ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ; ಬೆಳಗ್ಗೆಯಿಂದ ಸಂಜೆಯವರೆಗೆ ಯಾವಾಗ, ಏನೇನು ನಡೆಯಿತು? ಇಲ್ಲಿದೆ ಕ್ಷಣ ಕ್ಷಣದ ವಿವರ..

ಆರ್‌ಸಿಬಿ ಫ್ರಾಂಚೈಸಿಯು ಸಾಮಾಜಿಕ ಮಾಧ್ಯಮದಲ್ಲಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ಬೆಂಗಳೂರಿನಲ್ಲಿ ಆಯೋಜಿಸುವುದಾಗಿ ಘೋಷಿಸುವುದರೊಂದಿಗೆ ದುರ್ಘಟನೆಗೆ ನಾಂದಿ ಹಾಡಲಾಯಿತು.;

Update: 2025-06-05 07:10 GMT

ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಚೊಚ್ಚ ಚಾಂಪಿಯನ್‌ಶಿಪ್ ಗೆದ್ದ ಸಂಭ್ರಮವು 11 ಮಂದಿಯ ಸಾವು ಹಾಗೂ 33ಕ್ಕೂ ಹೆಚ್ಚು ಅಧಿಕ ಮಂದಿ ಗಾಯಗೊಳ್ಳುವುದಕ್ಕೆ ಕಾರಣವಾಯಿತು. ಬೆಂಗಳೂರು ಎಚ್​​ಎಎಲ್ ಏರ್​ಪೋರ್ಟ್​ಗೆ ಆರ್​ಸಿಬಿ ತಂಡದ ಆಗಮನ, ವಿಧಾನಸೌಧದಲ್ಲಿ ಸನ್ಮಾನ ಹಾಗೂ ಚಿನ್ನಸ್ವಾಮಿಯಲ್ಲಿಸ ಸಂಭ್ರಮ ಸೇರಿದಂತೆ ನಾನಾ ಘಟನೆಗಳ ನಡುವೆ ಕಾಲ್ತುಳಿತ ಸಂಭವಿಸಿದೆ. ಈ ಮೂಲಕ ವಿಜಯೋತ್ಸವ ಕಾರ್ಯಕ್ರಮ ದುಃಖಾಂತ್ಯ ಕಂಡಿತು. ಈ ಎಲ್ಲ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ. 

