‌ಭದ್ರಾ ನದಿಯಲ್ಲಿ ಕೊಚ್ಚಿಹೋದ ಮಗ; ಮನನೊಂದು ತಾಯಿ ಆತ್ಮಹತ್ಯೆ

ಕಳಸ ಸಮೀಪದ ಗಣಪತಿ ಕಟ್ಟೆ ಗ್ರಾಮದ ನಿವಾಸಿ ಸಮಂತ್ (23) ಎಂಬ ಯುವಕ ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆತರಲು ತೆರಳುತ್ತಿದ್ದಾಗ ಈ ಅವಗಡ ಸಂಭವಿಸಿದೆ.;

Update: 2025-07-25 06:04 GMT

ಭದ್ರಾ ನದಿಯಲ್ಲಿ ಮಗ ನದಿಯಲ್ಲಿ ಕೊಚ್ಚಿ ಹೋದ ದುಃಖದಲ್ಲಿ ತಾಯಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕಳಸಾ ತಾಲೂಕಿನ ಕೊಳಮಗೆ ಗ್ರಾಮದ ಬಳಿ ಯುವಕನೊಬ್ಬ ಪಿಕಪ್ ವಾಹನ ಸಮೇತ ಭದ್ರಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನ ಗಣಪತಿ ಕಟ್ಟೆಯಲ್ಲಿ ನಡೆದಿದೆ.

ಕಳಸ ಸಮೀಪದ ಗಣಪತಿ ಕಟ್ಟೆ ಗ್ರಾಮದ ನಿವಾಸಿ ಸಮಂತ್ (23) ಎಂಬ ಯುವಕ ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆತರಲು ತೆರಳುತ್ತಿದ್ದಾಗ ಈ ಅವಗಡ ಸಂಭವಿಸಿದೆ. ಆತನ ಪಿಕಪ್ ವಾಹನವು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಭದ್ರಾ ನದಿಗೆ ಬಿದ್ದಿದೆ. ಭಾರೀ ಮಳೆಯಿಂದಾಗಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಸಮಂತ್ ವಾಹನ ಸಮೇತ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಿಯುತ್ತಿರುವ ಮಳೆಯಿಂದ ಕಾರ್ಯಾಚರಣೆಗೆ ತೊಂದರೆಯುಂಟಾಗಿದೆ. ಬಾಳೆಹೊನ್ನೂರಿನಿಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಮುಳುಗು ತಜ್ಞ ಮಲ್ಪೆ ಈಶ್ವರ್ ಅವರನ್ನೂ ಕರೆಸಲು ಸಿದ್ಧತೆ ನಡೆಸಲಾಗುತ್ತಿದೆ.

ತಾಯಿ ಆತ್ಮಹತ್ಯೆ

ಇತ್ತ ಮಗ ಸಮಂತ್ ನದಿ ನೀರಿನಲ್ಲಿ ಕೊಚ್ಚಿ ಹೋದ ಸುದ್ದಿ ತಿಳಿಯುತ್ತಿದ್ದಂತೆ, ತಾಯಿ ರವಿಕಲಾ (40) ಮನನೊಂದು ಮನೆಯ ಹಿಂಭಾಗದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿಯ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಹೊರತೆಗೆದಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

ಕೊಪ್ಪ, ಮೂಡಿಗೆರೆ, ಕಳಸ, NR ಪುರ ಭಾಗದಲ್ಲಿ ಭಾರಿ ಬಿರುಗಾಳಿ ಮಳೆಯಾಗುತ್ತಿದ್ದು, ಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭದ್ರಾ ನದಿಯಲ್ಲಿ ಜಿಂಕೆಗಳು ಕೂಡ ಕೊಚ್ಚಿ ಹೋಗುತ್ತಿವೆ. 

Tags:    

Similar News