ಕಮಲ್‌ ಹಾಸನ್‌ ಭಾಷಾ ವಿವಾದ | ಶಿವಣ್ಣನ ಪರಿಸ್ಥಿತಿ ತ್ರಿಶಂಕು ಸ್ಥಿತಿ; ತಟಸ್ಥ ಧೋರಣೆಗೆ ಕನ್ನಡಿಗರ ಬೇಸರ

ಶಿವರಾಜಕುಮಾರ್‌ ಎದುರಲ್ಲೇ ಕನ್ನಡದ ಅವಹೇಳನ ಮಾಡಿದರೂ ಖಂಡಿಸದ ಹ್ಯಾಟ್ರಿಕ್‌ ಹಿರೋ ಬಗ್ಗೆ ಕನ್ನಡಾಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಹಾಗಾಗಿ ಶಿವಣ್ಣ ಅವರು ಅತಂತ್ರ ಸ್ಥಿತಿಯಲ್ಲಿ ಸಿಲುಕುವಂತಾಗಿದೆ.;

Update: 2025-06-01 00:30 GMT

ʼತಮಿಳಿನಿಂದ ಕನ್ನಡ ಭಾಷೆ ಹುಟ್ಟಿತುʼ ಎಂಬ ಕಮಲ್‌ ಹಾಸನ್‌ ವಿವಾದಿತ ಹೇಳಿಕೆಯಲ್ಲಿ ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌ ʼತ್ರಿಶಂಕು ಸ್ಥಿತಿʼ ಅನುಭವಿಸುವಂತಾಗಿದೆ. ತಮ್ಮ ಎದುರಲ್ಲೇ ಕಮಲ್‌ ಹಾಸನ್‌ ಆಡಿದ ಮಾತುಗಳು ಕನ್ನಡದ ಅಸ್ಮಿತೆಯನ್ನು ಘಾಸಿಗೊಳಿಸಿದರೂ ಸ್ನೇಹದ ಬಂಧದಲ್ಲಿ ಸಿಲುಕಿ, ಇತ್ತ ಖಂಡಿಸಲೂ ಆಗದೇ, ಅತ್ತ ಬೆಂಬಲಿಸಲೂ ಆಗದೇ ಪರಿತಪಿಸುವಂತಾಗಿದೆ. 

ಚೆನ್ನೈನಲ್ಲಿ ನಡೆದ ʼಥಗ್‌ ಲೈಫ್‌ʼ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದ ವೇಳೆ ರಾಜಕುಮಾರ್‌ ಹಾಗೂ ಶಿವರಾಜಕುಮಾರ್‌ ಅವರ ಗುಣಗಾನ ಮಾಡುತ್ತಲೇ ಕನ್ನಡ ಭಾಷೆಯ ವಿವಾದವನ್ನು ಕಮಲ್‌ ಮೈ ಮೇಲೆ ಎಳೆದುಕೊಂಡಿದ್ದರು.

ಕಮಲ್‌ ಹಾಸನ್‌ ಹೇಳಿಕೆಗೆ ಕನ್ನಡ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ವಿವಾದದ ಸ್ವರೂಪ ಪಡೆಯಿತು. ಶಿವರಾಜಕುಮಾರ್‌ ಎದುರಲ್ಲೇ ಕನ್ನಡದ ಅವಹೇಳನ ಮಾಡಿದರೂ ಖಂಡಿಸದ ಹ್ಯಾಟ್ರಿಕ್‌ ಹಿರೋ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು. 

ವಿವಾದದ ಕುರಿತು ಪ್ರತಿಕ್ರಿಯಿಸಿದ್ದ ಶಿವರಾಜಕುಮಾರ್‌ ಅವರು, ವೇದಿಕೆ ಮೇಲೆ ಏನು ತಪ್ಪಾಗಿ ಮಾತನಾಡಿದರೋ ನನಗೂ ಗೊತ್ತಾಗಲಿಲ್ಲ. ಇಂದು ಬಂದ ಮೇಲೆ ವಿವಾದ ಗಮನಕ್ಕೆ ಬಂತು. ಕಮಲ್‌ ಹಾಸನ್‌ ಅವರು ಬೆಂಗಳೂರಿಗೂ ಬಂದಿದ್ದರು, ಎಲ್ಲರೊಟ್ಟಿಗೆ ಮಾತನಾಡುತ್ತಿದ್ದರು. ಇಲ್ಲಿಯೇ ಅವರನ್ನು ಕೇಳಬಹುದಿತ್ತು, ಯಾಕೆ ಕೇಳಲಿಲ್ಲವೊ ಗೊತ್ತಿಲ್ಲ ಎಂದು ಹೇಳಿದ್ದರು. ಮುಂದುವರಿದು ಕನ್ನಡದ ಮೇಲೆ ಪ್ರೀತಿ ಯಾರೋ ಒಬ್ಬರು ಮಾತನಾಡಿದಾಗ ಮಾತ್ರವೇ ಬರಬಾರದು. ಕನ್ನಡ ಪ್ರೇಮ ಸದಾ ಕಾಲ ಜೊತೆಗೆ ಇರಬೇಕು ಎಂದು ಹೇಳಿದ್ದರು.