  • ಬೆಳಿಗ್ಗೆ 7:00 ಗಂಟೆಗೆ: ಆರ್‌ಸಿಬಿ ಫ್ರಾಂಚೈಸಿಯು ಸಾಮಾಜಿಕ ಮಾಧ್ಯಮದಲ್ಲಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ಬೆಂಗಳೂರಿನಲ್ಲಿ ಆಯೋಜಿಸುವುದಾಗಿ ಘೋಷಿಸಿತು. ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಸಂಜೆ 5:00 ಗಂಟೆಗೆ ಓಪನ್-ಟಾಪ್ ಬಸ್ ಪಥಯಾತ್ರೆ ನಡೆಯಲಿದೆ ಎಂದು ತಿಳಿಸಿತು. ಈ ಘೋಷಣೆಯು ಸಾವಿರಾರು ಅಭಿಮಾನಿಗಳು ವಿಧಾನಸೌಧ ಮತ್ತು ಕ್ರೀಡಾಂಗಣದ ಸುತ್ತ ಹೋಗುವಂತೆ ಮಾಡಿತು. ಉಚಿತ ಪಾಸ್‌ ಎಂಬುದು ವದಂತಿಗಳು ಜನಸಂದಣಿಯನ್ನು ಹೆಚ್ಚಿಸಿತು.
  • ಬೆಳಗ್ಗೆ 11.00 ಗಂಟೆಗೆ: ವಿಧಾನ ಸೌಧದಲ್ಲಿ ಸರ್ಕಾರದ ವತಿಯಿಂದ ಸನ್ಮಾನ ಇದೆ ಎಂದು ಘೋಷಿಸಲಾಯಿತು. ವಿಧಾನಸೌಧದ ಗ್ರಾಂಡ್​ ಸ್ಟೆಪ್​ನಲ್ಲಿ ಕಾರ್ಯಕ್ರಮ ಎಂದು ಪ್ರಕಟಿಸಲಾಯಿತು. ವಿಧಾನ ಸೌಧದ ಮುಂದಿನ ತೆರೆದ ಪ್ರದೇಶದಲ್ಲಿ ಕಾರ್ಯಕ್ರಮ ಎಂದು ತಿಳಿದ ತಕ್ಷಣ ಅಭಿಮಾನಿಗಳು ಅಲ್ಲಿಗೂ ಬರಲು ಆರಂಭಿಸಿದರು.
  • ಮಧ್ಯಾಹ್ನ 1:30 ಗಂಟೆಗೆ : ಆರ್‌ಸಿಬಿ ತಂಡ ಅಹಮದಾಬಾದ್‌ನಿಂದ ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಂಡವನ್ನು ಸ್ವಾಗತಿಸಿದರು. ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್‌ರನ್ನು ಅಭಿನಂದಿಸಿದರು. ಈ ಹೊತ್ತಿಗೆ, ವಿಧಾನಸೌಧದ ಸುತ್ತ ಲಕ್ಷಾಂತರ ಅಭಿಮಾನಿಗಳು ತಂಡವನ್ನು ಕಾಣಲು ಜಮಾಯಿಸಿದ್ದರು.
  • ಮಧ್ಯಾಹ್ನ 2.00 ಗಂಟೆಗೆ : ಗೃಹ ಸಚಿವ ಜಿ. ಪರಮೇಶ್ವರ್ ಅವರು ಓಪನ್ ಟಾಪ್ ಬಸ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದರು. ಇದಕ್ಕೆ ಟ್ರಾಫಿಕ್ ಮತ್ತು ಭದ್ರತಾ ಕಾರಣಗಳನ್ನು ನೀಡಿದರು. ಆದರೆ, ಈ ಮಾಹಿತಿ ಎಲ್ಲರಿಗೂ ತಲುಪಲಿಲ್ಲ.
  • ಮಧ್ಯಾಹ್ನ 2.30 ಗಂಟೆಗೆ : ತಂಡ ಎಚ್​ಎಎಲ್​​ ವಿಮಾನ ನಿಲ್ದಾಣದಿಂದ ಖಾಸಗಿ ಹೋಟೆಲ್‌ಗೆ ತೆರಳಿತು. ಎಚ್​ಎಎಲ್​ ಏರ್​ಪೋರ್ಟ್​ನಿಂದ ಹಿಡಿದು ಹೋಟೆಲ್ ತನಕವೂ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರು. ಈ ವೇಳೆ ವಿಧಾನಸೌಧ ಮತ್ತು ಹೋಟೆಲ್ ಸುತ್ತ ಜನಸಂದಣಿ ದಟ್ಟವಾಗುತ್ತಿದ್ದು, ಭದ್ರತಾ ಸಿಬ್ಬಂದಿಗೆ ಜನರನ್ನು ನಿಯಂತ್ರಿಸುವುದು ಕಷ್ಟವಾಯಿತು.
  • ಮಧ್ಯಾಹ್ನ 3.14ಕ್ಕೆ : ಆರ್‌ಸಿಬಿ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಓಪನ್ ಬಸ್​ ಯಾತ್ರೆ ನಡೆಯಲಿದೆ ಎಂದು ಮತ್ತೆ ಟ್ವೀಟ್ ಮಾಡಿತು. ಇದು ಗೃಹ ಸಚಿವರ ಪ್ರಕಟಣೆಗೆ ವಿರುದ್ಧ ಹಾಗೂ ಗೊಂದಲ ಮೂಡಿಸಿತು. ಈ ಗೊಂದಲದಿಂದ ವಿಧಾನಸೌಧದ ಸುತ್ತ ಜನಸಂದಣಿ ಮತ್ತಷ್ಟು ತೀವ್ರಗೊಂಡಿತು.
  • ಮಧ್ಯಾಹ್ನ 3:30 PM: ಆರ್‌ಸಿಬಿ ತಂಡ ವಿಧಾನಸೌಧಕ್ಕೆ ಆಗಮಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮತ್ತು ಇತರ ಸಚಿವರು ತಂಡವನ್ನು ಸ್ವಾಗತಿಸಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗೌರವ ಸಮಾರಂಭ ನಡೆಯಿತು. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಸೇರಿದಂತೆ ಎಲ್ಲಾ ಆಟಗಾರರು ಭಾಗವಹಿಸಿದ್ದರು.
