ವರ್ಷವಾದರೂ ಮುಗಿಯದ ಎಂಎಲ್ಸಿ ಆಯ್ಕೆ ಗೊಂದಲ: ಕಾಂಗ್ರೆಸ್ನಲ್ಲಿ ಮನೆಯೊಂದು- ನಾಲ್ಕು ಬಾಗಿಲು!
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ನಾಮ ನಿರ್ದೇಶನಕ್ಕೆ ತಿಂಗಳುಗಳು ಕಳೆದರೂ ಇನ್ನೂ ಕಾಲ ಕೂಡಿಬಂದಿಲ್ಲ. ಯಾಕೆಂದರೆ, ನಾಲ್ಕು ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೇ ಖಚಿತವಾಗಿದ್ದರೂ, ಸುಮಾರು ಐವತ್ತು ಮಂದಿ ನಾಲ್ಕು ಸ್ಥಾನಗಳ ಆಕಾಂಕ್ಷಿಗಳಾಗಿದ್ದಾರೆ.;
ಒಂದು ಮನೆ ನಾಲ್ಕು ಬಾಗಿಲಿನಂತಾಗಿದೆ, ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ನ ಪರಿಸ್ಥಿತಿ! ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ನಾಮ ನಿರ್ದೇಶನಕ್ಕೆ ತಿಂಗಳುಗಳು ಕಳೆದರೂ ಇನ್ನೂ ಕಾಲ ಕೂಡಿಬಂದಿಲ್ಲ. ಯಾಕೆಂದರೆ, ನಾಲ್ಕು ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೇ ಖಚಿತವಾಗಿದ್ದರೂ, ಸುಮಾರು ಐವತ್ತು ಮಂದಿ ನಾಲ್ಕು ಸ್ಥಾನಗಳ ಆಕಾಂಕ್ಷಿಗಳಾಗಿದ್ದಾರೆ.
ಈ ಬಗ್ಗೆ ನಿರ್ಧರಿಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ಗೂ ಒಂದು ರೀತಿಯ ಸಂಕಟ ಆರಂಭವಾಗಿದೆ. ಕಾರಣ- ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ʼಉತ್ತರ ಕರ್ನಾಟಕ ಕೋಟಾʼ ಹಾಗೂ ಪಕ್ಷದ ಹೈಕಮಾಂಡ್ ಸೇರಿ ನಾಲ್ಕು ಕೋಟಾಗಳ ಮೂಲಕ ಎಂಎಲ್ಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಮುಂದಾಗಿರುವುದು ಕಾಂಗ್ರೆಸ್ ಮಟ್ಟಿಗೆ ತ್ರಾಸದಾಯಕವಾಗಿ ಪರಿಣಮಿಸಿದೆ.
ಈ ನಡುವೆ ದೆಹಲಿ ಮಟ್ಟದಲ್ಲೇ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಈ ವಾರದಲ್ಲೇ ಹೈಕಮಾಂಡ್ ಜತೆ ಚರ್ಚೆಗೋಸ್ಕರ ಪ್ರಯಾಣ ಬೆಳಸಲಿದ್ದಾರೆ. ಹೈಕಮಾಂಡ್ ಈ ಸಂಬಂಧ ಒಂದು ಸ್ಪಷ್ಟ ಅಭಿಪ್ರಾಯವನ್ನು ನೀಡಲಿದ್ದು, ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ ಸೃಷ್ಟಿಸಿದೆ. ಒಂದು ವೇಳೆ ಹೈಕಮಾಂಡ್ ಒಂದು ಖಚಿತ ನಿರ್ಧಾರಕ್ಕೆ ಬಂದಲ್ಲಿ, ನೇರವಾಗಿ ಸೂಚನೆ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಎಐಸಿಸಿಯ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಹಾಗು ಪ್ರಧಾನ ಕಾರ್ಯದರ್ಶಿ ಕೆ.ಎಸ್. ವೇಣುಗೋಪಾಲ್ ಜೊತೆ ಪ್ರತ್ಯೇಕವಾಗಿ ಸಿಎಂ ಸಿದ್ದರಾಮಯ್ಯ ಹಾಗು ಡಿಕೆಶಿ ಅವರು ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಆಭ್ಯರ್ಥಿಗಳ ಆಯ್ಕೆ ವಿಳಂಬ ಮಾಡುವುದು ಸೂಕ್ತ ಅಲ್ಲ ಎಂದು ಹೈಕಮಾಂಡ್ ಗಮನಕ್ಕೆ ಸಿದ್ದರಾಮಯ್ಯ ತಂದಿದ್ದರು.
ಯಾವ ಸ್ಥಾನಗಳು?
