ಮದುವೆಗೆ ಮೊದಲೇ ಗರ್ಭಿಣಿ; ಮರ್ಯಾದೆಗೆ ಅಂಜಿ ಮಗಳ ಕೊಲೆಗೆ ಯತ್ನಿಸಿದ ತಂದೆ

ಮಗಳು ಮೃತಪಟ್ಟಿರಬಹುದು ಎಂದು ಭಾವಿಸಿದ ಧರ್ಮನಾಯ್ಕ ಮತ್ತು ಆತನ ಪತ್ನಿ ಸ್ಥಳದಿಂದ ತೆರಳಿದ್ದಾರೆ. ಆದರೆ, ಕೆಲ ಹೊತ್ತಿನ ನಂತರ ಯುವತಿಗೆ ಪ್ರಜ್ಞೆ ಬಂದಿದ್ದು, ಆಕೆ ಹೇಗೋ ರಸ್ತೆವರೆಗೂ ನಡೆದು ಬಂದಿದ್ದಾಳೆ.;

Update: 2025-06-29 04:32 GMT

ಮದುವೆಗೂ ಮುನ್ನವೇ ಗರ್ಭಿಣಿಯಾದ 21 ವರ್ಷದ ಮಗಳನ್ನು ಕುಟುಂಬದ ಮರ್ಯಾದೆ ಹೋಯಿತು ಎಂಬ ಕಾರಣಕ್ಕೆ ತಂದೆಯೇ ಕೊಲೆ ಮಾಡಲು ಯತ್ನಿಸಿದ ಅಮಾನವೀಯ ಘಟನೆ ಸೊರಬ ತಾಲೂಕಿನಲ್ಲಿ ನಡೆದಿದೆ. ಸೊರಬ ಪೊಲೀಸರು ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಪುತ್ರಿ ಗರ್ಭಿಣಿಯಾಗಿರುವ ವಿಷಯ ತಿಳಿದ ಧರ್ಮನಾಯ್ಕ ಎಂಬಾತ, ಆಸ್ಪತ್ರೆಗೆ ಹೋಗುವುದಾಗಿ ಹೇಳಿ ತನ್ನ ಪತ್ನಿ ಮತ್ತು ಮಗಳನ್ನು ಜೂನ್ 27, ಶನಿವಾರದಂದು ತಾಲ್ಲೂಕಿನ ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ, ಮಗಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. "ಮಗಳನ್ನು ಸಾಯಿಸಬೇಡಿ" ಎಂದು ಪತ್ನಿ ಕಾಲಿಗೆ ಬಿದ್ದು ಅಂಗಲಾಚಿದರೂ ಆತ ಕೇಳಿಲ್ಲ. ಕತ್ತು ಬಿಗಿದು ಯುವತಿ ಮೂರ್ಛೆ ಹೋಗಿದ್ದಳು.

ಮಗಳು ಮೃತಪಟ್ಟಿರಬಹುದು ಎಂದು ಭಾವಿಸಿದ ಧರ್ಮನಾಯ್ಕ ಮತ್ತು ಆತನ ಪತ್ನಿ ಸ್ಥಳದಿಂದ ತೆರಳಿದ್ದಾರೆ. ಆದರೆ, ಕೆಲ ಹೊತ್ತಿನ ನಂತರ ಯುವತಿಗೆ ಪ್ರಜ್ಞೆ ಬಂದಿದ್ದು, ಆಕೆ ಹೇಗೋ ರಸ್ತೆವರೆಗೂ ನಡೆದು ಬಂದಿದ್ದಾಳೆ. ಸ್ಥಳೀಯರ ಸಹಾಯದಿಂದ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾಳೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವತಿಯು ಪಟ್ಟಣ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಧರ್ಮನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೊರಬ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

Tags:    

Similar News