Mysore MUDA Case: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 26 ಪುಟಗಳ ಲಿಖಿತ ವಾದ ಸಲ್ಲಿಸಿದ ದೂರುದಾರ

ಪ್ರಕರಣದ ತನಿಖಾಧಿಕಾರಿ ಬದಲಾವಣೆ ಮಾಡುವಂತೆ ಸಲ್ಲಿಸಿದ ಅರ್ಜಿಯಲ್ಲಿ ಸುದೀರ್ಘ ಲಿಖಿತವಾದವನ್ನು ಮಂಡಿಸಲಾಗಿದೆ. ಮುಂದಿನ ವಿಚಾರಣೆಯನ್ನು ಜು.15ಕ್ಕೆ ಮುಂದೂಡಿಕೆ.;

Update: 2025-06-30 15:23 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ 26 ಪುಟಗಳ ಲಿಖಿತ ವಾದ ಸಲ್ಲಿಸಿದರು.

ಪ್ರಕರಣದ ತನಿಖಾಧಿಕಾರಿ ಬದಲಾವಣೆ ಮತ್ತು ತನಿಖಾಧಿಕಾರಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಸ್ನೇಹಮಯಿ ಕೃಷ್ಣ ತಮ್ಮ ಸುದೀರ್ಘ ಲಿಖಿತವಾದವನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ವಾದವನ್ನು ಪರಿಗಣಿಸಿದ ನ್ಯಾಯಾಲಯವು ಲೋಕಾಯುಕ್ತ ಪೊಲೀಸರ ವಾದಕ್ಕೆ ಅವಕಾಶ ನೀಡಿ ಮುಂದಿನ ವಿಚಾರಣೆಯನ್ನು ಜು.15ಕ್ಕೆ ಮುಂದೂಡಿತು.

ಸ್ನೇಹಮಹಿ ಕೃಷ್ಣ ಸಲ್ಲಿಕೆ ಮಾಡಿರುವ ಲಿಖಿತ ವಾದದಲ್ಲಿ ಹಗರಣ ಸಂಬಂಧ ಲೋಕಾಯುಕ್ತ ತನಿಖಾಧಿಕಾರಿ ಸಲ್ಲಿಸಿರುವ ಅಂತಿಮ ವರದಿಯನ್ನು ತಿರಸ್ಕರಿಸಬೇಕು. ಆರೋಪಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ತವ್ಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ತನಿಖಾಧಿಕಾರಿಯನ್ನು ಬದಲಿಸಿ, ಬೇರೆ ತನಿಖಾಧಿಕಾರಿಯನ್ನು ನೇಮಿಸಬೇಕು. ಆರೋಪಿಗಳನ್ನು ರಕ್ಷಿಸುವ ದುರುದ್ದೇಶದಿಂದ ಸತ್ಯಾಂಶಗಳನ್ನು ಮುಚ್ಚಿಟ್ಟು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ನ್ಯಾಯಾಲಯಕ್ಕೂ ಸಲ್ಲಿಸಿರುವ ತನಿಖಾಧಿಕಾರಿ ಮತ್ತು ಇವರ ಕೃತ್ಯಗಳಿಗೆ ಸಹಕರಿಸಿರುವ ಹಿರಿಯ ಅಧಿಕಾರಿ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸುವಂತೆ ಮನವಿ ಮಾಡಿದರು. 

ಪ್ರಕರಣದಲ್ಲಿ ಮೊದಲ ನಾಲ್ಕು ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಮತ್ತು ಭೂ ಮಾಲೀಕ ದೇವರಾಜ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆಯೇ? ಇಲ್ಲವೇ? ಎಂಬುದರ ಮಾಹಿತಿ ನೀಡಿಲ್ಲ. ತನಿಖಾಧಿಕಾರಿಗೆ ಮಾಹಿತಿ ನೀಡಲು ಸಮಸ್ಯೆ ಏನು? ಎಂಬುದನ್ನು ತಿಳಿಸಬೇಕು. ತನಿಖಾಧಿಕಾರಿಗೆ ಆರೋಪಿಗಳನ್ನು ಅದಷ್ಟು ಬೇಗ ಆರೋಪ ಮುಕ್ತರನ್ನಾಗಿಸುವ ದುರುದ್ದೇಶ ತನಿಖಾಧಿಕಾರಿ ಇರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಪೊಲೀಸರ ನಡೆಯ ಬಗ್ಗೆ ತಕರಾರು ಅರ್ಜಿಯಲ್ಲಿ ಏನನ್ನೂ ಹೇಳದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. 

