ಧರ್ಮಸ್ಥಳ ಪ್ರಕರಣ | ಮಹೇಶ್ ತಿಮರೋಡಿ ಮನೆಯಲ್ಲಿ ಮೊಬೈಲ್, ಹಾರ್ಡ್ ಡಿಸ್ಕ್, ತಲವಾರು ಜಪ್ತಿ
ಆರೋಪಿಯಾದ ಮುಸುಕುಧಾರಿ ವಿಚಾರಣೆ ವೇಳೆ ದೊರೆತ ಮಾಹಿತಿ ಆಧರಿಸಿ ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಮೇಲೆ ದಾಳಿ ಮಾಡಿ ಹಲವು ಮಹತ್ವದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.;
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ ಹೇಳಿದ್ದ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಎಸ್ಐಟಿ ಅಧಿಕಾರಿಗಳು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ಈ ವೇಳೆ ಮುಸುಕುಧಾರಿಗೆ ಸೇರಿದ ಎರಡು ಮೊಬೈಲ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಆರೋಪಿಯಾದ ಮುಸುಕುಧಾರಿ ವಿಚಾರಣೆ ವೇಳೆ ದೊರೆತ ಮಾಹಿತಿ ಆಧರಿಸಿ ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಮೇಲೆ ದಾಳಿ ಮಾಡಿ ಹಲವು ಮಹತ್ವದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ತಿಮರೋಡಿ ಮನೆಯಲ್ಲಿ ಮೂರು ತಲವಾರ್ಗಳು, ಡಿಜಿಟಲ್ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.
ಮಂಗಳವಾರ ತಡರಾತ್ರಿವರೆಗೆ ನಡೆದ ದಾಳಿಯ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ಪತ್ನಿ, ಮಗ ಹಾಗೂ ಮಗಳ ಮೊಬೈಲ್ ಫೋನ್ ಹಾಗೂ ಮುಸುಕುಧಾರಿ ಬಳಸಿದ್ದ ಎರಡು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಮೊದಲಿಗೆ ತನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದ್ದ. ಈಗ ಕೀಪ್ಯಾಡ್ ಮೊಬೈಲ್ ಹಾಗೂ ಆಂಡ್ರಾಯ್ಡ್ ಫೋನ್ ಪತ್ತೆಯಾಗಿದೆ. ಜೊತೆಗೆ ಲಗೇಜ್ ಬ್ಯಾಗ್, ಬಟ್ಟೆಗಳು ಹಾಗೂ ಕೆಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ. ತಿಮರೋಡಿ ಮನೆಯ ಸಿಸಿಟಿವಿ ಹಾಗೂ ಡಿವಿಆರ್ ವಶಕ್ಕೆ ಪಡೆಲಾಗಿದೆ. ಸಿಸಿಟಿವಿ ಕ್ಯಾಮೆರಾ, ಹಾರ್ಡ್ ಡಿಸ್ಕ್, ಮುಸುಕುಧಾರಿಯ ಗುರುತಿನ ಚೀಟಿ ಹಾಗೂ ಉಳಿದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಎಸ್ಐಟಿ ಮೂಲಗಳು ತಿಳಿಸಿವೆ.