Save Karnataka Tigers | ಹತ್ಯೆಯಾದ ತಾಯಿ ಹುಲಿ 2022ರಲ್ಲಿ ಕಾಣಿಸಿಕೊಂಡಿತ್ತು; 2023ರಲ್ಲಿ 4 ಮರಿಗಳಿಗೆ ಜನ್ಮ ನೀಡಿತ್ತು...
ಈ ವಿವರ ನೀಡಿದವರು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಂರಕ್ಷಣಾಧಿಕಾರಿಯಾಗಿದ್ದ ನಿವೃತ್ತ ಐಎಫ್ಎಸ್ ಅಧಿಕಾರಿ ಬಾಲಚಂದ್ರ. ಅವರು ʼದ ಫೆಡರಲ್ ಕರ್ನಾಟಕʼದ ಜತೆ ನಡೆಸಿದ ಮಾತುಕತೆ ನಡೆಸಿ ಅನೇಕ ವಿವರಗಳನ್ನು ನೀಡಿದರು;
"ಈಗ ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳ ಹತ್ಯೆಯಾಗಿದೆ. 2022ರಲ್ಲಿ ಇದೇ ತಾಯಿ ಹುಲಿ ಏಕಾಂಗಿಯಾಗಿ ಕಾಣಿಸಿಕೊಂಡಿತ್ತು. ಅಂದರೆ 2023ರ ವೇಳೆಗೆ ಇದು 4 ಮರಿಗಳಿಗೆ ಜನ್ಮ ನೀಡಿದೆ. ಈಗ ಆ ಮರಿಗಳಿಗೆ ಒಂದೂವರೆ ವರ್ಷ ತುಂಬಿರುತ್ತಿತ್ತು."
ಈ ವಿವರ ನೀಡಿದವರು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಂರಕ್ಷಣಾಧಿಕಾರಿಯಾಗಿದ್ದ ನಿವೃತ್ತ ಐಎಫ್ಎಸ್ ಅಧಿಕಾರಿ ಟಿ. ಬಾಲಚಂದ್ರ. ಅವರು ʼದ ಫೆಡರಲ್ ಕರ್ನಾಟಕʼದ ಜತೆ ನಡೆಸಿದ ಮಾತುಕತೆ ನಡೆಸಿ ಅನೇಕ ವಿವರಗಳನ್ನು ನೀಡಿದರು.
"ಈಗ ಹತ್ಯೆಗೀಡಾದ ಹುಲಿಯ ಮರಿಗಳು ಇನ್ನೇನು ತಾಯಿಯಿಂದ ದೂರವಾಗಿ ತಮ್ಮದೇ ಟೆರಟರಿ(ವ್ಯಾಪ್ತಿ) ಹೊಂದುವ ಹಂತದಲ್ಲಿ ಇದ್ದವು," ಎಂಬುದು ಅವರ ಅಭಿಪ್ರಾಯ.
ಮಲೆ ಮಹದೇಶ್ವರ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಗುರುತು ಮಾಡಿದ ನಂತರ ಅಲ್ಲಿ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ ಎನ್ನುವ ಕಲ್ಪನೆ ಕೆಲವರಲ್ಲಿ ಇದೆ.ಅದಕ್ಕಾಗಿಯೇ ವಿರೋಧ ವ್ಯಕ್ತವಾಗುತ್ತಿದೆ. ಒಂದು ವೇಳೆ ಇದನ್ನು ಆ ಪಟ್ಟಿಗೆ ಸೇರಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ.ಆಗೊಂದು ವೇಳೆ ಆಗಿದ್ದರೆ ಇನ್ನು ಹೆಚ್ಚಿನ ರಕ್ಷಣೆ ಸಿಗುತ್ತಿತ್ತು ಎಂದಷ್ಟೇ ಹೇಳಬಹುದು. ಈ ನಿಟ್ಟಿನಲ್ಲಿಯೂ ಇಲಾಖೆ ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ ತಕ್ಷಣ ಕೃಷಿ, ಅಗತ್ಯ ಚಟುವಟಿಕೆಗಳು ನಿಲ್ಲುವುದಿಲ್ಲ, ಜನರಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ಇದನ್ನು ಜನರಿಗೆ ಅರ್ಥ ಮಾಡಿಸುವ ಕೆಲಸವೂ ಆಗಬೇಕಾಗಿದೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.