  • ಮಧ್ಯಾಹ್ನ 4.00ರಿಂದ 5.00 ಗಂಟೆ: ವಿಧಾನಸೌಧದ ಮುಂಭಾಗದಲ್ಲಿ ಗೌರವ ಸಮಾರಂಭ ನಡೆಯಿತು. ಸಾವಿರಾರು ಅಭಿಮಾನಿಗಳು ಜನಸಂದಣಿಯನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಿತು. ಈ ನಡುವೆ ಸಂದಣಿ ಜೋರಾಯಿತು.
  • ಸಂಜೆ 5.00 ಗಂಟೆಗೆ : ಯೋಜಿತ ಓಪನ್-ಟಾಪ್ ಬಸ್ ಪಥಯಾತ್ರೆಯನ್ನು ಭಾರೀ ಜನಸಂದಣಿ ಮತ್ತು ಟ್ರಾಫಿಕ್ ಸಮಸ್ಯೆಯಿಂದಾಗಿ ರದ್ದುಗೊಳಿಸಲಾಯಿತು. ಆರ್‌ಸಿಬಿ ತಂಡವನ್ನು ಮುಚ್ಚಿದ ಬಸ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಏಕಾಏಕಿ ಜನರು ಸ್ಟೇಡಿಯಮ್ ಕಡೆಗೆ ಸಾಗಿದರು ಹಾಗೂ ಒಳಗೆ ಹೋಗಲು ಯತ್ನಿಸಿದರು.
  • 5.30 ಗಂಟೆಗೆ: ಸ್ಟೇಡಿಯಮ್​ ಹೊರಗಡೆ ನೂಕು ನುಗ್ಗಲು ಉಂಟಾಯಿತು. ಸ್ಟೇಡಿಯಮ್ ಗೇಟ್ ಒಳಗೆ ನುಗ್ಗಲು ಅಭಿಮಾನಿಗಳು ಏಕಾಏಕಿ ಯತ್ನಿಸಿದ ಕಾರಣ ಕಾಲ್ತುಳಿತ ಉಂಟಾಯಿತು. ಈ ಘಟನೆಯಲ್ಲಿ 11 ಮಂದಿ ಮೃತಪಟ್ಟರೆ 33ಕ್ಕೂ ಅಧಿಕ ಮಂದಿ ಗಾಯಗೊಂಡರು.
  • 5.45 ಗಂಟೆಗೆ: ಜನದಟ್ಟಣೆ ತಡೆಯಲು ಸಾಧ್ಯವಾಗದೇ ಕಬ್ಬನ್​ ಪಾರ್ಕ್ ಹಾಗೂ ಎಂಜಿ ರೋಡ್​ನಲ್ಲಿ ಮೆಟ್ರೊ ನಿಲುಗಡೆಯನ್ನೇ ಸ್ಥಗಿತಗೊಳಿಸಲಾಯಿತು.
  • ಸಂಜೆ 5.30ರಿಂದ 6 ಗಂಟೆ: ವಿಷಯ ತಿಳಿದ ತಕ್ಷಣ ಅಂಬ್ಯುಲೆನ್ಸ್​ಗಳು ಬಂದು ಗಾಯಗೊಂಡವರನ್ನು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲ ಯತ್ನಿಸಲಾಯಿತು. ಆದರೆ, ಟ್ರಾಫಿಕ್ ಸಮಸ್ಯೆಯಿಂದ ಗೋಲ್ಡನ್ ಟೈಮ್​ನಲ್ಲಿ (ಜೀವ ಉಳಿಸಬಹುದಾದ ಅವಧಿ) ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಲೇ ಹಲವರು ಮೃತಪಟ್ಟರು.
  • ಸಂಜೆ 6. 00 ಗಂಟೆ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆರ್‌ಸಿಬಿಯನ್ನು ಗೌರವಿಸಿತು. ಈ ವೇಳೆಗಾಗಲೇ ದುರಂತ ನಡೆದಿತ್ತು. ವಿಷಯ ಗೊತ್ತಿದ್ದರೂ ಕಾರ್ಯಕ್ರಮ ಮುಂದುವರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಕೂಡ ಭಾಗವಹಿಸಿದರು. ಆದರೆ, ಅರ್ಧ ಗಂಟೆಯಲ್ಲಿ ಮೊಟಕುಗೊಳಿಸಲಾಯಿತು.
  • ಸಂಜೆ 6.30 ಗಂಟೆಗೆ: ಸಿಎಂ ಸಿದ್ದರಾಮಯ್ಯ ಅವರು ಆಸ್ಪತ್ರೆಗೆಗಳಿಗೆ ಭೇಟಿ ನೀಡಿ ಗಾಯಾಗಳು ಹಾಗೂ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.
  • 6.45 ಗಂಟೆಗೆ: ಸ್ಟೇಡಿಯಮ್ ಒಳಗೆ ಹೋದವರನ್ನು ತಕ್ಷಣಕ್ಕೆ ಹೊರಗೆ ಬಿಡಲಿಲ್ಲ. ಗೇಟ್ ಹಾಕಿ ಒಳಗೆ ಇರಿಸಲಾಯಿತು. ಹೊರಗಿನ ಜನ ಖಾಲಿಯಾದ ಬಳಿಕ ಹೊರಕ್ಕೆ ಬಿಡಲಾಯಿತು.
  • ಸಂಜೆ 7 ಗಂಟೆಗೆ: ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು. ಈ ವೇಳೆ ಅವರು ಮ್ಯಾಜಿಸ್ಟ್ರೇಟ್​ ತನಿಖೆಗೆ ಆದೇಶಿಸಿದರು. 15 ದಿನಗಳ ಒಳಗೆ ವರದಿ ನೀಡುವಂತೆ ಸೂಚಿಸಿದರು.

