ-15 ಮಂದಿ ಸಿಬ್ಬಂದಿ ಇರಲಿದ್ದಾರೆ.
ಮಂಗಳೂರು ಕೇಂದ್ರ ಸ್ಥಾನ, ಉಡುಪಿ ತಾತ್ಕಾಲಿಕವಾಗಿ ಅಧೀನ
ಈ ಕಾರ್ಯಪಡೆಯ ಕೇಂದ್ರಸ್ಥಾನ ಮಂಗಳೂರಿನಲ್ಲಿ ಇರಲಿದೆ. ಕೇಂದ್ರ ಸ್ಥಾನದಲ್ಲಿ ಡಿಐಜಿಪಿ-1, ಡಿವೈಎಸ್ಪಿ (ಸಿವಿಲ್)-1, ಸಹಾಯಕ ಕಮಾಂಡೆಂಟ್-1, ಪಿಐ/ಆರ್ಪಿಐ-1, ಪಿಎಸ್ಐ/ಆರ್ಎಸ್ಐ/ಎಸ್ಐ-1, ಸಿಎಚ್ಸಿ-3, ಸಿಪಿಸಿ/ಎಪಿಸಿ-6 ಮಂದಿ ಸೇರಿದಂತೆ 15 ಮಂದಿಯ ತಂಡ ಕಾರ್ಯನಿರ್ವಹಿಸಲಿದೆ.
ಜೊತೆಗೆ, ದಕ್ಷಿಣ ಕನ್ನಡ, ಉಡುಪಿ, ಮತ್ತು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗಳಲ್ಲಿ ತಲಾ ಪಿಐ/ಆರ್ಪಿಐ-1, ಪಿಎಸ್ಐ/ಆರ್ಎಸ್ಐ/ಎಸ್ಐ-5, ಸಿಎಚ್ಸಿ-19, ಸಿಪಿಸಿ/ಎಪಿಸಿ-48 ಮತ್ತು ಅನುಯಾಯಿ 5 ಮಂದಿ ಸೇರಿ 78 ಮಂದಿ ಸಿಬ್ಬಂದಿ ಕಾರ್ಯಾಚರಿಸಲಿದ್ದಾರೆ. ಸದ್ಯಕ್ಕೆ, ಉಡುಪಿ ಜಿಲ್ಲೆಯು ತಾತ್ಕಾಲಿಕವಾಗಿ ಮಂಗಳೂರು ನಗರ ವ್ಯಾಪ್ತಿಯ ಅಧೀನದಲ್ಲಿ ಬರಲಿದೆ ಎನ್ನಲಾಗಿದೆ.
ಪೊಲೀಸ್ ಆಯುಕ್ತರೇ ಮುಖ್ಯಸ್ಥರು
ಹೊಸ ಕಾರ್ಯಪಡೆಯ ಮುಖ್ಯಸ್ಥರಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ, ಡಿವೈಎಸ್ಪಿ ಸ್ಥಾನಕ್ಕೆ ಮಂಗಳೂರಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ಕೆ.ಯು.ಬೆಳ್ಳಿಯಪ್ಪ ಅವರನ್ನು ನಿಯೋಜಿಸಲಾಗಿದೆ.