ಆಯುಷ್‌ ಇಲಾಖೆ ಮುಚ್ಚುವ ಪ್ರಸ್ತಾಪ ಇಲ್ಲ: ಹೈಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ವಿಭಾಗಗಳಲ್ಲಿನ ಆಂತರಿಕ ವ್ಯವಸ್ಥೆಯನ್ನು ಸುಗಮಗೊಳಿಸಲು ಕೆಲವು ಬದಲಾವಣೆ ತರಲಾಗುತ್ತಿದೆ. ಆಯುಷ್ ಇಲಾಖೆ ಮುಚ್ಚುವ ಪ್ರಸ್ತಾವವಿಲ್ಲ.;

Update: 2025-08-27 08:48 GMT

ಕರ್ನಾಟಕ ಹೈಕೋರ್ಟ್‌ 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ವಿಭಾಗಗಳಲ್ಲಿನ ಆಂತರಿಕ ವ್ಯವಸ್ಥೆಯನ್ನು ಸುಗಮಗೊಳಿಸಲು ಕೆಲವು ಬದಲಾವಣೆಗಳನ್ನು ತರಲಾಗುತ್ತಿದ್ದು, ಆಯುಷ್ ಇಲಾಖೆ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಸ್ತಾವವಿಲ್ಲ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮೌಖಿಕವಾಗಿ ಹೇಳಿದೆ.

ಔಷಧಿಗಳ ಅಮಲು ಜಾರಿ ವಿಭಾಗ ಮತ್ತು ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜೊತೆ ವಿಲೀನಗೊಳಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ರಾಜ್ಯ ಔಷಧ ಉತ್ಪಾದಕರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಸ್ತುತ ಇರುವ ಆಯುಷ್ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿಲೀನ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಸರ್ಕಾರ ಹೇಳಿದೆ. ರಾಜ್ಯ ಔಷಧ ಉತ್ಪಾದಕರ ಸಂಘದ ಸದಸ್ಯರ ಸ್ಥಳಗಳ ಪರಿಶೀಲನೆಗೆ ಅರ್ಹ ಇನ್​ಸ್ಪೆಕ್ಟರ್ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಜತೆಗೆ, ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರರ ಪರ ವಕೀಲರು, ಆಯುಷ್ ಇಲಾಖೆಯನ್ನು ಅಲೋಪತಿ ಔಷಧಿಗಳ ಇಲಾಖೆಯ ಜೊತೆ ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಮಾಡಿದೆ. ಇದು ಔಷಧ ಮತ್ತು ಕಾಂತಿವರ್ಧಕ ಕಾಯ್ದೆಗೆ ವಿರುದ್ಧವಾಗಿದೆ. ಇದರಿಂದ ಅರ್ಜಿದಾರರ ಸ್ಥಳಗಳನ್ನು ಪ್ರಸ್ತಾವಿತ ಔಷಧ ಮತ್ತು ಕಾಂತಿವರ್ಧಕ ನಿಯಮಗಳಡಿ ಅನರ್ಹ ಅಧಿಕಾರಿಗಳು ಪರಿಶೀಲನೆ ಮಾಡಲು ಅವಕಾಶ ಮಾಡಿಕೊಡಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ರೊಬೆನ್ ಜಾಕಬ್, ಆದೇಶ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿ ಬರುವ ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಹಾರ ಮತ್ತು ಸುರಕ್ಷತೆ ಮತ್ತು ಔಷಧ ನಿಯಂತ್ರಕರ ಆಯುಕ್ತಾಲಯಗಳಿಗೆ ಸಂಬಂಧಿಸಿದ ಆಂತರಿಕ ವ್ಯವಸ್ಥೆಯಾಗಿದೆ.

ಔಷಧ ನಿಯಂತ್ರಕರ ಕಚೇರಿಯನ್ನು ಆಹಾರ ಮತ್ತು ಸುರಕ್ಷತಾ ಆಯುಕ್ತಾಲಯದ ಜತೆ ವಿಲೀನಗೊಳಿಸಲಾಗಿದ್ದು, ಇದು ಆಡಳಿತಾತ್ಮಕ ವ್ಯವಸ್ಥೆಯಾಗಿದೆ. ಆಯುಷ್ ಆಯುಕ್ತಾಲಯವು ಔಷಧ ಜಾರಿ ಮತ್ತು ವಿಶ್ಲೇಷಣೆ ಮತ್ತು ಆಯುಷ್ ಆಸ್ಪತ್ರೆಗಳ ಉಸ್ತುವಾರಿ ಮಾಡಲಿದೆ. ಅಲ್ಲದೆ, ಔಷಧಗಳ ಜಾರಿ ಮತ್ತು ವಿಶ್ಲೇಷಣಾ ಆಡಳಿತವು ಆಹಾರ ಮತ್ತು ಔಷಧ ಆಯುಕ್ತಾಲಯದಡಿ ಬರಲಿದೆ. ಆಯುಷ್ ಔಷಧ ಉತ್ಪಾದನಾ ಘಟಕಗಳ ಪರಿಶೀಲನೆಯಲ್ಲಿ ಸಮರ್ಥತೆ ಖಾತರಿಪಡಿಸಲು ಕಾಯ್ದೆ ಅಡಿ ಮತ್ತು ಸಂಬಂಧಿತ ನಿಯಮದಡಿ ಅರ್ಹ ನಿರೀಕ್ಷಕರನ್ನು ನೇಮಕ ಮಾಡಲಾಗುತ್ತದೆ. ಈ ಸಂಬಂಧ ಸೂಕ್ತ ಪ್ರಮಾಣ ಪತ್ರವನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

2025ರ ಜು. 29ರಂದು ಆಯುಷ್ ಇಲಾಖೆಯ ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಿಗಳ ಅಮಲುಜಾರಿ ವಿಭಾಗ ಮತ್ತು ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯೊಂದಿಗೆ ವಿಲೀನಗೊಳಿಸಿ ಸರ್ಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Tags:    

Similar News