Save Karnataka Tigers |ಎಂ.ಎಂ.ಹಿಲ್ಸ್ನಲ್ಲಿ ಹುಲಿಗಳ ಸಾವು; ವಿಷಪ್ರಾಶನದ ಹಿಂದಿದೆಯೇ ಸಗಣಿ ಮಾಫಿಯಾ ?
ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಈಗ ಹೊಸದಾಗಿ ಸಗಣಿ ಮಾಫಿಯಾ ತಲೆ ಎತ್ತಿರುವುದು ಪ್ರಾಣಿ- ಮಾನವ ಸಂಘರ್ಷಕ್ಕೆ ಪ್ರಮುಖ ಕಾರಣ ಎಂಬ ಅನುಮಾನಗಳು ದಟ್ಟವಾಗಿವೆ.;
ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ವಿಷಪ್ರಾಶನದಿಂದ ಮೃತಪಟ್ಟ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳ ಘೋರ ಸಾವಿನ ಹಿಂದೆ ಸಗಣಿ ಮಾಫಿಯಾದ ಕೈವಾಡವಿರುವ ಮಾತುಗಳು ಕೇಳಿಬರುತ್ತಿವೆ.
ಈ ಹಿಂದೆ ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಹುಲಿಯ ಚರ್ಮ, ಉಗುರು ಹಾಗೂ ಹಲ್ಲಿನ ಮಾರಾಟದ ಮಾಫಿಯಾ ತಲೆ ಎತ್ತಿತ್ತು. ಈಗ ಅರಣ್ಯ ಇಲಾಖೆ ಕೈಗೊಂಡ ಬಿಗಿ ಕ್ರಮಗಳಿಂದಾಗಿ ಹುಲಿ ಬೇಟೆ ತಹಬದಿಗೆ ಬಂದಿದೆ. ಆದರೆ, ಸಗಣಿ ಮಾಫಿಯಾ ಸದ್ದಿಲ್ಲದೇ ನಡೆಯುತ್ತಿರುವುದು ಪ್ರಾಣಿ- ಮಾನವ ಸಂಘರ್ಷಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಏನಿದು ಸಗಣಿ ಮಾಫಿಯಾ?
ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯ ತಮಿಳುನಾಡು ಹಾಗೂ ಕರ್ನಾಟಕ ಗಡಿ ಗ್ರಾಮಗಳಲ್ಲಿ ಬರಗೂರು ತಳಿಯ ಹಸುಗಳನ್ನು ಹೆಚ್ಚಾಗಿ ಸಾಕಲಾಗುತ್ತಿದೆ. ಬರಗೂರು ತಳಿಯ ಸಗಣಿಗೆ ಹೆಚ್ಚು ಬೇಡಿಕೆ ಇರುವುದರಿಂದ ಸಗಣಿಯೂ ಮಾಫಿಯಾ ಸ್ವರೂಪ ಪಡೆದುಕೊಂಡಿದೆ. ಇದೇ ಮಾಫಿಯಾದಿಂದಾಗಿ ಹುಲಿಗಳಿಗೆ ವಿಷಪ್ರಾಶನ ಮಾಡಿರುವ ಆರೋಪವೂ ಕೇಳಿ ಬರುತ್ತಿದೆ.
ಪಾಲಾರ್ ನದಿ ಸುತ್ತಲಿನ ಕರ್ನಾಟಕ ಹಾಗೂ ತಮಿಳುನಾಡು ಗಡಿ ಗ್ರಾಮಗಳಾದ ಗೋಪಿನಾಥಂ, ತಾಮ್ರಕೆರೆ, ಭವಾನಿ, ಹೊಸಮಲೈ ಸೇರಿದಂತೆ ಹಲವು ಗ್ರಾಮಗಳಲ್ಲಿ ಬರಗೂರು ತಳಿಯ ಹಸುಗಳಿವೆ. ನಿರ್ದಿಷ್ಟವಾಗಿ ಲಂಗೋಯಿ ಸಮುದಾಯದವರೇ ಹೆಚ್ಚಾಗಿ ಬರಗೂರು ತಳಿಯ ಹಸುಗಳನ್ನು ಸಾಕುತ್ತಿದ್ದಾರೆ.
