ವರಮಹಾಲಕ್ಷ್ಮಿ ಹಬ್ಬದ ದಿನವೇ ಘೋರ ದುರಂತ: ಅಪಘಾತದಲ್ಲಿ ನವವಿವಾಹಿತೆ ಸಾವು, ಸುದ್ದಿ ಕೇಳಿ ಅಜ್ಜಿಯೂ ನಿಧನ
ಪತಿ ಸುನೀಲ್ ಅವರಿಗೂ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ, ಪತ್ನಿಯ ಮೃತದೇಹದ ಬಳಿ ಸುನೀಲ್ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.;
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ದಿನವೇ ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಅರಿಶಿನ-ಕುಂಕುಮಕ್ಕೆಂದು ಪತಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ನವವಿವಾಹಿತೆಯೊಬ್ಬರು ಲಾರಿ ಡಿಕ್ಕಿ ಹೊಡೆದ ಪರಿಣಾಮ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಆಘಾತಕಾರಿ ಸುದ್ದಿ ಕೇಳಿ, ಮೊಮ್ಮಗಳ ಸಾವಿನ ನೋವು ತಾಳಲಾರದೆ ಚನ್ನಪಟ್ಟಣದಲ್ಲಿದ್ದ ಮೃತರ ಅಜ್ಜಿಯೂ ಪ್ರಾಣ ಬಿಟ್ಟಿದ್ದು, ಹಬ್ಬದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಮಲ್ಲೇಶ್ವರಂ ನಿವಾಸಿಗಳಾದ ಗೀತಾ (23) ಮತ್ತು ಸುನೀಲ್, ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ, ಲಗ್ಗೆರೆಯಲ್ಲಿರುವ ಸುನೀಲ್ ಅವರ ಸಹೋದರಿಯ ಮನೆಗೆ ಅರಿಶಿನ-ಕುಂಕುಮ ಕಾರ್ಯಕ್ರಮಕ್ಕೆ ದಂಪತಿಯನ್ನು ಆಹ್ವಾನಿಸಲಾಗಿತ್ತು. ಲಗ್ಗೆರೆ ಮೇಲ್ಸೇತುವೆ ಬಳಿ ದಂಪತಿ ಸಾಗುತ್ತಿದ್ದಾಗ, ವೇಗವಾಗಿ ಬಂದ ಲಾರಿಯೊಂದು ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಗೀತಾ ಅವರ ತಲೆಗೆ ಗಂಭೀರ ಗಾಯಗಳಾಗಿ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪತಿ ಸುನೀಲ್ ಅವರಿಗೂ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ, ಪತ್ನಿಯ ಮೃತದೇಹದ ಬಳಿ ಸುನೀಲ್ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆಯ ಕುರಿತು ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಸುರೇಶ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.