ಆರೋಗ್ಯಗಳನ್ನು ರಕ್ಷಣೆ ಮಾಡುವ ದುರುದ್ದೇಶದಿಂದ ಪ್ರಕರಣದ ತನಿಖಾಧಿಕಾರಿಯು ತಮಗೆ ಕಾನೂನಿನ ಸಾಮಾನ್ಯ ಜ್ಞಾನ ಇಲ್ಲದವರಂತೆ ನಡೆದುಕೊಂಡಿದ್ದಾರೆ. ಈ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಮೊದಲ ನಾಲ್ವರ ಆರೋಪಿಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅಂತಿಮ ವರದಿಗೆ ಪೂರಕವಾಗಿ ತನಿಖೆ ಮುಂದುವರಿಸುವುದಕ್ಕೆ ಅನುಮತಿ ಕೋರಲು ಕಾನೂನಿನಲ್ಲಿ ಅವಕಾಶ ಇರುತ್ತದೆ. ಆದರೆ, ಇತರೆ ಆರೋಪಿಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವಾಗ, ನಾಲ್ವರು ಆರೋಪಿಗಳಿಗೆ ಸಂಬಂಧಪಟ್ಟಂತೆ ಅಂತಿಮ ವರದಿ ಸಲ್ಲಿಸುವ ಮುನ್ನವೇ ತನಿಖೆ ಮುಂದುವರಿಸಲು ಅವಕಾಶ ಇರುವುದಿಲ್ಲ ಎಂದು ವಾದಿಸಿದ್ದಾರೆ. 

ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದ್ದು, 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದೆ. ಇಲ್ಲಿ ಅಂದಾಜು 5 ಸಾವಿರ ಕೋಟಿ ರೂಪಾಯಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮೈಸೂರಿನಲ್ಲಿ ನಿರ್ಮಿಸಲ್ಪಟ್ಟ ಬಡಾವಣೆಗಳಲ್ಲಿ ಯಾವುದೇ ಮಾನದಂಡವನ್ನು ಅನುಸರಿಸಿಲ್ಲ ಎಂದು ಹೇಳಲಾಗಿದೆ. ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲ ಮತ್ತು ಶೇ. 50ರಷ್ಟು ನಿವೇಶನಗಳನ್ನೂ ನೀಡಿಲ್ಲ. ಬೇರೆಡೆ ಭೂಮಿಯನ್ನೂ ನಿಗದಿಪಡಿಸಿಲ್ಲ. ಅದಕ್ಕೆ ಬದಲಾಗಿ ಅರ್ಜಿಗಳಲ್ಲಿನ ಹಿರಿತನ ಪರಿಗಣಿಸದೆ ಅಕ್ರಮವಾಗಿ ಸೈಟ್ ಗಳನ್ನು ನೀಡಲಾಗಿದೆ ಎಂಬುದು ಕೇಳಿ ಬಂದಿರುವ ಆರೋಪವಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ನಿಯಮಬಾಹಿರವಾಗಿ ಬದಲಿ ನಿವೇಶನ ನೀಡಲಾಗಿದೆ. ಕೋಟ್ಯಂತರ ರು. ಮೌಲ್ಯದ ನಿವೇಶನಗಳನ್ನು ಕಡಿಮೆ ಬೆಲೆ ನೀಡಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಪ್ರಭಾವ ಬೀರಿದ್ದು, ಈ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. 



Tags:    

Similar News