ದುರಂತಕ್ಕೆ ಕಾರಣಗಳು

ಗೊಂದಲಮಯ ಆಯೋಜನೆ: ಗೃಹ ಸಚಿವರು ನೀಡಿದ ಪರೇಡ್​ ರದ್ದು ಘೋಷಣೆ ಮತ್ತು ಆರ್‌ಸಿಬಿಯ ಟ್ವೀಟ್‌ನಿಂದಾಗಿ ಸಾರ್ವಜನಿಕರಲ್ಲಿ ತಪ್ಪು ತಿಳುವಳಿಕೆ ಉಂಟಾಯಿತು.

ಅನಿಯಂತ್ರಿತ ಜನಸಂದಣಿ: ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ ಕೇವಲ 35,000 ಆಗಿದ್ದರೂ, 2 ರಿಂದ3 ಲಕ್ಷ ಜನರು ಸೇರಿದ್ದರು.

ಭದ್ರತೆಯ ಕೊರತೆ: ಸಾಕಷ್ಟು ಭದ್ರತಾ ಸಿಬ್ಬಂದಿಯ ಕೊರತೆ ಮತ್ತು ಬ್ಯಾರಿಕೇಡ್‌ಗಳು ಮುರಿದುಬಿದ್ದುದು ಕಾಲ್ತುಳಿತಕ್ಕೆ ಕಾರಣವಾಯಿತು. ಸ್ಟೇಡಿಯಮ್​ನ ಎರಡು ಗೇಟ್​​ಗಳಲ್ಲಿ ಮಾತ್ರ ಪ್ರವೇಶ ಕಲ್ಪಿಸಲು ಮುಂದಾಗಿದ್ದು ಒತ್ತಡಕ್ಕೆ ಕಾರಣವಾಯಿತು.

ಸರ್ಕಾರ ಮತ್ತು ಇತರರ ಪ್ರತಿಕ್ರಿಯೆಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ "ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. 15 ದಿನಗಳಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ವರದಿಯನ್ನು ಸಲ್ಲಿಸಲಾಗುವುದು.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, "ಆಯೋಜಕರು ಉತ್ತಮ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು." ಎಂದು ಹೇಳಿದ್ದಾರೆ.

ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್: "ಇದು ಬಿಸಿಸಿಐ ಕಾರ್ಯಕ್ರಮವಾಗಿರಲಿಲ್ಲ. ತನಿಖೆಗೆ ಪೂರ್ಣ ಸಹಕಾರ ನೀಡಲಾಗುವುದು." ಎಂದು ನುಡಿದಿದ್ದಾರೆ.

ರಾಜಕೀಯ ಟೀಕೆ

ಪ್ರತಿಪಕ್ಷ ಬಿಜೆಪಿಯು ಕಾಂಗ್ರೆಸ್ ಸರ್ಕಾರವನ್ನು ಜನದಟ್ಟಣೆ ನಿರ್ವಹಣೆಯಲ್ಲಿ ವಿಫಲವಾದದ್ದಕ್ಕಾಗಿ ಟೀಕಿಸಿದೆ.   

Tags:    

Similar News