ಅಭಿಮಾನಿಗಳ ತಿರುಗೇಟು

ಕಮಲ್‌ ಹಾಸನ್‌ ಹೇಳಿಕೆಯನ್ನು ಖಂಡಿಸದ ಶಿವರಾಜ್‌ಕುಮಾರ್‌ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆಗ ಶಿವಣ್ಣನ ಅಭಿಮಾನಿಗಳು ಟ್ರೋಲ್‌ ಮಾಡುವವರಿಗೆ ತಿರುಗೇಟು ನೀಡಿದ್ದರು.

ಕನ್ನಡ ಭಾಷಾಭಿಮಾನದ ಕುರಿತು ಶಿವಣ್ಣನಿಗೆ ಪಾಠ ಮಾಡಲು ಬರಬೇಡಿ. ಅವರಿಗೆ ಕನ್ನಡ ಅಭಿಮಾನ, ಹೋರಾಟ ಗೊತ್ತಿಲ್ಲವೇ? ಟ್ವಿಟ್ಟರ್‌ನಲ್ಲಿ ಕೂತು ಕಾಮೆಂಟ್ ಮಾಡುವುದಲ್ಲ ಎಂದು ಕಿಡಿಕಾರಿದ್ದರು. ಅಲ್ಲದೇ ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಎಂಇಎಸ್ ಕಾರ್ಯಕರ್ತರು ಕರ್ನಾಟಕ ಬಾವುಟ ಸುಟ್ಟು ಉದ್ಧಟತನ ಮೆರೆದಾಗ ಶಿವಣ್ಣ ಅಸಮಾಧಾನ ಹೊರಹಾಕಿದ್ದ ವಿಡಿಯೊವನ್ನು ಶೇರ್‌ ಮಾಡಿ, ಶಿವಣ್ಣ ಭಾಷೆಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧ ಎಂದಿದ್ದಾರೆ. 

ಅತಂತ್ರ ಸ್ಥಿತಿಯಲ್ಲಿ ಶಿವಣ್ಣ

ನಾಡು-ನುಡಿಯ ವಿವಾದ ಏರ್ಪಟ್ಟಾಗ ಶಿವರಾಜಕುಮಾರ್ ನೇರಾ ನೇರ ಖಂಡಿಸುವ ಮೂಲಕ ಕನ್ನಡದ ಹೋರಾಟಕ್ಕೆ ಮುನ್ನುಗ್ಗುತ್ತಿದ್ದರು. ಆದರೆ, ಕಮಲ್‍ ಹಾಸನ್‍ ವಿವಾದಾತ್ಮಕ ಹೇಳಿಕೆ ನೇರ ಸಾಕ್ಷಿಯಾಗಿದ್ದರೂ ಏನು ಮಾತನಾಡಬೇಕು ಎಂಬ ಗೊಂದಲದಲ್ಲಿ ಶಿವಣ್ಣ ಮುಳುಗಿದ್ದಾರೆ.

ಶಿವರಾಜಕುಮಾರ್ ಅವರು ಸಾಕಷ್ಟು ಬಾರಿ ಕಮಲ್‍ ಹಾಸನ್‍ ತಮ್ಮ ನೆಚ್ಚಿನ ನಟ ಎಂದು ಹೇಳಿಕೊಂಡಿದ್ದರು. ಹೀಗಿರುವಾಗ, ಕಮಲ್‍ ಹಾಸನ್‍ ಹೇಳಿಕೆಗೆ ಇಡೀ ರಾಜ್ಯದ ಜನರೇ ಆಕ್ರೋಶ ವ್ಯಕ್ತಪಡಿಸುತ್ತಿರುವಾಗ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ದಿಕ್ಕು ತೋಚದಂತಾಗಿದ್ದಾರೆ ಶಿವ ರಾಜ್‌ಕುಮಾರ್. ವಿವಾದದಲ್ಲಿ ತಮ್ಮ ತಪ್ಪಿಲ್ಲದಿದ್ದರೂ ಅನಗತ್ಯವಾಗಿ ಸಿಲುಕಿಕೊಳ್ಳಬೇಕಾಗಿದೆ. 

ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾದರೂ, ಥಗ್‌ ಲೈಫ್‌ ಬಿಡುಗಡೆಗೆ ನಿರ್ಬಂಧ ಹೇರುವುದಾಗಿ ಹೇಳಿದರೂ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ‍ಹಾಸನ್‍ ಪಟ್ಟು ಹಿಡಿದಿರುವುದು ವಿವಾದವು ಇನ್ನಷ್ಟು ತೀವ್ರತೆ ಪಡೆಯಲು ಕಾರಣವಾಗಿದೆ. 

ಕರವೇ ಅಸಮಾಧಾನ

ಕಮಲ್‌ ಹಾಸನ್‌ ವಿವಾದಿತ ಹೇಳಿಕೆ ನೀಡಿದಾಗಲೇ ರಾಜಕುಮಾರ್‌ ಅವರ ಪುತ್ರ ಶಿವರಾಜ್‌ಕುಮಾರ್‌ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಇಷ್ಟೆಲ್ಲಾ ವಿರೋಧ ವ್ಯಕ್ತವಾಗುತ್ತಿದ್ದರೂ ಶಿವರಾಜ್‌ಕುಮಾರ್‌ ಅವರುಕಮಲ್‌ ಹಾಸನ್‌ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ಯಾವ ಕನ್ನಡಿಗರೂ ಸಹಿಸಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಬೇಸರ ಹೊರಹಾಕಿದ್ದಾರೆ.

ಡಾ.ರಾಜಕುಮಾರ್‌ ಅವರು ಗೋಕಾಕ್‌ ಚಳವಳಿಯ ಸಾರಥ್ಯ ವಹಿಸುವ ಮೂಲಕ ಕನ್ನಡಿಗರ ಎದೆಯಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅಂತವರ ಮಗನಾಗಿ ಶಿವರಾಜಕುಮಾರ್‌ ಅವರು ಕಮಲ್‌ ಹಾಸನ್‌ ಮಾತುಗಳನ್ನು ಖಂಡಿಸದಿರುವುದು ಸರಿಯಲ್ಲ. ಕಮಲ್‌ ಹಾಸನ್‌ ಕ್ಷಮೆ ಕೇಳದ ಹೊರತು ಅವರ ಚಿತ್ರಗಳನ್ನು ಬಿಡುಗಡೆ ಮಾಡಿದರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ಚಲಾಗುವುದು ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.

ಚಿತ್ರತಾರೆಯರಿಂದಲೂ ಆಕ್ರೋಶ

ಕನ್ನಡ ಚಿತ್ರರಂಗದ ಕಲಾವಿದರು ಕೂಡ ಕಮಲ್ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು, ಕಮಲ್ ಹಾಸನ್ ಸಿನಿ ಪಯಣದ ಹಿನ್ನೆಲೆ ಕೆದಕಿದ್ದಾರೆ. ತಮಿಳುನಾಡಿನಲ್ಲಿ ತೀರಾ ಕಳಪೆ ಪ್ರದರ್ಶನ ಕಂಡಿದ್ದ ನಿಮ್ಮ ಚಿತ್ರವನ್ನು ಸೂಪರ್ ಹಿಟ್ ಮಾಡಿದ್ದು ಕರ್ನಾಟಕ ಎಂಬುದು ನೆನಪಿಲ್ಲವೇ ಎಂದು ತಿರುಗೇಟು ನೀಡಿದ್ದಾರೆ.

ಡಾ. ರಾಜ್‌ಕುಮಾರ್‌ ಅವರ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದು ಸರಿಯಷ್ಟೇ. ʼತಮಿಳುನಿಂದಲೇ ಕನ್ನಡ ಹುಟ್ಟಿತುʼ ಎಂಬ ವ್ಯರ್ಥ ಮಾತು ಬೇಕಾಗಿರಲಿಲ್ಲ. ನಿಮಗೆ ಕನ್ನಡ ಭಾಷೆಯ ಬಗ್ಗೆ ಗೊತ್ತಲ್ಲದ ಮೇಲೆ ಮಾತನಾಡಬಾರದಿತ್ತು. ನಿಮ್ಮ ಅಜ್ಞಾನದ ಒಂದು ಮಾತಿನಿಂದ ನಿಮ್ಮ ಸಿನಿಮಾಗೆ ಕುತ್ತು ಬಂದಿದೆ ಎಂದಿದ್ದಾರೆ. 