ವರ್ಷದ ಹಿಂದೆ ತೆರವಾದ ಸಿ.ಪಿ. ಯೋಗೇಶ್ವರ್ (ಬಿಜೆಪಿಯಿಂದ ಕಾಂಗ್ರೆಸ್ ಸೇರಿ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ತೆರವಾದ ನಾಮ ನಿರ್ದೇಶಿತ ಸ್ಥಾನ (ಎರಡು ವರ್ಷಗಳ ಕಾಲಾವಧಿ), ಯು.ಬಿ. ವೆಂಕಟೇಶ್, ತಿಪ್ಪೇಸ್ವಾಮಿ ಹಾಗೂ ಪ್ರಕಾಶ್ ರಾಥೋಡ್ (ಆರೂವರೆ ವರ್ಷದ ಅವಧಿ ಮುಗಿದ ಬಳಿಕ) ಆ ಸ್ಥಾನಗಳ ಚುನಾವಣೆ ಇನ್ನೂ ಆಗಬೇಕಾಗಿದೆ. ಆದರೆ, ಕಾಂಗ್ರೆಸ್ ವಿಳಂಬದಿಂದಾಗಿ ನಾಲ್ಕೂ ಸ್ಥಾನಗಳು ಇನ್ನೂ ತೆರವಾಗಿವೆ.
ನಾಲ್ಕು ಸ್ಥಾನಗಳಲ್ಲಿ ಎರಡು ಅಕ್ಟೋಬರ್ 2023 ರಿಂದ, ಇನ್ನೊಂದು ನವೆಂಬರ್ 2023 ರಿಂದ ಮತ್ತು ಒಂದು ಸ್ಥಾನ ಜನವರಿ 2024 ರಿಂದ ಖಾಲಿಯಾಗಿ ಉಳಿದಿವೆ. ಆದರೆ, ಒಂದು ವರ್ಷಕ್ಕಿಂತ ಹೆಚ್ಚು ಸಮಯ ಕಳೆದರೂ ಕಾಂಗ್ರೆಸ್ ಮಟ್ಟಿಗೆ ಈ ತೆರವಾದ ಸ್ಥಾನಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ವಿಧಾನಸಭೆಯ ಸಂಖ್ಯಾಬಲದಿಂದ ನಾಲ್ಕೂ ಸ್ಥಾನಗಳನ್ನು ಸುಲಭವಾಗಿ ತೆಕ್ಕೆಗೆ ಹಾಕಿಕೊಳ್ಳುವುದು ತುಂಬಾ ಸುಲಭ.
ಮುಂದುವರಿದ ಕಾಂಗ್ರೆಸ್ ಸಂಕಟ
ಆದರೂ, ಕಾಂಗ್ರೆಸ್ ಈ ಸ್ಥಾನಗಳನ್ನು ಭರ್ತಿ ಮಾಡಲು ಹರಸಾಹಸ ಪಡುವಂತಾಗಿದೆ. ಇದಕ್ಕೆ ಕಾರಣ, ಆ ಪಕ್ಷದೊಳಗಿನ ಆಂತರಿಕ ತುಮುಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ತಮ್ಮ ಬೆಂಬಲಿಗರಿಗೆ ಮೀಸಲಿರಿಸಬೇಕೆಂದು ಪಟ್ಟುಹಿಡಿದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೂರು ಸ್ಥಾನಗಳನ್ನು ಪಕ್ಷದ ಕಾರ್ಯಕರ್ತರಿಗೆ ಬಿಟ್ಟುಕೊಡಬೇಕು ಎಂದು ಪಟ್ಟುಹಿಡಿದ್ದಾರೆ. ಆ ಮೂಲಕ ತನ್ನ ಬೆಂಬಲಿಗರಿಗೆ ಮಣೆ ಹಾಕಲು ಪ್ರುಯತ್ನ ನಡೆಸಿದ್ದಾರೆ.
ಈ ನಡುವೆ, ಕರ್ನಾಟಕದವರೇ ಅದ ಅಖಿಲ ಭಾರತ ಕಾಂಗ್ರೆಸ್ನ ಅಧ್ಯಕ್ಷರಾಗಿರುವ ಎಂ. ಮಲ್ಲಿಕಾರ್ಜುನ ಖರ್ಗೆ ಅವರೂ ಕನಿಷ್ಠ ತಮ್ಮ ಕಡೆಯಿಂದ ಒಬ್ಬನಿಗಾದರೂ ಅವಕಾಶ ನೀಡಬೇಕೆಂದು ಸೂಚಿಸಿದ್ದಾರೆ ಎನ್ನಲಾಗಿದೆ. ಹೈದರಾಬಾದ್ ಬಾದ್ ಹಾಗು ಉತ್ತರ ಕರ್ನಾಟಕದ ತಮ್ಮ ಬೆಂಬಲಿಗರಿಗೆ ಅವಕಾಶ ಕೊಡಿಸಲು ಖರ್ಗೆ ಯೋಚಿಸಿದ್ದಾರೆ ಎಂದೂ ಹೇಳಲಾಗಿದೆ. ಈ ಎಲ್ಲಾ ಒತ್ತಡಗಳ ಹಿನ್ನಲೆಯಲ್ಲಿ ಪರಿಷತ್ ಸದಸ್ಯರ ಆಯ್ಕೆ ಒಂದು ರೀತಿಯಲ್ಲಿ ಗಜಪ್ರಸವದಂತಾಗಿರುವುದು ಕಾಂಗ್ರೆಸ್ ಬೇಗುದಿಗೆ ಕಾರಣವಾಗಿದೆ.
