ಕಮಲ್ ಹಾಸನ್ ಭಾಷಾ ವಿವಾದ | ಶಿವರಾಜ್ ಕುಮಾರ್ ಪಲಾಯನವಾದ ; ಮುಖ್ಯಮಂತ್ರಿ ಚಂದ್ರು ಬೇಸರ
ಕನ್ನಡ ಭಾಷೆಯ ಕುರಿತು ವಿವಾದಿತ ಹೇಳಿಕೆ ನೀಡಿರುವ ಕಮಲ್ ಹಾಸನ್ ಒಬ್ಬ ದುರಹಂಕಾರಿ, ಅಯೋಗ್ಯ. ಅಂದು ಆ ವಿವಾದಕ್ಕೆ ಸಾಕ್ಷಿಯಾಗಿದ್ದ ಶಿವರಾಜ್ ಕುಮಾರ್ ಪಲಾಯನವಾದ ಮಾಡುತ್ತಿರುವುದು ಸರಿಯಲ್ಲ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.;
ಶಿವರಾಜ್ ಕುಮಾರ್ ರೀತಿಯಲ್ಲಿ ಯಾರ್ಯಾರು ತಮಿಳು ನಟ ಕಮಲ್ ಹಾಸನ್ ಪರವಾಗಿದ್ದರೋ ಅವರೆಲ್ಲರೂ ನಾಡದ್ರೋಹಿಗಳು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆ ಕುರಿತು ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ ಹಾಗೂ ನಟ ಶಿವರಾಜ್ ಕುಮಾರ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಕನ್ನಡ ಭಾಷೆಯ ಕುರಿತು ವಿವಾದಿತ ಹೇಳಿಕೆ ನೀಡಿರುವ ಕಮಲ್ ಹಾಸನ್ ಒಬ್ಬ ದುರಹಂಕಾರಿ, ಅಯೋಗ್ಯ. ಆತ ನೀಡಿರುವ ಹೇಳಿಕೆಯಿಂದ ಕನ್ನಡಿಗರಿಗೆ ಹಾಗೂ ಕನ್ನಡ ನಾಡಿಗೆ ಅವಮಾನವಾಗಿದೆ. ಅಂದು ಆ ವಿವಾದಕ್ಕೆ ಸಾಕ್ಷಿಯಾಗಿದ್ದ ಶಿವರಾಜ್ ಕುಮಾರ್ ಪಲಾಯನವಾದ ಮಾಡುತ್ತಿರುವುದು ಸರಿಯಲ್ಲ. ಕಮಲ್ ಹಾಸನ್ ಹೇಳಿಕೆಯನ್ನು ಅಲ್ಲೇ ಖಂಡಿಸಬೇಕಿತ್ತು. ವಿವಾದಿತ ಹೇಳಿಕೆ ನೀಡಿದ ಬಳಿಕವೂ ನಾನು, ನನ್ನ ಕುಟುಂಬ ನಿಮಗೆ ಧನ್ಯವಾದ ಹೇಳುತ್ತೇವೆ ಎಂದಿದ್ದಾರೆ. ವಿವಾದದ ಬಳಿಕವಾದರೂ ಶಿವರಾಜ್ ಕುಮಾರ್ ಅವರು ನಾಡು, ನುಡಿ ವಿಚಾರದಲ್ಲಿ ಹೋರಾಟದ ಪರ ಇರುತ್ತೇನೆ ಎಂದು ಹೇಳಬೇಕಾಗಿತ್ತು. ಅದನ್ನು ಬಿಟ್ಟು ಕಮಲ್ ಹಾಸನ್ ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಎಂದಿದ್ದಾರೆ. ಹಾಗಾದರೆ ಕನ್ನಡ ವಿಚಾರದಲ್ಲಿ ನೀವೇನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಕಮಲ್ ಮಾತನಾಡುವಾಗ ನನಗೆ ಅರ್ಥವೇ ಆಗಲಿಲ್ಲ ಅನ್ನೋದು ಬೇಜವಾಬ್ದಾರಿತನ. ಶಿವರಾಜ್ ಕುಮಾರ್ ಅವರು ಸೇರಿ ಯಾರೆಲ್ಲಾ ಅವರ ಪರ ಇದ್ದಾರೋ (ಕಮಲ್ ಹಾಸನ್) ಅವರೆಲ್ಲ ನಾಡದ್ರೋಹಿಗಳು ಕಿಡಿಕಾರಿದರು.
ನಾಡು ನುಡಿಗೆ ದಕ್ಕೆ ಬಂದಾಗ ರಾಜ್ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವ ರಾಜ್ ಕುಮಾರ್ ಒಬ್ಬರೇ ಕನ್ನಡಿಗರಲ್ಲ. ಕನ್ನಡ ನಾಡಿನಿಂದ ಅವರೆಲ್ಲ ಬಂದಿದ್ದಾರೆ ಎಂಬುದನ್ನು ಮರೆಯಬಾರದು. ಆದರೆ, ಕಮಲ್ ವಿಚಾರದಲ್ಲಿ ಶಿವಣ್ಣನ ಪ್ರತಿಕ್ರಿಯೆ ನೋಡಿದರೆ ಅರಿವಿನ ಕೊರತೆಯಿಂದ ಪಲಾಯನವಾದ ಮಾಡಿದ್ದಾರೆ ಎನಿಸುತ್ತದೆ ಎಂದು ಹೇಳಿದರು.
ಕಮಲ್ ಹಾಸನ್ ಒಬ್ಬ ಅಯೋಗ್ಯ
ಕಮಲ್ ಹಾಸನ್ ಒಬ್ಬ ಅಯೋಗ್ಯ. ಅವರ ಸಿನಿಮಾ ಬಿಡುಗಡೆ ಮಾಡದೇ ಹೋದರೆ ನಮ್ಮ ವಿತರಕರಿಗೆ ನಷ್ಟವಾಗಲಿದೆ. ಅದರ ಬದಲು ಕಮಲ್ ಹಾಸನ್ ಅವರನ್ನು ರಾಜ್ಯಕ್ಕೆ ಬರದಂತೆ ಬಹಿಷ್ಕಾರ ಹಾಕಬೇಕು ಎಂದು ಒತ್ತಾಯಿಸಿದರು.
ಕಮಲ್ ವಿಚಾರದಲ್ಲಿ ಸರ್ಕಾರ ಕೈಗೊಂಡ ನಿರ್ಧಾರ ಶ್ಲಾಘನೀಯ. ಕಮಲ್ ಹಾಸನ್ ವಿವೇಕವಿಲ್ಲದ ವ್ಯಕ್ತಿ. ತಾನು ಮಾಡಿದ್ದು ತಪ್ಪು ಎಂದು ಹೇಳದೆ ಹೋದರೆ ಅದು ರಾಜಕೀಯ ಗಿಮಿಕ್ ಆಗಲಿದೆ. ಅಲ್ಲದೇ ಚಿತ್ರ ಚೆನ್ನಾಗಿ ಓಡಲಿ ಅಂತಲೂ ಇರಬಹುದು. ಕಮಲ್ ಹಾಸನ್ ಮಾಡಿದ್ದು ತಪ್ಪು ಎಂದು ಹೇಳದೇ ಹೋದರೆ ಶಿವರಾಜ್ ಕುಮಾರ್ ಕೂಡ ತಪ್ಪಿತಸ್ಥರಾಗುತ್ತಾರೆ ಎಂದು ಹೇಳಿದರು.