ನಟಿ ರಚಿತಾ ರಾಮ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಮಲ್ ಹಾಸನ್ ಹೇಳಿಕೆಗೆ ತಮ್ಮದೇ ದಾಟಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ. ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ ಎಂಬ ಗಾದೆ ಉಲ್ಲೇಖಿಸಿ ಕಮಲ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಕನ್ನಡ ಭಾಷೆಯ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ನೋಡಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ. ನಾವು ಕನ್ನಡದವರು, ವಿಶಾಲ ಹೃದಯದವರು. ಎಲ್ಲ ಭಾಷೆಯ ಸಿನಿಮಾ ನೋಡುತ್ತೇವೆ. ಹಾಡುಗಳನ್ನು ಕೇಳುತ್ತೇವೆ. ಕಲಾವಿದರನ್ನು ಬೆಂಬಲಿಸುತ್ತೇವೆ. ಆದರೆ, ನಮ್ಮ ಭಾಷೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನಾವ್ಯಾಕೆ ದನಿ ಎತ್ತಬಾರದು ಎಂದು ಪ್ರಶ್ನಿಸಿದ್ದಾರೆ.

ನಟ ಚೇತನ್ ಅಹಿಂಸಾ ಅವರು ಕಮಲ್‌ ಹಾಸನ್‌ ಅಪ್‌ಡೇಟ್‌ ಆಗಿಲ್ಲ, ಕ್ಷಮೆ ಕೇಳಲ್ಲ ಎಂಬ ಹೇಳಿಕೆ ಅವರ ಮೊಂಡುತನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯ ಕುರಿತ ಕಮಲ್ ಹಾಸನ್ ಮಾತು ಸಮರ್ಥನೀಯವಲ್ಲ. ತಮ್ಮ ಮಾತು ಸತ್ಯವಲ್ಲ ಎಂಬುದು ಗೊತ್ತಾದ ಮೇಲೂ ಕ್ಷಮೆ ಕೇಳದೇ ವಾದಕ್ಕಿಳಿದಿರುವುದು ಸರಿಯಲ್ಲ ಎಂದಿದ್ದಾರೆ.

ರಾಜಕುಮಾರ್ ಅವರು ಕನ್ನಡ ಭಾಷೆಗಾಗಿ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದರು. ಅಂತವರ ಪುತ್ರ ಶಿವರಾಜಕುಮಾರ್ ಅವರು ತಮ್ಮ ಸ್ನೇಹ, ಸಿನಿಮಾ ಬದಿಗಿಟ್ಟು ಕನ್ನಡ ಭಾಷೆಯ ಪರ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.

ಭಾಷಾ ವಿವಾದಗಳು ನಟರ ಮೇಲೆ ಭಾರೀ ಪರಿಣಾಮ ಬೀರುತ್ತವೆ. ನನ್ನ ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆಯಾಗುವಾಗ ನನ್ನನ್ನೂ ಕೆಣಕಬಹುದು. ಆದರೆ, ಕಮಲ್‌ ಹಾಸನ್‌ ಒಬ್ಬರ ವಿವೇಚನೆ ಇಲ್ಲದ ಮಾತು ಹಲವರ ಮೇಲೆ ಪ್ರಭಾವ ಬೀರುತ್ತದೆ ಎಂದು ನಟ ವರಿಷ್ಠ ಸಿಂಹ ಹೇಳಿದ್ದಾರೆ.

ಪ್ರತಿಯೊಬ್ಬರೂ ಜಾಗರೂಕತೆಯಿಂದ ಮಾತಾಡಬೇಕು. ಬೆಳೆದ ಮೇಲೆ ಏನು ಮಾತನಾಡಿದರೂ ನಡೆಯುತ್ತದೆ ಎಂಬ ಅಹಂ ಸರಿಯಲ್ಲ. ತಗ್ಗಿಬಗ್ಗಿ ನಡೆಯುವುದನ್ನು ಕಲಿಯಬೇಕು ಎಂದು ಕಿಡಿಕಾರಿದ್ದಾರೆ. 

Tags:    

Similar News