ಲೋಕಾಯುಕ್ತ ಎಸ್‌ಐಟಿ ಅಧಿಕಾರಿ ಚಂದ್ರಶೇಖರ್‌ ಹಣಕಾಸು ಅಕ್ರಮ: ಎಚ್‌ಡಿ ಕುಮಾರಸ್ವಾಮಿ ಆರೋಪ

Update: 2024-09-28 12:56 GMT

ಎಚ್‌.ಡಿ.ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಐಜಿಪಿ ಚಂದ್ರಶೇಖರ್‌

ಲೋಕಾಯುಕ್ತದ ಐಪಿಎಸ್‌ ಅಧಿಕಾರಿ ಎಂ.ಚಂದ್ರಶೇಖರ್ ಅವರ  ಅಕ್ರಮಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ದಾಖಲೆಗಳ ಸಮೇತ ಮಾತನಾಡಿದ ಅವರು; ಅಧಿಕಾರಿ ಚಂದ್ರಶೇಖರ್,  ಉದ್ಯಮಿಯೊಬ್ಬರ ಜತೆ ಭಾಗಿಯಾಗಿ ಹಣಕಾಸು ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದರು. 

"ಈ ಚಂದ್ರಶೇಖರ ಸಾಧನೆ ಏನು? ಪೊಲೀಸ್ ಇಲಾಖೆಯಲ್ಲಿ ದರೋಡೆಕೋರರು ಇದ್ದಾರೆ ಎಂದು ಹೇಳಿದ್ದೆ. ಅದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ನೋಡಿ... ದೆಹಲಿಯಲ್ಲಿ PACL ಎಂಬ ಕಂಪನಿ ಇದೆ. ಭೂಮಿ ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡುವ ಕೆಲಸ ಇದು ಮಾಡುತ್ತದೆ. ಎರಡು ಲಕ್ಷ ಕೋಟಿ ಆಸ್ತಿಯನ್ನು ಕಂಪನಿ ಹೊಂದಿತ್ತು. ವಿಜಯ್ ತಾತಾ ಎಂಬವರು ಖಾಸಗಿ ವಾಹಿನಿ ನಡೆಸುತ್ತಿದ್ದರು. ಆ ವಾಹಿನಿ ಮುಚ್ಚಿ ಹೋಯಿತು, ಈಗ ಮತ್ತೊಂದು ಖಾಸಗಿ ಚಾನಲ್‌ ಇಟ್ಟಿಕೊಂಡು ಫೋರ್ಜರಿ ಮಾಡಲಾಗಿದೆ. ಆ ಇಡೀ ಹಗರಣಕ್ಕೆ ಈ ಚಂದ್ರಶೇಖರ ಗಾಡ್ ಫಾದರ್! 2023 ಫೆಬ್ರುವರಿಯಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ದೂರು ಕೊಡಲಾಗುತ್ತದೆ. ಹಣ ವಾಪಸ್ ಪಡೆದುಕೊಳ್ಳಲು ಸಮಿತಿ ಮಾಡಲಾಗುತ್ತದೆ. ಎಲ್ಲಾ ಕಡೆ ಪೋರ್ಜರಿ ಮಾಡಿರುವ ವಿಜಯ್ ತಾತಾ ಮೇಲೆ ಎರಡೂವರೆ ಸಾವಿರ ಎಫ್ ಐಆರ್ ದಾಖಲಾಗಿವೆ," ಎಂದು ಕುಮಾರಸ್ವಾಮಿ ಹೇಳಿದರು.