ಆ ಕಾರಣಕ್ಕೆ ಸಿದ್ದರಾಮಯ್ಯ ತಮ್ಮ ಕಡೆಯಿಂದ ಮೂವರಿಗೆ, ಖರ್ಗೆ ಕಡೆಯಿಂದ ಒಬ್ಬರಿಗೆ ಅವಕಾಶ ನೀಡಬಹುದು ಎಂದು ಆಂತರಿಕವಾಗಿ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ. ಅದೇ ತಂತ್ರವನ್ನು ಅನುಸರಿಸಿರುವ ಡಿ.ಕೆ. ಶಿವಕುಮಾರ್, ಪಕ್ಷದ ರಾಜ್ಯಾಧ್ಯಕ್ಷನಾಗಿ ಮೂರು ಸ್ಥಾನಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವಂತೆ ಪಟ್ಟುಹಿಡಿದಿದ್ದು, ಒಂದನ್ನು ಖರ್ಗೆಯವರ ಸೂಚನೆ ಮೇರೆಗೆ ಆಯ್ಕೆ ಮಾಡಬಹುದು ಎಂದು ವಾದ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಆದರೆ, ಇನ್ನೊಂದು ಕಡೆಯಿಂದ ಹೊಸ ಒತ್ತಡ ಆರಂಭವಾಗಿದೆ. ಒಬ್ಬ ಸದಸ್ಯನನ್ನು ಪಕ್ಷದ ಹೈಕಮಾಂಡ್ ಆಯ್ಕೆಗೆ ಬಿಡಬೇಕೆಂಬ ಮಾತು ಕೇಳಿಬಂದಿದೆ. ಆ ಸದಸ್ಯನನ್ನು ರಾಷ್ಟ್ರೀಯ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮೂಲಕ ಹೈಕಮಾಂಡ್ ಕೋಟಾವನ್ನು ಪೂರೈಸಬೇಕೆಂಬುದು ಆ ವಾದವಾಗಿದೆ.
ಆದರೆ, ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ನಾಲ್ಕು ಎಂಎಲ್ಸಿ ಸ್ಥಾನಗಳಿಗೆ ಆಕಾಂಕ್ಷಿಗಳಾಗಿದ್ದು, ಅವರೆಲ್ಲರೂ ಸಿದ್ದರಾಮಯ್ಯ ಅಥವಾ ಡಿಕೆಶಿ ಬಣಗಳಿಗೆ ಸೇರಿದವರೆಂದು ಹೇಳಲಾಗಿದ್ದು, ಯಾರಿಗೆ ಅದೃಷ್ಟ ಖುಲಾಯಿಸುತ್ತದೆ ಎಂಬುದು ಹೈಕಮಾಂಡ್ ನಿರ್ಧಾರದ ಬಳಿಕ ಗೊತ್ತಾಗಲಿದೆ.
ಅದರಂತೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಹೈಕಮಾಂಡ್.. ಹೀಗೆ ತಲಾ ಒಬ್ಬ ಅಭ್ಯರ್ಥಿಯನ್ನು ಆಯಾ ಕೋಟಾಗಳ ಮೂಲಕ ಆಯ್ಕೆ ಮಾಡಬೇಕೆಂಬ ಜಿಜ್ಞಾಸೆ ಈಗ ಶುರುವಾಗಿದೆ. ಆದರೆ, ಈ ಬಗ್ಗೆ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಇದಕ್ಕೆ ಡಿಕೆಶಿ ಒಪ್ಪುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿರುವುದರಿಂದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು,ಈ ಹಿನ್ನಲೆಯಲ್ಲಿ 3 ಸ್ಥಾನ ತಮ್ಮವಿವೇಚನೆಗೆ ಬಿಡಿ ಎಂದು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಈ ನಡುವೆ ದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, " ಹೈಕಮಾಂಡ್, ನನಗೆ ಭೇಟಿ ಮಾಡಲು ತಿಳಿಸಿದರೆ ನಾನು ಹೋಗುತ್ತೇನೆ. ಆದರೆ ನಾನು ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡಬೇಕಿದ್ದು, ಅವರ ಸಮಯ ನಿಗದಿ ಮಾಡಿದ ನಂತರ ನಾನು ದೆಹಲಿಗೆ ಪ್ರವಾಸ ಮಾಡುತ್ತೇನೆ" ಎಂದು ತಿಳಿಸಿದ್ದಾರೆ. ಆ ಮೂಲಕ ಎಂಎಲ್ಸಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಖಚಿತ ಮಾಹಿತಿಯನ್ನು ನೀಡಿದೆ ನುಣುಚಿಕೊಂಡಿದ್ದಾರೆ.