ಕಮಲ್ ಹಾಸನ್ ಥಗ್ ಲೈಫ್ ಚಿತ್ರಕ್ಕೆ ನಿಷೇಧ; ಫಿಲಂ ಚೇಂಬರ್ಗೆ ಸಚಿವ ಶಿವರಾಜ್ ತಂಗಡಗಿ ಸೂಚನೆ
ಕಮಲ್ ಹಾಸನ್ ತಮ್ಮ 'ಥಗ್ ಲೈಫ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ, "ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ" ಎಂದು ಹೇಳಿಕೆ ನೀಡಿದ್ದು ವಿವಾದವಾಗಿತ್ತು.;
ಕಮಲ್ ಹಾಸನ್ ಅವರ ಕನ್ನಡ ಕುರಿತಾದ ವಿವಾದಾತ್ಮಕ ಹೇಳಿಕೆಯು ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಕಮಲ್ ಹಾಸನ್ರ ಚಿತ್ರಗಳಿಗೆ ರಾಜ್ಯದಲ್ಲಿ ನಿಷೇಧ ವಿಧಿಸುವಂತೆ ಸೂಚಿಸಿದ್ದಾರೆ. ಕಮಲ್ ಹಾಸನ್ ತಮ್ಮ 'ಥಗ್ ಲೈಫ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ, "ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ" ಎಂದು ಹೇಳಿಕೆ ನೀಡಿದ್ದು ವಿವಾದವಾಗಿತ್ತು.
ಸಚಿವ ಶಿವರಾಜ್ ತಂಗಡಗಿ ಅವರು ಕಮಲ್ ಹಾಸನ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ, ಅವರ ಮುಂಬರುವ ಚಿತ್ರ 'ಥಗ್ ಲೈಫ್' ಸೇರಿದಂತೆ ಅವರ ಎಲ್ಲಾ ಚಿತ್ರಗಳನ್ನು ಕರ್ನಾಟಕದಲ್ಲಿ ನಿಷೇಧಿಸುವಂತೆ ಅವರು ಫಿಲ್ಮ್ ಚೇಂಬರ್ಗೆ ಸೂಚಿಸಿದ್ದಾರೆ. "ಕನ್ನಡ ಭಾಷೆಯ ಗೌರವವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಕಮಲ್ ಹಾಸನ್ರ ಹೇಳಿಕೆಯು ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಭಾಷೆಗೆ ಸಂಬಂಧಿಸಿದಂತೆ ಇಂತಹ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ" ಎಂದು ಸಚಿವ ತಂಗಡಗಿ ತಮ್ಮ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?
ತಮಿಳು ಚಲನಚಿತ್ರ ನಟರಾದ ಕಮಲ್ ಹಾಸನ್ ಅವರು ತಮ್ಮ ಇತ್ತೀಚಿನ ಚಿತ್ರ 'ಥಗ್ ಲೈಫ್' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಮಲ್ ಹಾಸನ್ ಅವರು "ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ" ಎಂಬ ಹೇಳಿಕೆಯನ್ನು ನೀಡಿದ್ದು, ಇದು ಕನ್ನಡ ಭಾಷೆಯ ಇತಿಹಾಸ ಮತ್ತು ಸಂಸ್ಕೃತಿಯ ಗೌರವಕ್ಕೆ ಧಕ್ಕೆ ತರುವಂತಿದೆ. ಈ ಹೇಳಿಕೆಯಿಂದ ಕರ್ನಾಟಕದ ಜನತೆಯ ಭಾವನೆಗಳಿಗೆ ತೀವ್ರ ಆಘಾತವಾಗಿದೆ.
ಕಮಲ್ ಹಾಸನ್ ಅವರು ತಮ್ಮ ಈ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದಲ್ಲಿ, ಕರ್ನಾಟಕದಲ್ಲಿ ಅವರ ಚಿತ್ರಗಳ ಬಿಡುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕ್ರಮವನ್ನು ಕೈಗೊಳ್ಳುವಂತೆ ಈ ಮೂಲಕ ಸೂಚಿಸಲಾಗಿದೆ.
ಕನ್ನಡಿಗರಿಂದ ಆಕ್ರೋಶ
ಕಮಲ್ ಹಾಸನ್ರ ಹೇಳಿಕೆಯು ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವ ಕಮಲ್ ಹಾಸನ್ ಕೂಡಲೇ ಕ್ಷಮೆಯಾಚಿಸಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ, ಕರ್ನಾಟಕದಲ್ಲಿ ಅವರ ಚಿತ್ರಗಳ ಬಿಡುಗಡೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.