ಭಾರೀ ಮಳೆ | ಬೆಳಗಾವಿಯಲ್ಲಿ ಸೇತುವೆಗಳು ಮುಳುಗಡೆ; ಕರಾವಳಿಯಲ್ಲಿ ಪ್ರವಾಹ ಭೀತಿ
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿಘಾಟ್ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಆನೆಮಹಲ್ ಬಳಿ ಸುಮಾರು 100 ಮೀಟರ್ ಉದ್ದಕ್ಕೂ ರಸ್ತೆಯ ತಡೆಗೋಡೆ ಕುಸಿಯತೊಡಗಿದೆ.;
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ , ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಭಾರೀ ಮಳೆಯಿಂದಾಗಿ ಮಂಗಳೂರು ನಗರದ ಹಲವು ಪ್ರದೇಶ ಪ್ರವಾಹಕ್ಕೆ ತುತ್ತಾಗಿವೆ. ಗುಡ್ಡ ಪ್ರದೇಶಗಳು ಕುಸಿತದ ಭೀತಿಯಲ್ಲಿವೆ. ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಎಲ್ಲೆಲ್ಲಿ ಮಳೆ ಸಾಧ್ಯತೆ?
ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಗದಗ ಮತ್ತು ವಿಜಯಪುರ, ಬೀದರ್, ಕಲಬುರ್ಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು (ಗ್ರಾಮೀಣ), ಬೆಂಗಳೂರು (ನಗರ), ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ, ಕೋಲಾರ, ಮಂಡ್ಯ ಚಾಮರಾಜನಗರ, ದಾವಣಗೆರೆ, ಹಾಸನ ತುಮಕೂರು, ಬಳ್ಳಾರಿ, ವಿಜಯನಗರ ಮತ್ತು ಮೈಸೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗಾವಿಯಲ್ಲಿ 6 ಸಂಪರ್ಕ ಸೇತುವೆಗಳು ಮುಳುಗಡೆ
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದ ಕೃಷ್ಣಾ, ವೇದಗಂಗಾ, ದೂದಗಂಗಾ ನದಿಯ ಒಳ ಹರಿವು ಹೆಚ್ಚಾಗಿದೆ. ಈ ಮೂರು ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಬೆಳಗಾವಿಯ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಆರು ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ. ಈ ಆರು ಸೇತುವೆಗಳು ಹನ್ನೆರಡು ಗ್ರಾಮಗಳಿಗೆ ನೇರ ಸಂಪರ್ಕ ಕಲ್ಪಿಸುತ್ತಿವೆ. ಬಾರವಾಡ-ಕುನ್ನೂರು, ಬೋಜ-ಕಾರದಗಾ, ಭೋಜವಾಡಿ -ಕುನ್ನೂರು ಮತ್ತು ಯಡೂರು- ಕಲ್ಲೋಳ, ಭಾವನಸೌಂದತ್ತಿ- ಮಾಂಜರಿ ಸೇತುವೆಗಳ ಸಂಪರ್ಕ ಕಡಿತ ಆಗಿದೆ. ಇದರಿಂದಾಗಿ 12 ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಈ ಗ್ರಾಮಗಳ ಜನರು ಪರ್ಯಾಯ ಮಾರ್ಗವಾಗಿ ಸಂಚರಿಸಬೇಕಾಗಿದೆ.
ಶಿರಾಡಿಘಾಟ್ ರಸ್ತೆ ಸಂಚಾರ ಅಸ್ತವ್ಯಸ್ತ
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿಘಾಟ್ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಆನೆಮಹಲ್ ಬಳಿ ಸುಮಾರು 100 ಮೀಟರ್ ಉದ್ದಕ್ಕೂ ರಸ್ತೆಯ ತಡೆಗೋಡೆ ಕುಸಿಯತೊಡಗಿದೆ. ಇದೇ ಘಾಟ್ ರಸ್ತೆ ದೊಡ್ಡತಪ್ಲು ಬಳಿ ಮಂಗಳವಾರ ರಾತ್ರಿ ರಸ್ತೆಗೆ ಬೃಹತ್ ಮರ ಉರುಳಿತ್ತು. ಬೆಳಗ್ಗೆ ತನಕ ಮರ, ಮಣ್ಣು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬೀಳುವ ಹಂತದಲ್ಲಿದ್ದ ಮರಗಳನ್ನು ಕಡಿಯಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು, ತನಿಕೋಡು ಬಳಿ ಗುಡ್ಡ ಕುಸಿದು ಅವಾಂತರವಾಗಿದೆ. ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಜೂನ್ 20ರ ಬೆಳಗ್ಗೆ 8ರವರೆಗೆ ಸಂಚಾರ ನಿರ್ಬಂಧ ಹೇರಲಾಗಿದೆ. ತನಿಕೋಡು ಚೆಕ್ಪೋಸ್ಟ್ನಿಂದ ಎಸ್ಕೆ ಬಾರ್ಡರ್ವರೆಗೆ ಸಂಚಾರ ನಿಷೇಧ ಹೇರಿ ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಉಪ್ಪಿನಂಗಡಿ: ಎರಡೂ ನದಿಯಲ್ಲಿ ನೀರಿನ ಮಟ್ಟ ಮತ್ತೆ ಹೆಚ್ಚಳ
ಇಲ್ಲಿ ಹರಿಯುವ ಕುಮಾರಧಾರಾ ಮತ್ತು ನೇತ್ರಾವತಿ ಎರಡೂ ನದಿಯಲ್ಲಿ ನೀರು ಮತ್ತೆ ಹೆಚ್ಚಳವಾಗಿದ್ದು, ಮಂಗಳವಾರ ಸಂಜೆಯ ಹೊತ್ತಿಗೆ ಎರಡೂ ನದಿ ಪ್ರವಾಹದ ರೀತಿಯಲ್ಲಿಉಕ್ಕಿ ಹರಿಯಲಾರಂಭಿಸಿರುವುದು ಹರಿಯಲಾರಂಭಿಸಿರುವುದು ಕಂಡು ಬಂದಿದೆ.
ಕೊಡಗಿನಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾವೇರಿ ಉಗಮಸ್ಥಾನ ತಲಕಾವೇರಿ ಭಾಗಮಂಡದಲ್ಲಿ ಮಳೆಯಾಗುತ್ತಿವೆ. ತ್ರಿವೇಣಿ ಸಂಗಮದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ತ್ರಿವೇಣಿ ಸಂಗಮದ ಉದ್ಯಾನ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಭಂಗಡೇಶ್ಚರ ದೇವಾಲಯ ಆವರಣಕ್ಕೂ ನೀರು ಪ್ರವೇಶ ಮಾಡಿದೆ. ಭಂಗಡೇಶ್ವರ ದೇವಾಲಯ ಆವರಣದ ಅಂಗಡಿ ಮುಂಗಟ್ಟುಗಳಿಗೆ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ನಾಪೋಕ್ಲು- ಅಯ್ಯಂಗೇರಿ -ಸಣ್ಣಪುಲಿಕೊಟ್ಟು ರಸ್ತೆ ಮೇಲೆ ಸುಮಾರು 4 ಅಡಿಯಷ್ಟು ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.