"ಈವರೆಗೆ ಒಂದು ಎಫ್ ಐಆರ್ ಮೇಲೆಯೂ ಕ್ರಮ ಆಗಿಲ್ಲ. 2013 ಜೂನ್ 8ರಂದು PACL ಕಂಪನಿಯ ಮೇಲೆ ರಾಜಗೋಪಾಲ್ ನಗರ ಠಾಣೆಯಲ್ಲಿ ಶಿವಕುಮಾರ್ ಎಂಬುವವರು ದೂರು ನೀಡುತ್ತಾರೆ. ವಿಜಯ್ ತಾತಾನೇ ಈತನ ಕೈಯಿಂದ ದೂರು ಕೊಡಿಸುತ್ತಾನೆ. ₹50,000 ಹಣವನ್ನು PACL ಕಂಪನಿಗೆ‌ ಕಟ್ಟಿಸುತ್ತಾನೆ. ಮಾರನೇ ದಿನ ಆತನೇ ದೂರು ಕೊಡಿಸುತ್ತಾನೆ. ಆಗ ಸಿಸಿಬಿನಲ್ಲಿ ಈ ಚಂದ್ರಶೇಖರ್ ಇದ್ದರು. 8ನೇ ತಾರೀಖು ಸಂಜೆ 4 ಗಂಟೆಗೆ ದೂರು ದಾಖಲಾಗುತ್ತದೆ. ಸಂಜೆ‌ 8 ಗಂಟೆಗೆ ಇಲ್ಲಿಂದ ಪೊಲೀಸರನ್ನು ಕಳುಹಿಸರುತ್ತಾರೆ. ಆ ಕಂಪನಿಯವರ‌ ಮನೆ ಬಳಿ ಹೋಗಿ ಭಯಪಡಿಸುತ್ತಾರೆ, ಹೆದರಿಸುತ್ತಾರೆ. ಪೊಲೀಸರ ಬಳಿ ಹೋಗಿ ಮಾತಾಡಿಸುತ್ತೇನೆ, ₹100 ಕೋಟಿ ಕೊಡಿ ಎಂದು ವಿಜಯ್ ತಾತಾ ಹೇಳುತ್ತಾನೆ. ಅದರಲ್ಲಿ ₹80 ಕೋಟಿ ನಗದು, ₹21 ಕೋಟಿ‌ ಚೆಕ್ ಕೊಡುತ್ತಾರೆ,"  ಎಂದು ಕುಮಾರಸ್ವಾಮಿ ಅವರು ದಾಖಲೆಗಳ ಸಮೇತ ಆರೋಪ ಮಾಡಿದರು.

ರೌಡಿ ದೂರು

"ಹಿಂದೆ ಶ್ರೀಧರ್ ಎಂಬ ರೌಡಿ ಇದ್ದ. ಅವನ ಆತನ ವಿಜಯ್ ತಾತಾ ಏನೇನು‌ ಆಟ ಆಡಿದ ಎನ್ನುವುದು ಅಧಿಕಾರಿ ಚಂದ್ರಶೇಖರ್ ಗೆ ಚೆನ್ನಾಗಿ ಗೊತ್ತಿದೆ. ಶ್ರೀಧರ್ ನ ಮತ್ತೆ ಜೈಲಿಗೆ ಕಳುಹಿಸಲು ಇವರು ಪ್ರಯತ್ನ ಮಾಡಿದರು. ಎಚ್ಚೆತ್ತ ಶ್ರೀಧರ್ ಇದೇ ವಿಜಯ್ ತಾತಾ ವಿರುದ್ಧ ದೂರು ದಾಖಲು ಮಾಡುತ್ತಾನೆ. ವಿಜಯ್ ತಾತಾ ಆರೋಪ ಪಟ್ಟಿಯಲ್ಲಿ ಮೊದಲ ಆರೋಪಿ ಆಗುತ್ತಾನೆ. ಆ ಸಂದರ್ಭದಲ್ಲಿ ಈ ಅಧಿಕಾರಿ ಚಂದ್ರಶೇಖರ್ ಮಾಡಿದ್ದೇನು? ಈತನಿಗೆ ಐಜಿ ಕೆಲಸ ಕೊಟ್ಟಿದ್ದು ಇಂಥ ನಟೋರಿಯಸ್ ಮಾಡೋಕಾ? ಕೇಸ್ ನಡೆಸಿ ಅಂದ್ರೆ ಸ್ಟೇ ತೆಗೆದುಕೊಂಡಿದ್ದಾರೆ. ಕಿಶೋರ್ ಎಂಬ ಇನ್ಸ್‌ಪೆಕ್ಟರ್ ಒಬ್ಬರನ್ನು ಸಹ ಇವರು ಬ್ಲಾಕ್ ಮೇಲ್ ಮಾಡುತ್ತಾರೆ. ಆಗ ₹20 ಕೋಟಿ ಹಣವನ್ನು ಚಂದ್ರಶೇಖರ್ ಡಿಮ್ಯಾಂಡ್ ಮಾಡುತ್ತಾರೆ. ಸಂಜೆಯೊಳಗೆ ₹2 ಕೋಟಿ‌ ಕೊಡಬೇಕು ಎಂದು ಧಮ್ಕಿ ಹಾಕುತ್ತಾರೆ ಈ ಅಧಿಕಾರಿ. ಇಂಥ ಅಧಿಕಾರಿ ರಾಜ್ಯಪಾಲರ ಸಿಬ್ಬಂದಿ ತನಿಖೆಗೆ ಅನುಮತಿ ಕೇಳುತ್ತಾರೆ," ಎಂದು ಕುಮಾರಸ್ವಾಮಿ ದೂರಿದರು. 

