ರಾಜಕೀಯ ಕೀಳು ಭಾಷೆ | ರಾಜಕಾರಣಿಗಳಿಗೆ ಪ್ರಾಧಿಕಾರದಿಂದ ಶಿಬಿರ ಮಾಡಲಿ: ಸುರೇಶ್ ಕುಮಾರ್ ಸಲಹೆ

Update: 2024-08-07 12:25 GMT

ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ- ಜೆಡಿಎಸ್‌ ಪಾದಯಾತ್ರೆ ಆರಂಭವಾದಾಗಿನಿಂದ ರಾಜಕೀಯ ನಾಯಕರ ಕೀಳು ಭಾಷೆಯ ಆರೋಪ ಪ್ರತ್ಯಾರೋಪ ಹೇಳಿಕೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಎಸ್‌ ಸುರೇಶ್‌ ಕುಮಾರ್, ಸಾರ್ವಜನಿಕ ಜೀವನದಲ್ಲಿ ಬಹುವಚನ ಪ್ರಯೋಗ, ಬೈಗುಳವಿಲ್ಲದೆ ರಾಜಕೀಯ ನಾಯಕರು ಸಂವಹನ ನಡೆಸುವುದನ್ನು ಕಲಿಸುವ ಶಿಬಿರ ಯೋಜಿಸುವುದರ ಅಗತ್ಯದ ಕುರಿತು ಸಲಹೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ʻʻರಾಜ್ಯದ ಎಲ್ಲಾ ದೊಡ್ಡ ಸ್ಥಾನದ ರಾಜಕೀಯ ನಾಯಕರಲ್ಲಿ ಒಂದು ಮನವಿ. ಸಾರ್ವಜನಿಕ ಸಂವಾದ ತೀರಾ ಕೆಳಕ್ಕಿಳಿಯುತ್ತಿದೆ. ಏಕವಚನ ಸಂಬೋಧನೆ ರಾರಾಜಿಸುತ್ತಿದೆ. ಜೊತೆಗೆ ವಾಚಾಮಗೋಚರ ಬೈಗುಳ ವಿಜೃಂಭಿಸುತ್ತಿದೆ. ಇದರಿಂದ ಸಮಾಜಕ್ಕೆ, ಅದರಲ್ಲಿಯೂ ವಿಶೇಷವಾಗಿ ಎಳೆಯ ಜನಾಂಗಕ್ಕೆ ಭಾರಿ ತಪ್ಪು ಸಂದೇಶ ಹೋಗುತ್ತಿದೆ. ಈ ಏಕವಚನ ಪ್ರಯೋಗ, ಕೀಳು ಮಟ್ಟದ ಬೈಗುಳಗಳನ್ನು ಎಲ್ಲರೂ ಮೇಲ್ಪಂಕ್ತಿಯನ್ನಾಗಿ ಸ್ವೀಕರಿಸಿದರೆ ಅನಾಹುತವಾಗುತ್ತದೆ. ದಯವಿಟ್ಟು ಸಾರ್ವಜನಿಕ ವೇದಿಕೆಗಳನ್ನು ಏಕವಚನ ಹಾಗೂ ಬೈಗುಳಗಳ ತಾಣ ಮಾಡಿಕೊಳ್ಳಬಾರದು. ಇದು ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೂ ಅನ್ವಯಿಸುತ್ತದೆʼʼ ಎಂದಿದ್ದಾರೆ.

ʻʻನಮ್ಮ ಏನೇ ಸಿಟ್ಟು, ಸಾತ್ವಿಕ ಕೋಪ, ಆಕ್ರೋಶ ಇದ್ದರೂ ಅದನ್ನು ವ್ಯಕ್ತಪಡಿಸುವುದಕ್ಕೆ ಸೂಕ್ತ ರೀತಿಯ ಮಾತು, ಹಾವಭಾವ ಅಗತ್ಯವಿದೆ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೆ ಬಹಳ ಮುಖ್ಯ. ಸಾರ್ವಜನಿಕ ಜೀವನದಲ್ಲಿ ಬಹುವಚನ ಪ್ರಯೋಗ, ಬೈಗುಳವಿಲ್ಲದೆ ರಾಜಕೀಯ ನಾಯಕರು ಸಂವಹನ ನಡೆಸುವಂತೆ ಕಲಿಸುವ ಶಿಬಿರ ಯೋಜಿಸುವುದರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಪಾತ್ರ ವಹಿಸಬಹುದಲ್ಲವೇ?ʼʼ ಎಂದು ಕೇಳಿದ್ದಾರೆ.



Tags:    

Similar News