ಕೇರಳದಲ್ಲಿ ಸಗಣಿಗೆ ಹೆಚ್ಚು ಬೇಡಿಕೆ
ಬರಗೂರು ತಳಿಯ ಹಸುಗಳ ಸಗಣಿಗೆ ಕೇರಳದಲ್ಲಿ ಹೆಚ್ಚು ಬೇಡಿಕೆ ಇದೆ. ಇಲ್ಲಿನ ರಬ್ಬರ್ ಹಾಗೂ ಕಾಫಿತೋಟಗಳಿಗೆ ಹೆಚ್ಚು ಸಗಣಿ ಪೂರೈಕೆಯಾಗಲಿದೆ. ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯ ಗ್ರಾಮಗಳಿಗೆ ಬರುವ ಕೇರಳದ ಭೂ ಮಾಲೀಕರು ಟನ್ಗೆ 2 ಸಾವಿರ ರೂ.ವರೆಗೆ ಹಣ ನೀಡಿ ಖರೀದಿ ಮಾಡುತ್ತಾರೆ. ಸಗಣಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಹಸುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಸುಗಳ ಮೇಲೆ ಹುಲಿ ದಾಳಿಯ ಪ್ರಕರಣಗಳೂ ಏರುತ್ತಿವೆ.
ಸಗಣಿಯಲ್ಲಿದೆ ಹೆಚ್ಚು ಸತ್ವ
ಬರಗೂರು ತಳಿಯ ಹಸುಗಳ ಸಗಣಿಯು ಹೆಚ್ಚು ಸತ್ವ ಹೊಂದಿದೆ. ಜಾನುವಾರುಗಳು ನೈಸರ್ಗಿಕವಾಗಿ ಬೆಳೆದಿರುವ ಹಸಿರು ಹುಲ್ಲು ಮೇಯುವುದರಿಂದ ಸಗಣಿಯಲ್ಲಿ ಪೋಷಕಾಂಶಗಳು ಇರುತ್ತವೆ. ಸ್ವಾಭಾವಿಕವಾಗಿಯೇ ಬರಗೂರು ಹಸುಗಳ ಸಗಣಿಯಲ್ಲಿ ನೈಟ್ರೋಜನ್, ಫಾಸ್ಫರಸ್ ಮತ್ತು ಪೊಟ್ಯಾ ಶಿಯಂ ಪ್ರಮಾಣ ಇರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಲಿದೆ. ಇಳುವರಿ ಕೂಡ ಹೆಚ್ಚಲಿದೆ. ಹಾಗಾಗಿ ಕೇರಳದ ಕಾಫಿ ಹಾಗೂ ರಬ್ಬರ್ ತೋಟದ ಮಾಲೀಕರು ಈ ಸಗಣಿಗಾಗಿ ದುಂಬಾಲು ಬೀಳುವುದು ಸಾಮಾನ್ಯವಾಗಿದೆ. ಶೇ.90 ರಷ್ಟು ಗೊಬ್ಬರ ಕೇರಳದ ಭೂ ಮಾಲೀಕರು ಖರೀದಿಸಿದರೆ, ಶೇ 10 ರಷ್ಟು ಗೊಬ್ಬರವನ್ನು ತಮಿಳುನಾಡು ಹಾಗೂ ಕರ್ನಾಟಕ ಭಾಗದ ರೈತರು ಖರೀದಿಸುತ್ತಾರೆ.
ಇದು ಸಗಣಿ ಹಿಂದೆ ನಡೆಯುತ್ತಿರುವ ವ್ಯವಹಾರ ಆಧರಿತ ಮಾಫಿಯಾವಾದರೆ, ಅರಣ್ಯ ಇಲಾಖೆ ನಿರ್ಲಕ್ಷ್ಯವೂ ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ಆಸ್ಪದ ಕೊಡುತ್ತಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಅರಣ್ಯದಲ್ಲಿ ಯಾವುದೇ ಮಾಫಿಯಾಗಳು ಇಲ್ಲ, ಆದರೆ, ಇಲಾಖೆಯಲ್ಲಿರುವ ಸಮಸ್ಯೆಗಳಿಂದಲೇ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂಬುದು ಅಧಿಕಾರಿಗಳ ಮಾತು.
ಬರಗೂರು ತಳಿಯ ವಿಶೇಷತೆ ಏನು?
ಇವು ಕಂದು-ಬಿಳಿ ಮಿಶ್ರಿತ ಬಣ್ಣ ಹೊಂದಿದ್ದು, ಚೂಪಾದ ಕೊಂಬು ಹೊಂದಿರುತ್ತವೆ. ಭುಜ ಎತ್ತರವಾಗಿರುತ್ತದೆ. ಈ ತಳಿಯ ಹಸುಗಳು ಹವಾಗುಣಕ್ಕೆ ಹೊಂದಿಕೊಳ್ಳುವ ಸಹಿಷ್ಣುತೆ ಹೊಂದಿವೆ. ಬರಗೂರು ತಳಿಯಲ್ಲಿ ಹಸು ಹಾಗೂ ಎತ್ತುಗಳು ಎರಡೂ ಇರುತ್ತವೆ. ಎತ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಕೃಷಿ ಬಳಸಲಾಗುತ್ತದೆ. ಉಳಿದಂತೆ ಸಾಕಾಣಿಕೆಯೇ ಹೆಚ್ಚು.
ಬರಗೂರು ತಳಿಯ ಹಸುಗಳು ಕಡಿಮೆ ಪ್ರಮಾಣದ ಹಾಲು ನೀಡಲಿದ್ದು, ಸ್ವಂತಕ್ಕಷ್ಟೇ ಬಳಸಿಕೊಳ್ಳಲಾಗುತ್ತದೆ. ಈ ಗ್ರಾಮಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜಾನುವಾರು ಹೊಂದಿರುವ ಮಾಲೀಕರು, ಪಾಲಿಗೆ ಬಿಡುತ್ತಾರೆ. ಇವುಗಳ ನಿರ್ವಹಣೆ ಸುಲಭವಾಗಿರುವುದರಿಂದ ಒಬ್ಬೊಬ್ಬರು 100 ರಿಂದ 500 ಹಸು, ಎತ್ತುಗಳನ್ನು ಮೇಯಿಸಲು ಕಾಡಿಗೆ ಕರೆದೊಯ್ಯುತ್ತಾರೆ.
ಪಾಲಿಗೆ ಬಿಡುವ ಪದ್ಧತಿ ಹೇಗಿದೆ?
ತಮಿಳುನಾಡು ಹಾಗೂ ಕರ್ನಾಟಕದ ಗಡಿ ಗ್ರಾಮಗಳಲ್ಲಿ ಬರಗೂರು ತಳಿಯ ಹಸುಗಳನ್ನು ಪಾಲಿಗೆ ಬಿಡುವ ಪದ್ಧತಿಯಿದೆ. ಉದಾಹರಣೆಗೆ 100 ಹಸುಗಳನ್ನು ಪಾಲಿಗೆ ಕೊಟ್ಟರೆ, ಸಾಕಾಣಿಕೆದಾರರು ಕೃಷಿಗೂ ಬಳಸಿಕೊಳ್ಳಬಹುದು. ಹಾಲನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ ಪಾಲಿಗೆ ಪಡೆದ 100 ಹಸುಗಳು 50 ಕರುಗಳನ್ನು ಹಾಕಿದರೆ ಅದರಲ್ಲಿ ಮಾಲೀಕರಿಗೆ 25, ಸಾಕಾಣೆದಾರರಿಗೆ 25 ನೀಡಲಾಗುತ್ತದೆ. ಈ ಹಂಚಿಕೆಯ ಪ್ರಮಾಣ ಬೇರೆ ಬೇರೆ ಗ್ರಾಮಗಳಲ್ಲಿ ಭಿನ್ನವಾಗಿರುತ್ತವೆ. ಇನ್ನು ಹಸುಗಳು ಹಾಕುವ ಸಗಣಿ ಮಾತ್ರ ಮಾಲೀಕರಿಗೆ ಮೀಸಲು. ಸಗಣಿಯನ್ನು ಸಂಗ್ರಹಿಸಿ ಅರಣ್ಯದ ಅಂಚಿನಲ್ಲಿ ರಾಶಿ ಮಾಡಲಾಗುತ್ತದೆ. ಈಗಲೂ ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಸಗಣಿ ಗುಡ್ಡೆಗಳ ರಾಶಿ ಕಣ್ಣಿಗೆ ರಾಚುತ್ತದೆ.
ಸಿಬ್ಬಂದಿ ಕೊರತೆಯಿಂದ ಅನಾಹುತ
ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ನಿವೃತ್ತ ಐಎಫ್ಎಸ್ ಅಧಿಕಾರಿ ಬಾಲಚಂದ್ರ ಅವರು, ಅರಣ್ಯ ಇಲಾಖೆಯ ನಿರಂತರ ಶ್ರಮ,ಕೆಲ ಅಧಿಕಾರಿಗಳ ಕಠಿಣ ನಿರ್ಧಾರಗಳಿಂದಾಗಿ ಈಗ ಅರಣ್ಯದಲ್ಲಿ ಯಾವುದೇ ರೀತಿಯ ಮಾಫಿಯಾಗಳು ಇಲ್ಲ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. 100 ಮಂದಿ ಇರಬೇಕಾದ ಕಡೆಗಳಲ್ಲಿ 50 ಮಂದಿ ಮಾತ್ರ ಇದ್ದಾರೆ. ಹೆಚ್ಚಿನವರಿಗೆ ಈಗ ಕಾಡಿನಲ್ಲಿ ಹೋಗಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ನಗರದ ಕಚೇರಿಗಳೇ ಇಷ್ಟವಾಗಿಬಿಟ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ಸಾಹಿಗಳನ್ನು ಕಾಡಿನಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು.ಕಾಡಂಚಿನ ಗ್ರಾಮಸ್ಥರೊಂದಿಗೆ ಇಲಾಖೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಜಾನುವಾರುಗಳ ಹುಲಿ ದಾಳಿಗೆ ಬಲಿಯಾದ ತಕ್ಷಣವೇ ಅವರ ಕಷ್ಟಕ್ಕೆ ಸ್ಪಂದಿಸಿ,ಸೂಕ್ತ ಪರಿಹಾರವನ್ನು ತಕ್ಷಣವೇ ಒದಗಿಸುವ ಕೆಲಸವಾಗಬೇಕು.ಆಗ ಈ ರೀತಿಯ ಕೃತ್ಯಗಳಿಗೆ ಕಡಿವಾಣ ಬೀಳುತ್ತದೆ ಎನ್ನುತ್ತಾರೆ ಬಾಲಚಂದ್ರ.
ಕಾಡು ತೊರೆದು ನಾಡು ಸೇರಿದ್ದಾರೆ ಸಿಬ್ಬಂದಿ..!
ನಿವೃತ್ತ ಅಧಿಕಾರಿ ಬಾಲಚಂದ್ರನ್ ಅವರು ಹೇಳುವಂತೆ ಇಂದು ಅರಣ್ಯ ಇಲಾಖೆಯ ಸಿಬ್ಬಂದಿ ಅಡವಿಯಲ್ಲಿ ಕೆಲಸ ಮಾಡುವುದಕ್ಕೆ ಬದಲಾಗಿ ನಗರದಲ್ಲಿಯೇ ಅಡಗಿಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಬಿ.ಕೆ.ಸಿಂಗ್,ಯಲ್ಲಪ್ಪರೆಡ್ಡಿ,ಲಕ್ಷ್ಮಣ್ ಸೇರಿ ಹಲವು ಅಧಿಕಾರಿಗಳು ತಮ್ಮದೇ ಆದ ಕೊಡುಗೆ ಕೊಟ್ಟು ಹೋಗಿದ್ದಾರೆ.ಆದರೆ, ಈಗಿನ ಸ್ಥಿತಿಯೇ ಬೇರೆಯಾಗಿದೆ.ಸರ್ಕಾರದಿಂದ ಖಾಲಿ ಹುದ್ದೆಗಳಿಗೆ ಸಮರ್ಪಕವಾದ ನೇಮಕಾತಿ ಆಗುತ್ತಿಲ್ಲ. ಗಾರ್ಡ್ ಸೇರಿ ಕೆಳ ಹಂತದ ಸಿಬ್ಬಂದಿ ಅರಣ್ಯ ಕಾಯುವುದಕ್ಕಿಂತ ಹೆಚ್ಚಾಗಿ ಹಿರಿಯ ಅಧಿಕಾರಿಗಳ ಮನೆ ಬಾಗಿಲು ಕಾಯುತ್ತಿದ್ದಾರೆ.ಸ್ಟ್ರೈಕ್ ಫೋರ್ಸ್,ಅರಣ್ಯ ಇಲಾಖೆಯ ವಿಶೇಷ ಸೇವೆ,ಪ್ರಚಾರ ಮತ್ತು ಮಾಹಿತಿ ತಂತ್ರಜ್ಞಾನ ಎನ್ನುವ ವಿಭಾಗ ಮಾಡಿಕೊಂಡು ನಗರ ಪ್ರದೇಶಗಳಲ್ಲಿ ಕಾಯಂ ಆಗಿದ್ದಾರೆ.
ಕೆಲವು ಅಧಿಕಾರಿಗಳು,ಶಾಸಕರು,ಸಚಿವರು,ಜನಪ್ರತಿನಿಧಿಗಳು ಮತ್ತವರ ಬೆಂಬಲಿಗರಿಗೆ ಅರಣ್ಯ ದರ್ಶನ ಮಾಡಿಸಿಕೊಂಡು,ಅವರ ಬೇಕು ಬೇಡಗಳನ್ನು ಪೂರೈಸಿಕೊಂಡು ತಮ್ಮ ಅಗತ್ಯಗಳನ್ನು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಾರೆ ಎನ್ನುವ ಗಂಭೀರ ಆರೋಪಗಳೂ ಕೇಳಿ ಬರುತ್ತಿವೆ.ಒಂದು ಕಡೆ ಸಿಬ್ಬಂದಿ ಕೊರತೆ ಎಂದರೆ ಮತ್ತೊಂದು ಕಡೆ ಇರುವ ಸಿಬ್ಬಂದಿಯನ್ನೇ ಸರಿಯಾಗಿ ಬಳಕೆ ಮಾಡಿಕೊಳ್ಳಲಾಗದಷ್ಟೂ ಇಲಾಖೆ ಬಿಗಿ ಕಳೆದುಕೊಂಡಿದೆಯೇ ಎನ್ನುವ ಪ್ರಶ್ನೆಯೂ ಇದೆ.
ಈಗಾಗಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಐದು ಹುಲಿಗಳ ಹತ್ಯೆ ಸಂಬಂಧ ಸಮಗ್ರ ತನಿಖೆಗೆ ಆದೇಶಿಸಿ ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ.ಇದು ಹುಲಿಗಳ ಸಾವು ಹೇಗಾಯಿತು ಎನ್ನುವುದರ ಜೊತೆಗೆ ಯಾಕಾಯಿತು ಎನ್ನುವ ಅಂಶಗಳ ಬಗ್ಗೆಯೂ ಆಳವಾಗಿ ತನಿಖೆ ನಡೆಸಬೇಕು, ಇಲಾಖೆಯಿಂದ ಆಗಿರುವ ಲೋಪಗಳ ಕಡೆಗೂ ತನಿಖೆ ಮಾಡಬೇಕು. ಆಗ ಮಾತ್ರವೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.
