ಆಪರೇಷನ್ ಸಿಂದೂರ: ಸೈನಿಕರ ಶ್ರೇಯೋಭಿವೃದ್ಧಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಸಚಿವ ಜಮೀರ್ ಅಹ್ಮದ್
ಸೈನಿಕರ ಶ್ರೆಯಸ್ಸು ಹಾಗೂ ಶಕ್ತಿ ಅಭಿವೃದ್ಧಿಗೆ ಪ್ರಾರ್ಥನೆ ಸಲ್ಲಿಸುವಂತೆ ಸಚಿವ ಜಮೀರ್ ಅಹ್ಮದ್ ಗುರುವಾರ (ಮೇ8)ರಂದು ಸೂಚನೆ ನೀಡಿದ್ದರು. ರಾಜ್ಯಾದ್ಯಂತ ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.;
ʼಆಪರೇಷನ್ ಸಿಂದೂರʼ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಶೇಷಾದ್ರಿಪುರಂ ಮಸೀದಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯದ ವಕ್ಫ್ ಹಾಗೂ ಎಲ್ಲ ಮಸೀದಿಗಳಲ್ಲಿ ದೇಶದ ಸೈನಿಕರ ಶ್ರೆಯಸ್ಸು ಹಾಗೂ ಶಕ್ತಿ ಅಭಿವೃದ್ಧಿಗೆ ಪ್ರಾರ್ಥನೆ ಸಲ್ಲಿಸುವಂತೆ ಸಚಿವ ಜಮೀರ್ ಅಹ್ಮದ್ ಗುರುವಾರ (ಮೇ8)ರಂದು ವಕ್ಫ್ ಇಲಾಖೆ ಮೂಲಕ ಸೂಚನೆ ನೀಡಿದ್ದರು. ಅಂತೆಯೇ ರಾಜ್ಯಾದ್ಯಂತ ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ರಾಜ್ಯದ ಮುಜರಾಯಿ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಗುರುವಾರ (ಮೇ8)ರಂದು ವಿಶೇಷ ಪೂಜೆ ನಡೆಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ವತಿಯಿಂದ ಪೂಜೆ ಸಲ್ಲಿಸುವುದಾಗಿ ತಿಳಿಸಿದ್ದರು.
ಕಾಂಗ್ರೆಸ್ವತಿಯಿಂದ ತಿರಂಗಾ ಯಾತ್ರೆ
ಭಾರತೀಯ ಸೈನಿಕರಿಗೆ ಬೆಂಬಲ ನೀಡುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ವತಿಯಿಂದ ಬೆಂಗಳೂರಿನ ವಿಧಾನಸೌಧದ ಮುಂಭಾಗ 'ತಿರಂಗಾಯಾತ್ರೆ' ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹಸಚಿವ ಡಾ. ಪರಮೇಶ್ವರ್, ಸಂಸದೀಯ ಹಾಗೂ ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.