ಧರ್ಮಸ್ಥಳ ಪ್ರಕರಣ : ಬಂಗ್ಲೆಗುಡ್ಡದಲ್ಲಿ ಮುಂದುವರಿದ ಎಸ್ಐಟಿ ಶೋಧಕಾರ್ಯ
ಬುಧವಾರ ರಾತ್ರಿ 7ರ ವರೆಗೂ ಶೋಧನೆ ಕಾರ್ಯ ನಡೆಸಿದ್ದ ಎಸ್ ಐಟಿ ಸುಮಾರು 13 ಎಕರೆ ಜಾಗದಲ್ಲಿ 50 ಜನರ ತಂಡದೊಂದಿಗೆ ಶೋಧನೆ ನಡೆಸಿತ್ತು.;
ಬಂಗ್ಲೆಗುಡ್ಡ ಬಳಿ ಅಸ್ಥಿಪಂಜರಗಳ ಅವಶೇಷ ಪತ್ತೆಯಾಗಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲೆಗುಡ್ಡ ಅರಣ್ಯದಲ್ಲಿ ಎರಡನೇ ದಿನ ಕೂಡ ಎಸ್ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸಲು ಸಿದ್ದತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡ ಅರಣ್ಯದಲ್ಲಿ ಬುಧವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮಾನವನ ಮೂಳೆಗಳು ಹಾಗೂ ಪುರುಷರ ಬಟ್ಟೆಗಳು ಪತ್ತೆಯಾಗಿದ್ದವು. ಅವುಗಳನ್ನು ಗುರುವಾರ ಎಸ್ಐಟಿ ಅಧಿಕಾರಿಗಳು ಎಫ್ಎಸ್ಎಲ್ಗೆ ಕಳುಹಿಸಲಿದ್ದಾರೆ ಎನ್ನಲಾಗಿದೆ.
ಬುಧವಾರ ರಾತ್ರಿ 7ರವರೆಗೂ ಶೋಧ ಕಾರ್ಯ ನಡೆಸಿದ್ದ ಎಸ್ಐಟಿ ಸುಮಾರು 13 ಎಕರೆ ಜಾಗದಲ್ಲಿ 50 ಜನರ ತಂಡದೊಂದಿಗೆ ಶೋಧನೆ ನಡೆಸಿತ್ತು. ಗುರುವಾರ ಕೂಡ 50 ಜನರ ತಂಡದೊಂದಿಗೆ ಅಸ್ಥಿಪಂಜರಗಳ ಅವಶೇಷಗಳನ್ನು ಶೋಧನೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಬಂಗ್ಲೆಗುಡ್ಡದಲ್ಲಿ ಸ್ಥಳ ಮಹಜರಿಗೆ ಹೋದ ಸಂದರ್ಭದಲ್ಲಿ ರಾಶಿ ಮೂಳೆಗಳು, ಮೂರು-ನಾಲ್ಕು ತಲೆಬುರುಡೆ ನೋಡಿದ್ದಾಗಿ ಸೌಜನ್ಯ ಮಾವ ವಿಠಲಗೌಡ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ವಿಠಲ್ ಹೇಳಿಕೆಯನ್ನು ಆಧರಿಸಿ ಬುಧವಾರ (ಸೆ.17) ಬಂಗ್ಲೆಗುಡ್ಡ ಸ್ಥಳದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಆರಂಭಿಸಿದ್ದರು.