ಆರ್‌ಸಿಬಿ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಮನೋಜ್​ನ ಅಜ್ಜಿಯೂ ಹೃದಯಾಘಾತದಿಂದ ಸಾವು

ಮೃತ ದೇವಿರಮ್ಮ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಾಗಸಂದ್ರ ಗ್ರಾಮದ ನಿವಾಸಿಯಾಗಿದ್ದರು. ಮನೋಜ್ ಮೃತಪಟ್ಟ ಸುದ್ದಿ ಅವರ ಕುಟುಂಬವನ್ನು ಶೋಕಸಾಗರಕ್ಕೆ ದೂಡಿತ್ತು.;

Update: 2025-06-09 11:14 GMT

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 33 ವರ್ಷದ ಮನೋಜ್ ಎಂಬ ಯುವಕನ ಸಾವಿನ ದುಃಖ ತಾಳಲಾರದೆ, ಆತನ 70 ವರ್ಷದ ಅಜ್ಜಿ ದೇವಿರಮ್ಮ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ, ಈ ಘಟನೆಯು ಆ ಕುಟುಂಬದ ದುಃಖವನ್ನು ಇನ್ನಷ್ಟು ಹೆಚ್ಚಿಸಿದೆ.

ಮೃತ ದೇವಿರಮ್ಮ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಾಗಸಂದ್ರ ಗ್ರಾಮದ ನಿವಾಸಿಯಾಗಿದ್ದರು. ಮನೋಜ್ ಮೃತಪಟ್ಟ ಸುದ್ದಿ ಅವರ ಕುಟುಂಬವನ್ನು ಶೋಕಸಾಗರಕ್ಕೆ ದೂಡಿತ್ತು. ಮೊಮ್ಮಗನ ಮರಣ ಸುದ್ದಿ ಕೇಳಿದ ದಿನದಿಂದ ದೇವಿರಮ್ಮ ಊಟ- ನೀರು ಬಿಟ್ಟಿದ್ದರು. ನಿರಂತರವಾಗಿ ಶೋಕದಲ್ಲಿಯೇ ಮುಳುಗಿದ್ದರು. ತಾನು ಎತ್ತಿ ಆಡಿಸಿದ ಮೊಮ್ಮಗನ ಜೀವನ ಒಂದು ಹಂತಕ್ಕೆ ತಲುಪುವ ಮುನ್ನವೇ ದುರಂತ ಸಾವಿಗೀಡಾಗಿದ್ದಕ್ಕೆ ಅವರು ನೊಂದುಕೊಂಡಿದ್ದರು. ಅಂತೆಯೇ, ಸೋಮವಾರ ಬೆಳಿಗ್ಗೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಒಂದೇ ಕುಟುಂಬದಲ್ಲಿ ವಾರದೊಳಗೆ ಎರಡು ಮರಣಗಳು ಸಂಭವಿಸಿದ ಹಿನ್ನೆಲೆಯಲ್ಲಿ ನಾಗಸಂದ್ರ ಗ್ರಾಮದ ಜನತೆ ಬೇಸರಗೊಂಡಿದ್ದಾರೆ.  

Tags:    

Similar News