ಥಣಿಸಂದ್ರದಲ್ಲಿ ಓಣಂ ರಂಗೋಲಿ ಅಳಿಸಿ ವಿಕೃತಿ : ಮಹಿಳೆ ವಿರುದ್ಧ ಎಫ್‌ಐಆರ್‌

ಓಣಂ ಅಂಗವಾಗಿ ಮಕ್ಕಳು ಬಿಡಿಸಿದ್ದ ರಂಗೋಲಿಯನ್ನು ಮಹಿಳೆಯೊಬ್ಬರು ವಿರೂಪಗೊಳಿಸಿ ದರ್ಪ ತೋರಿದ ಘಟನೆ ನಗರದ ಥಣಿಸಂದ್ರದ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಆ ಸಂಬಂಧ ಪೊಲೀಸರು ಮಹಿಳೆಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ

Update: 2024-09-24 12:53 GMT

ಓಣಂ ಹಬ್ಬದ ಅಂಗವಾಗಿ ಮಕ್ಕಳೇ ಸೇರಿ ಬಿಡಿಸಿದ್ದ ರಂಗೋಲಿಯನ್ನು ಮಹಿಳೆಯೊಬ್ಬರು ವಿರೂಪಗೊಳಿಸಿ ದರ್ಪ ತೋರಿದ ಘಟನೆ ನಗರದ ಥಣಿಸಂದ್ರದ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

ಮಲೆಯಾಳಿಗರು ಪ್ರತಿ ವರ್ಷ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಓಣಂ ಆಚರಿಸುವುದು ವಾಡಿಕೆ. ಅಂತೆಯೇ ಥಣಿಸಂದ್ರದ ಮೊನಾರ್ಕ್ ಸೆರೆನಿಟಿ ವಸತಿ ಗೃಹದಲ್ಲಿ ಮಕ್ಕಳೆಲ್ಲರೂ ಸೇರಿ ಹೂಗಳಿಂದ ಪೂಕಳಂ ರಂಗೋಲಿ ಬಿಡಿಸಿದ್ದರು. ಈ ವೇಳೆ ಅಲ್ಲಿಗೆ ಬಂದ ಖಾಸಗಿ ಬ್ಯಾಂಕ್ ಸಹಾಯಕ ಉಪಾಧ್ಯಕ್ಷೆ ಸಿಮಿ ನಾಯರ್ ಎಂಬಾಕೆ ನನ್ನ ಅನುಮತಿ ಇಲ್ಲದೇ ರಂಗೋಲಿ ಬಿಡಿಸಿದ್ದೇಕೆ ಎಂದು ದಬಾಯಿಸಿ ದರ್ಪ ತೋರಿದ್ದಾರೆ.

ಮಹಿಳೆಯ ಈ ವರ್ತನೆ ಓಣಂನ ಶ್ರೀಮಂತ ಸಂಸ್ಖೃತಿ ಹಾಗೂ ಮಕ್ಕಳ ಪರಿಶ್ರಮವನ್ನು ಅಗೌರವಿಸಿದಂತಾಗಿದೆ. ತಮ್ಮದೇ ಸಂಸ್ಕೃತಿಯನ್ನು ಅಪಮಾನಿಸಿದ ಮಹಿಳೆಯನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಮುದಾಯವನ್ನು ಇಬ್ಭಾಗಿಸುವ ಮಹಿಳೆಯ ಹೀನ ಮನಸ್ಥಿತಿ ಏಕತೆಯನ್ನು ಮುರಿಯುವಂತಿದೆ. ಇಂತಹ ವರ್ತನೆಗಳನ್ನು ಮನುಕುಲ ಎಂದಿಗೂ ಸಹಿಸುವುದಿಲ್ಲ, ಸಹಿಸಕೂಡದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ದರ್ಪ ತೋರಿದ ಮಹಿಳೆಯ ತಕ್ಕ ಶಾಸ್ತಿ ಮಾಡುವಂತೆ ಆಗ್ರಹಿಸಿದ್ದಾರೆ.

ಈ ನಡುವೆ ಮಹಿಳೆಯ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ಎಫ್‌ಐಆರ್‌ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

Tags:    

Similar News