ವಸೂಲಿ ಮಾಡಿದ ಹಣದಲ್ಲಿ ಆರ್.ಟಿ.ನಗರ ಆಕ್ಸಿಸ್ ಬ್ಯಾಂಕ್ ಶಾಖೆಗೆ ₹21 ಕೋಟಿ ವರ್ಗಾವಣೆ ಆಗುತ್ತದೆ. ₹50 ಕೋಟಿಯನ್ನು ಚೆಕ್ ಗಳನ್ನು ಬೇರೆ ಬೇರೆಯವರ ಹೆಸರಿನಲ್ಲಿ ಬರೆಸಿಕೊಂಡು ಚಂದ್ರಶೇಖರ್ ಬ್ಯಾಂಕ್ ಖಾತೆಗೆ ಹಾಕಿಸುತ್ತಾರೆ. ಇಲ್ಲಿ ವಿಜಯ್ ತಾತಾ ತನ್ನ ಜತೆ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬುವರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಹಾಗೆಯೇ PACL ಕಂಪನಿಗೆ ಹೆದರಿಸಿ ಸತೀಶ್ ಎಂಬರನ್ನು ಕಳುಹಿಸಿ ₹10 ಕೋಟಿಯನ್ನು ಮತ್ತೆ ವಸೂಲಿ ಮಾಡುತ್ತಾರೆ. ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದಾಗ ಮಂಜುನಾಥ್ ಎಲ್ಲವನ್ನೂ ಬಾಯಿ ಬಿಡುತ್ತಾರೆ. ಆಮೇಲೆ ಚಂದ್ರಶೇಖರ್, ತಾತಾ ಅಕ್ರಮ ಎಲ್ಲಾ ಬಯಲಿಗೆ ಬರುತ್ತದೆ ಎಂದು ಕೇಂದ್ರ ಸಚಿವರು ದಾಖಲೆಗಳ ಸಮೇತ ಹೇಳಿದರು.

ಇವರ ಅಕ್ರಮಗಳು ಇಲ್ಲಿಗೇ ನಿಲ್ಲುವುದಿಲ್ಲ. ಆಂಬಿಡೆಂಟ್ ಎಂಬ ಕಂಪನಿಯಿಂದ ₹30 ಕೋಟಿ ವಸೂಲಿ ಮಾಡುತ್ತಾರೆ. ಇನ್ನೂ ಹಲವಾರು ಕಂಪನಿಗಳಿಗೆ ಇವರು ಹೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ಎಲ್ಲಾ ದಂಧೆಯಲ್ಲಿ ಚಂದ್ರಶೇಖರ್ ಪಾಲು ಹೊಂದಿದ್ದಾರೆ ಎಂದು ಅವರು ದೂರಿದರು.

Tags:    

Similar News