Mysore MUDA Case| ಮತ್ತೆ ಆರು ತಿಂಗಳು ಕಾಲಾವಕಾಶ ಕೇಳಿದ ಲೋಕಾಯುಕ್ತ ಪೊಲೀಸರು

ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ವಿಚಾರಣೆಯಲ್ಲಿ ಬಿ ವರದಿ ಸಲ್ಲಿಕೆಯಾಗಿದೆ. ಅವರನ್ನು ಬಿಟ್ಟು ಪ್ರಕರಣದ ಸಂಪೂರ್ಣ ತನಿಖೆ ಪೂರ್ಣಗೊಂಡಿಲ್ಲ.;

Update: 2025-06-02 12:57 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ)  50-50 ಅನುಪಾತದಡಿ ನಿವೇಶನ ಹಂಚಿಕೆ ಹಗರಣ ಸಂಬಂಧ ಇತರರ ವಿರುದ್ಧ ತನಿಖೆ ನಡೆಸಲು ಮೈಸೂರು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರು ತಿಂಗಳ ಕಾಲಾವಕಾಶ ಕೋರಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮೊದಲ ನಾಲ್ವರು ಆರೋಪಿಗಳ ವಿರುದ್ಧ 'ಬಿ ರಿಪೋರ್ಟ್‌' ಸಲ್ಲಿಕೆ ಮಾಡಲಾಗಿದೆ. ಆದರೆ, ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರನ್ನು ಬಿಟ್ಟು ಒಟ್ಟು ಪ್ರಕರಣದ ಸಂಪೂರ್ಣ ತನಿಖೆಯು ಪೂರ್ಣಗೊಂಡಿಲ್ಲ. ಅಂತಿಮ ವರದಿ ಸಲ್ಲಿಕೆಗೆ ಮುಡಾ ಹಗರಣದಲ್ಲಿ ಕೇಳಿಬಂದ ಇತರೆ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಬೇಕಾಗಿದೆ. ಅಲ್ಲದೇ, ತನಿಖೆಯು ಇನ್ನಷ್ಟು ನಡೆಸಬೇಕಾಗಿದೆ.  ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯದ ಮೊರೆ ಹೋಗಿ ಮತ್ತೆ ಆರು ತಿಂಗಳ ಅವಕಾಶ ನೀಡುವಂತೆ ಮೇ 29 ರಂದು  ಕೋರಿದ್ದಾರೆ.

ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ.ಉದೇಶ್‌ ಅವರು ನ್ಯಾಯಾಲಯಕ್ಕೆ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ತನಿಖೆ ಮತ್ತು ಕೆಲವರ ವಿಚಾರಣೆ ನಡೆಸುವ ಅಗತ್ಯ ಇರುವ ಕಾರಣ ಅಂತಿಮ ವರದಿ ಸಲ್ಲಿಕೆ ಮಾಡಲು ಆರು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. 

ಒಂದು ವೇಳೆ, ವಿಚಾರಣೆ ವೇಳೆ ಸಿದ್ದರಾಮಯ್ಯ ಅಥವಾ ಇತರ ಮೂವರ ಹೆಸರುಗಳು  ಉಲ್ಲೇಖವಾದರೆ,  ಮತ್ತೆ ಹೆಚ್ಚಿನ ವಿಚಾರಣೆ ನಡೆಸುವ ಅವಕಾಶ ಕಾನೂನಿನಲ್ಲಿದೆ. ಆದರೆ, ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದು ದಾಖಲೆಗಳ ಮೇಲೆ  ಮತ್ತು ತನಿಖಾಧಿಕಾರಿಗಳು ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರಲಿದೆ.

ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ (ಪಾರ್ವತಿ ಸೋದರ) ಮತ್ತು ಜಮೀನು ಮಾಲೀಕ ದೇವರಾಜು ವಿರುದ್ಧ ʼಬಿ ರಿಪೋರ್ಟ್‌ʼ ಸಲ್ಲಿಕೆ ಮಾಡಿದ್ದಾರೆ. ಇನ್ನುಳಿದಂತೆ ಹಲವು ಅಧಿಕಾರಿಗಳು, ಮಾಜಿ ಅಧ್ಯಕ್ಷರ ವಿಚಾರಣೆ ನಡೆಸಿ ಅಂತಿಮ ವರದಿ ಸಿದ್ಧಪಡಿಸಬೇಕಿದೆ. ನ್ಯಾಯಾಲಯವು ಹಗರಣದ ಸಂಬಂಧ ವಿಸ್ತೃತವಾದ ವರದಿಯನ್ನು ಸಲ್ಲಿಕೆ ಮಾಡುವಂತೆ ಕೋರಿದೆ. ತನಿಖೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಕಾಲಾವಕಾಶದ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿವಿಸ್ತೃತವಾದ ವರದಿ ಸಲ್ಲಿಕೆಗೆ ಇನ್ನು ಆರು ತಿಂಗಳ ಕಾಲಾವಕಾಶದ ಅಗತ್ಯ ಇದೆ ಎಂಬುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಸ್ನೇಹಮಯಿ ಕೃಷ್ಣ ಆಕ್ಷೇಪ

ಅಂತಿಮ ವರದಿ ಸಲ್ಲಿಕೆಗೆ ನ್ಯಾಯಾಲಯ ಅವಕಾಶ ನೀಡಿದ್ದರೂ ಮತ್ತಷ್ಟು ಕಾಲಾವಕಾಶ ಕೋರಿದ ಲೋಕಾಯುಕ್ತ ಪೊಲೀಸರ ಮನವಿಗೆ ದೂರುದಾರ ಸ್ನೇಹಮಯಿ ಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರು ಅನಗತ್ಯವಾಗಿ ವಿಚಾರಣೆಯನ್ನು ವಿಳಂಬ ಮಾಡಲು ಕಾಲಾವಕಾಶ ಕೋರಿದ್ದಾರೆ ಎಂದು ಆಕ್ಷೇಪದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ತನಿಖೆಯನ್ನು ವಿಳಂಬ ಮಾಡುತ್ತಿರುವ ಕಾರಣ ತನಿಖಾಧಿಕಾರಿಯನ್ನು ಬದಲಿಸಬೇಕು ಎಂದು ಸಹ ನ್ಯಾಯಾಲಯವನ್ನು ಕೋರಿದ್ದಾರೆ. 

ತನಿಖೆಯ ವಿಧಾನವು ಕಾನೂನಿನ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಲೋಕಾಯುಕ್ತ ಪೊಲೀಸರು ʼಬಿ ರಿಪೋರ್ಟ್ʼ ಸಲ್ಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇತರೆ ಆರೋಪಿಗಳನ್ನು ದೋಷಮುಕ್ತ ಗೊಳಿಸಲು ಸಾಧ್ಯವಿಲ್ಲ. ಅಲ್ಲದೆ, ತನಿಖೆ ವಿಳಂಬ ಮಾಡಿ ಪ್ರಕರಣವನ್ನು ಬಾಕಿ ಇಡುವಂತೆ ಮಾಡುವುದು ಸಹ ಸಾಧ್ಯವಿಲ್ಲ ಎಂದು ಆಕ್ಷೇಪಣೆಯಲ್ಲಿ ಉಲ್ಲೇಖಿಸಿದ್ದಾರೆ. 

ಲೋಕಾಯುಕ್ತ ಪೊಲೀಸರು ಸಲ್ಲಿಕೆ ಮಾಡಿರುವ ವರದಿಯಲ್ಲಿ ತಿಳಿಸಿರುವಂತೆ 2016 ರಿಂದ 2024ರವರೆಗೆ ಅಕ್ರಮವಾಗಿ ಒಟ್ಟು 1055 ನಿವೇಶನಗಳನ್ನು ಮುಡಾದಿಂದ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವ 134 ಜನರು ಸೇರಿದಂತೆ ಇತರರ ವಿರುದ್ಧ ತನಿಖೆ ನಡೆಸುತ್ತಿರುವುದು ಕಂಡು ಬಂದಿಲ್ಲ. ವರದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರನ್ನು ರಕ್ಷಿಸುವ ಪ್ರಯತ್ನದ ಅಂಶಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣದ  ತನಿಖಾಧಿಕಾರಿಯನ್ನಾಗಿ ಸಮರ್ಥ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಕೋರಿದ್ದಾರೆ. 