ಹುಲಿ ಯೋಜನೆಗೆ ಬಲ ತುಂಬಿ, ಇಲ್ಲವೇ ಮುಚ್ಚಿಬಿಡಿ
ದೇಶಾದ್ಯಂತ ಹುಲಿಗಳ ಸಂರಕ್ಷಣೆಗೆಂದೇ ಹುಲಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿಯೂ ಈ ಯೋಜನೆ ಇದ್ದು, ಐಎಫ್ಎಸ್ ಅಧಿಕಾರಿಯೊಬ್ಬರನ್ನು ಈ ಯೋಜನೆಗೆ ನಿರ್ದೇಶಕರನ್ನಾಗಿ ಮಾಡಲಾಗಿದೆ. ಇದಕ್ಕಾಗಿಯೇ ಮೈಸೂರಿನಲ್ಲಿ ಕಚೇರಿಯೊಂದನ್ನು ತೆರೆಯಲಾಗಿದೆ. ಅಗತ್ಯ ವಾಹನ ಸಿಬ್ಬಂದಿಯನ್ನು ನೀಡಿ ವಾರ್ಷಿಕ ಕೋಟ್ಯಾಂತರ ರೂಪಾಯಿಯನ್ನು ಇದಕ್ಕಾಗಿ ಸರ್ಕಾರ ಖರ್ಚು ಮಾಡುತ್ತಿದೆ. ಆದರೆ ಈ ಕಚೇರಿಯಿಂದ ಆಗುತ್ತಿರುವ ಕೆಲಸ ಏನು ಎಂದು ಕೇಳಿದರೆ ನಿರಾಶೆಯಾಗುತ್ತದೆ. ಹಿಂದೆ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ ಸೇರಿ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರು ಹುಲಿ ಯೋಜನೆ ನಿರ್ದೇಶಕರಿಗೆ ವರದಿ ನೀಡಬೇಕಿತ್ತು. ಇವರ ಹಿಡಿತದಲ್ಲಿಯೇ ಎಲ್ಲಾ ಕೆಲಸಗಳು, ಆದೇಶಗಳು ಆಗುತ್ತಿದ್ದವು. ಆದರೆ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಎಲ್ಲಾ ಅಧಿಕಾರವನ್ನು ನೀಡಿದ ಬಳಿಕ ಹುಲಿ ಯೋಜನೆ ಮತ್ತು ಅದರ ನಿರ್ದೇಶಕರಿಗೆ ಯಾವುದೇ ಕಿಮ್ಮತ್ತು ಇಲ್ಲದಂತಾಗಿದೆ. ದೇಶವನ್ನೇ ಆತಂಕಕ್ಕೆ ದೂಡುವಂತೆ ಮಾಡಿರುವ ಐದು ಹುಲಿಗಳ ಹತ್ಯೆಯಂತಹ ಘೋರ ದುರಂತ ಸಂಭವಿಸಿದರೂ ರಾಜ್ಯದ ಹುಲಿ ಯೋಜನೆ ನಿರ್ದೇಶಕರು ಮತ್ತವರ ಕಚೇರಿ ಜೋರು ಮಳೆಯಲ್ಲಿ ನೆಂದು ತೆಪ್ಪಗೆ ನಿಂತ ಅರಣ್ಯದಂತೆಯೇ ಇದೆ. ಈಗಲಾದರೂ ಹುಲಿ ಯೋಜನೆ ನಿರ್ದೇಶಕರಿಗೆ ಬಲ ತುಂಬುವುದು ಒಳಿತು, ಇಲ್ಲದೇ ಇದ್ದರೆ ಕಚೇರಿಯನ್ನೇ ಮುಚ್ಚಿ ಅಲ್ಲಿನ ಸಿಬ್ಬಂದಿಯನ್ನು ಬೇರೆ ಕಡೆಗೆ ನಿಯೋಜನೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸುವುದು ಒಳಿತು.