ರಾಯಚೂರಿನಲ್ಲಿ ಪೆಟ್ರೋಲ್ ಚೀಲ ಸಿಡಿಸಿ ಆರ್ಸಿಬಿ ಗೆಲುವಿನ ಸಂಭ್ರಮ; ಎಂಟು ಮಂದಿ ಯುವಕರ ಬಂಧನ
ಮೇ 29 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲುವು ದಾಖಲಿಸಿ ಐಪಿಎಲ್ ಫೈನಲ್ ಪ್ರವೇಶಿಸಿದ್ದರಿಂದ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಯುವಕರ ಗುಂಪು ಪೆಟ್ರೋಲ್ ಬಾಂಬ್ ರೀತಿಯ ಪೆಟ್ರೋಲ್ ಚೀಲ ತಯಾರಿಸಿ ನಡು ರಸ್ತೆಯಲ್ಲೇ ಸಿಡಿಸಿ ಹುಚ್ಚಾಟ ಮೆರೆದಿದ್ದರು.;
ಕಾಲ್ಪನಿಕ ಚಿತ್ರ
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಭರ್ಜರಿ ಗೆಲುವು ಸಾಧಿಸಿದ ಬಳಿಕ ವಿಜಯೋತ್ಸವ ಆಚರಣೆಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟಕ ಸಿಡಿಸಿದ್ದ ಆರೋಪದ ಮೇಲೆ ರಾಯಚೂರು ಪೊಲೀಸರು ಎಂಟು ಮಂದಿ ಯುವಕರನ್ನು ಬಂಧಿಸಿದ್ದಾರೆ.
ಮೇ 29 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲುವು ದಾಖಲಿಸಿ ಐಪಿಎಲ್ ಫೈನಲ್ ಪ್ರವೇಶಿಸಿದ್ದರಿಂದ ಆರ್ಸಿಬಿ ಅಭಿಮಾನಿಗಳು ರಾಯಚೂರಿನಲ್ಲಿ ವಿಜಯೋತ್ಸವ ಆಚರಿಸಿದ್ದರು. ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಯುವಕರ ಗುಂಪು ಪಟಾಕಿ ಹಾಗೂ ಪೆಟ್ರೋಲ್ ಬಾಂಬ್ ರೀತಿಯ ಪೆಟ್ರೋಲ್ ಚೀಲ ತಯಾರಿಸಿ ನಡು ರಸ್ತೆಯಲ್ಲೇ ಸಿಡಿಸಿ ಹುಚ್ಚಾಟ ಮೆರೆದಿದ್ದರು.
ಪೆಟ್ರೋಲ್ ಚೀಲಗಳು ಭಾರೀ ಶಬದ್ದೊಂದಿಗೆ ಸಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ಲಾಸ್ಟಿಕ್ ಚೀಲದಲ್ಲಿ ಪೆಟ್ರೋಲ್; ಭಯಾನಕ ಸ್ಪೋಟ
ಪ್ಲಾಸ್ಟಿಕ್ ಚೀಲದಲ್ಲಿ ಪೆಟ್ರೋಲ್ ತುಂಬಿ ಅದನ್ನು ನಡು ರಸ್ತೆಯಲ್ಲಿಟ್ಟಿದ್ದರು. ಅದರ ಮೇಲೆ ಅಡುಗೆಗೆ ಬಳಸುವ ಹಿಟ್ಟಿದ್ದರು. ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದರೂ ಚೀಲವನ್ನು ಸ್ಪೋಟಿಸಿದ್ದರು. ಸ್ಫೋಟದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಆರೋಪಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡ ಪೊಲೀಸರು 8 ಮಂದಿ ಯುವಕರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಜೀವಕ್ಕೆ ಅಪಾಯ ಉಂಟುಮಾಡುವ ಹಾಗೂ ವಾಹನಗಳಿಗೆ ಅಡೆತಡೆ ಉಂಟುಮಾಡಿದ ಆರೋಪದಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಯುವಕರು ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ, ಯುವಕರು ಯೂಟ್ಯೂಬ್ ಚಾನೆಲ್ಗಳಲ್ಲಿ ಪೆಟ್ರೋಲ್ ಬಾಂಬ್ ತಯಾರಿಕೆಯಂತ ವಿಡಿಯೋಗಳನ್ನು ನೋಡಿ ಅಪಾಯಕಾರಿ ಸ್ಫೋಟಕಗಳನ್ನು ತಯಾರಿಸಿದ್ದರು ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ ತಿಳಿಸಿದ್ದಾರೆ.