ದೂರುದಾರರ ಆಕ್ಷೇಪಣೆಗೆ ಪ್ರತಿಯಾಗಿ ತಕರಾರು ಸಲ್ಲಿಕೆ ಮಾಡಲು  ನ್ಯಾಯಾಲಯವು ಲೋಕಾಯುಕ್ತ ಪೊಲೀಸರು ಸೂಚಿಸಿ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿಕೆ ಮಾಡಿದೆ. 

ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಮೈಸೂರು ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮೊದಲ ನಾಲ್ಕು ಆರೋಪಿಗಳ ವಿರುದ್ಧ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದಾರೆ. ಇನ್ನುಳಿದ ಆರೋಪಿಗಳ ವಿಚಾರಣೆ ನಡೆಸಿ ಅಂತಿಮ ವರದಿ ಸಲ್ಲಿಕೆಗೆ ನ್ಯಾಯಾಲಯದ ಸಮಯವಕಾಶ ಕೋರಿದ್ದಾರೆ. ಪ್ರಕರಣದ ಮೊದಲ ನಾಲ್ಕು ಆರೋಪಿಗಳ ವಿರುದ್ಧ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿರುವುದರಿಂದ ಅದರ ಆಧಾರದ ಮೇಲೆ ಪ್ರಕರಣದ ಮೊದಲ ನಾಲ್ಕು ಆರೋಪಿಗಳ ವಿರುದ್ಧ ಆರೋಪ ಸಾಬೀತು ಪಡಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ ಎಂದರು. 

ಪೊಲೀಸರ ನಡೆಗೆ ಆಕ್ಷೇಪಣೆ ಸಲ್ಲಿಕೆ ಮಾಡಿರುವುದರಿಂದ ಅದಕ್ಕೆ ತಕರಾರು ಅರ್ಜಿ ಸಲ್ಲಿಕೆ ಮಾಡುವಂತೆ ನ್ಯಾಯಾಲಯ ತಿಳಿಸಿದೆ. ಲೋಕಾಯುಕ್ತ ಪೊಲೀಸರು ತಕಾರರು ಅರ್ಜಿ ಸಲ್ಲಿಕೆ ಬಳಿಕ ಮುಂದಿನ ಆದೇಶ ನೀಡುವ ನಿರೀಕ್ಷೆ ಇದೆ. ಇದಲ್ಲದೇ, ತನಿಖಾಧಿಕಾರಿ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಮತ್ತು ಏಕಪಕ್ಷೀಯ ವರ್ತನೆ ಇರುವ ಕಾರಣ ಅವರನ್ನು ಬದಲಿಸುವಂತೆ ಕೋರಲಾಗಿದೆ ಎಂದು ಹೇಳಿದರು. 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 5000 ಕೋಟಿ  ರೂಪಾಯಿಗಿಂತ ಹೆಚ್ಚು ಮೊತ್ತದ ಅವ್ಯವಹಾರ ನಡೆದಿದೆ. 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಿ ಭಾರಿ ಪ್ರಮಾಣದಲ್ಲಿ ಅಕ್ರಮ ಎಸಗಲಾಗಿದೆ. ಈ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆಗೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕೆ ವಿ ರಾಜೇಂದ್ರ ಅವರು 50- 50 ಅನುಪಾತವನ್ನು ರದ್ದು ಪಡಿಸಿ ಸೂಕ್ತ ಕ್ರ ಕೈಗೊಳ್ಳಬೇಕು ಎಂದಿದ್ದರು. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. 

Tags:    

Similar News