ನಿಯಮಾವಳಿ ರಚನೆ
2012ರಲ್ಲಿ ನ್ಯಾಷನಲ್ ಟೈಗರ್ ಕನ್ಸರ್ವೇಟಿವ್ ಅಥಾರಿಟಿ ರಚನೆಯಾಗಿ ಹುಲಿ ಸಂರಕ್ಷಣೆಗೆ ಸಂಬಂಧಿಸಿದಂತೆ ನಿಯಮಾವಳಿ ರಚನೆ ಮಾಡಿದೆ.ಯಾವುದೇ ಹುಲಿ ಸ್ವಾಭಾವಿಕವಾಗಿಯೇ ಸತ್ತರೂ ಅದನ್ನು ನಿಯಮಾನುಸಾರ ಪರೀಕ್ಷೆ ನಡೆಸಿ ಕೋರ್ಟ್ ಮುಂದೆ ಅದು ಸ್ವಾಭಾವಿಕ ಸಾವು ಎಂದು ದೃಢಪಡಿಸಬೇಕು. ಅಷ್ಟು ಬಿಗಿಯಾದ ಕಾನೂನು ಇದೆ. ಈಗ ನಮ್ಮ ರಾಜ್ಯದಲ್ಲಿ 500ಕ್ಕೂ ಹೆಚ್ಚಿನ ಹುಲಿಗಳಿವೆ. ಇವುಗಳು ಈ ಸಂಖ್ಯೆಗೆ ಏರಬೇಕಾದರೆ ಐದಾರು ದಶಕಗಳು ಕಾದಿದ್ದೇವೆ. ಜನರ ಸಹಕಾರವಿಲ್ಲದೇ ಇದು ಸಾಧ್ಯವಾಗಿಲ್ಲ. ಜನ ಹುಲಿಗೆ ವಿಷವಿಟ್ಟು ಕೊಲ್ಲುತ್ತಾರೆ ಎಂದರೆ ಅದಕ್ಕೆ ಕಾರಣವೇನು..? ಆತನಿಗೆ ಹಾಗೆ ಅನ್ನಿಸಿದ್ದು ಯಾಕೆ..? ಎಂಬ ವಿಚಾರಗಳ ಬಗ್ಗೆ ತಿಳಿದುಕೊಂಡು ಸಮಸ್ಯೆಯನ್ನು ಮೂಲದಲ್ಲಿಯೇ ಪರಿಹರಿಸಬೇಕು. ಆಗಷ್ಟೇ ಈ ರೀತಿಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಬಾಲಚಂದ್ರ ತಿಳಿಸಿದ್ದಾರೆ.
ವನ್ಯ ಜೀವಿಗಳಿಗೆ ವಿಷವಿಕ್ಕುವ ದುಷ್ಟ ಕೆಲಸಕ್ಕೂ ತಡೆ ಬೀಳಬೇಕು
ಹುಲಿಯೋ, ಚಿರತೆಯೋ ಅರಣ್ಯದ ಆಚೆಗೆ ಬಂದು ಹಸು, ಚಿಂಕೆ, ಕಡವೆ ಸೇರಿ ಯಾವುದೇ ಪ್ರಾಣಿಯನ್ನು ಬೇಟೆಯಾಡಿ ತಿಂದು ಹೋಗಿದ್ದರೆ ಇಲಾಖೆ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಬೇಟೆಗೆ ಒಳಗಾಗಿ ಸತ್ತ ಪ್ರಾಣಿಯ ಉಳಿದ ಭಾಗವನ್ನು ಹೂಳಬೇಕು. ಇಲ್ಲವೇ ಸುಡಬೇಕು. ಆಗ ಬೇಟೆಯಾಡಿದ ಪ್ರಾಣಿ ಕಾಡಿನ ಆಚೆಗೆ ಬರುವುದು ತಪ್ಪಿಸಿ, ಕಾಡಿನ ಒಳಗೆ ಹೊಸ ಬೇಟೆಯನ್ನು ಹುಡುಕುತ್ತದೆ. ಜೊತೆಗೆ ಹೀಗೆ ಮಾಡುವುದರಿಂದ ವನ್ಯ ಜೀವಿಗಳಿಗೆ ವಿಷವಿಕ್ಕುವ ದುಷ್ಟ ಕೆಲಸಕ್ಕೂ ತಡೆ ಬೀಳಲಿದೆ ಎಂದು ಅವರು ಹೇಳಿದ್ದಾರೆ.
"ಇದೆಲ್ಲವನ್ನೂ ಸರ್ಕಾರ, ಇಲಾಖೆ ಮತ್ತು ಅಧಿಕಾರಿಗಳು ಸಮಯಾನುಸಾರ ಮಾಡಬೇಕು. ಇಂದು ಮಾಡಬೇಕಾದ ಕೆಲಸವನ್ನು ನಾಳೆ ಮಾಡುತ್ತೇನೆ ಎಂದರೆ, ಕಾಡಂಚಿನ ಗ್ರಾಮಗಳ ಜನರನ್ನು ಹೆದರಿಸಿ, ಬೆದರಿಸಿ ಕಾಡು ಉಳಿಸುತ್ತೇನೆ ಎಂದರೆ ಅದು ಫಲ ಕೊಡದ ಮಾತು," ಎಂದು ಬಾಲಚಂದ್ರ ವಿವರಿಸಿದ್ದಾರೆ.
ನಿರಂತರ ಸಂಪರ್ಕ ಬೇಕು
ಕಾಡಂಚಿನ ಗ್ರಾಮಗಳ ಜನರೊಂದಿಗೆ ಅರಣ್ಯ ಇಲಾಖೆ ನಿರಂತರ ಸಂಪರ್ಕ ಇಟ್ಟುಕೊಂಡರೆ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಟ್ಟರೆ, ಅರಣ್ಯ ಇಲಾಖೆ ನಮ್ಮೊಂದಿಗೆ ಇದೆ ಎನ್ನುವ ಭಾವನೆಯನ್ನು ಉಂಟು ಮಾಡಿದರೆ ಅರಣ್ಯ ಸಂರಕ್ಷಣೆಯಲ್ಲಿ ನಾವು ಬಹುಪಾಲು ಗೆದ್ದಂತೆಯೇ ಲೆಕ್ಕ. ವಿಶಪ್ರಾಶನದಿಂದ ಹುಲಿಗಳನ್ನು ಕೊಂದ ಘಟನೆಗಳು ಮರುಕಳಿಸದಂತೆ ಮಾಡಬಹುದು.
“ನಾನು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಂರಕ್ಷಣಾಧಿಕಾರಿ ಆಗಿದ್ದ ಸಮಯದಲ್ಲಿ ಸ್ಥಳೀಯವಾಗಿ ಎಸ್ಎಸ್ಎಲ್ಸಿ, ಪಿಯುಸಿ ವ್ಯಾಸಂಗ ಮಾಡಿದ 25 ಹುಡುಗರಿಗೆ ತರಬೇತಿ ನೀಡಿ ಮಾರ್ಗದರ್ಶಕರನ್ನಾಗಿ ನೇಮಕ ಮಾಡಿಕೊಂಡಿದ್ದೆ. ಇವರಿಂದ ನಮಗೆ ಅರಣ್ಯ ರಕ್ಷಣೆ ಸಂಬಂಧ ಸಾಕಷ್ಟು ಮಾಹಿತಿ ಈಗಲೂ ಸಿಗುತ್ತಿದೆ. ಕಾಡಂಚಿನ ಗ್ರಾಮಗಳಿಗೆ ಯಾರೇ ಹೊಸಬರು ಬಂದರೂ, ಅವರು ಏನು ಮಾಡುತ್ತಿದ್ದಾರೆ, ಅವರ ನಡವಳಿಕೆ ಹೇಗಿದೆ ಎನ್ನುವುದರ ಸಂಪೂರ್ಣ ಮಾಹಿತಿ ನಮಗೆ ಅವರಿಂದ ಸಿಗುತ್ತಿತ್ತು. ಇದರಿಂದ ಅರಣ್ಯ ಸಂಪತ್ತು ಲೂಟಿಯಾಗುವುದು ದೊಡ್ಡ ಪ್ರಮಾಣದಲ್ಲಿಯೇ ತಪ್ಪಿದೆ," ಎಂದು ಹೇಳಿದರು.
"ಕೆಲವು ವೇಳೆ ರೈತರ ಹಸು, ಕರು, ಸಾಕು ಪ್ರಾಣಿಗಳು ಕಾಡಿನೊಳಗೆ ಹೋಗಿ ಹುಲಿ, ಚಿರತೆಗಳಿಂದ ಬಲಿಯಾಗಿರುತ್ತವೆ. ಈ ವೇಳೆ ಪರಿಹಾರ ಕೇಳಿ ಬರುವ ರೈತರಿಗೆ ನೀವು ಯಾಕೆ ನಿಮ್ಮ ಜಾನುವಾರುಗಳನ್ನು ಕಾಡಿಗೆ ಬಿಟ್ಟಿದ್ದೀರಿ, ತಪ್ಪು ನಿಮ್ಮದೇ. ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳುವುದಿದೆ. ಆದರೆ ಹುಲಿ, ಚಿರತೆ ಕಾಡಿನೊಳಗೆ ಜಾನುವಾರುಗಳನ್ನು ಬೇಟೆಯಾಡಿದರೂ ಕಾಡಿನಿಂದ ಆಚೆ ಬಂದು ಬೇಟೆಯಾಡಿದ್ದರೂ ರೈತನಿಗೆ ನಷ್ಟ. ಅವನ ನಷ್ಟಕ್ಕೆ ಇಲಾಖೆ ಕಾರಣಗಳನ್ನು ಹೇಳದೇ ತಕ್ಷಣವೇ ಪರಿಹಾರ ನೀಡಬೇಕು," ಎಂದು ಹೇಳಿದರು.
"ರೈತರು ಅರಣ್ಯ ಇಲಾಖೆಯ ಕಚೇರಿಗಳನ್ನು ಅಲೆದಾಡುವ ಕೆಲಸ ಆಗಬಾರದು. ಹೀಗೆ ಆದರೆ ಜನರಲ್ಲಿ ಸ್ವಾಭಾವಿಕವಾಗಿ ನೋವು, ಹತಾಶೆ ಉಂಟಾಗುತ್ತದೆ.ಇದು ಮುಂದೆ ಕ್ರೌರ್ಯಕ್ಕೆ ಕಾರಣವಾಗುತ್ತದೆ," ಎನ್ನುತ್ತಾರೆ ಅವರು.