ಬೆಂಗಳೂರಿನ ಮಲ್ಟಿಪ್ಲೆಕ್ಸ್ಗಳಲ್ಲಿ ಕಮಲ್ ಹಾಸನ್ ಥಗ್ ಲೈಫ್ ಚಿತ್ರದ ಜೂನ್ 5ರ ಪ್ರದರ್ಶನ ರದ್ದು?
ಬುಕ್ಮೈ ಶೋ ವೆಬ್ಸೈಟ್ಗೆ ಪ್ರವೇಶಿಸಿ ಟಿಕೆಟ್ ಬುಕ್ ಮಾಡಲು ಹೋದರೆ ಜೂನ್ 5ರ ಪ್ರದರ್ಶನದ ಟಿಕೆಟ್ ಬುಕಿಂಗ್ ಆಯ್ಕೆಗೆ ಲಭ್ಯವಿಲ್ಲ ಎಂದು ತೋರಿಸುತ್ತದೆ.;
ನಟ ಕಮಲ್ ಹಾಸನ್ ಅವರ ಬಹುನಿರೀಕ್ಷಿತ ಚಿತ್ರ "ಥಗ್ ಲೈಫ್" ಬಿಡುಗಡೆಗೆ ಸಂಬಂಧಿಸಿದಂತೆ ಅನಿರೀಕ್ಷಿತ ತೊಡಕು ಎದುರಾಗಿದೆ. ಕನ್ನಡ ಭಾಷೆಯ ಕುರಿತು ಅವರು ತಪ್ಪು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದ್ದು ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಏತನ್ಮಧ್ಯೆ, ಬೆಂಗಳೂರಿನ ಪಿವಿಆರ್ ಮಲ್ಪಿಪ್ಲೆಕ್ಸ್, ಐನಾಕ್ಸ್, ಸಿನಿಪೊಲಿಸ್ ಮತ್ತಿತರ ಮಲ್ಟಿಪ್ಲೆಕ್ಸ್ ಮತ್ತು ಇತರ ಥಿಯೇಟರ್ಗಳಲ್ಲಿ ಚಿತ್ರದ ಬಿಡುಗಡೆಯ ದಿನ ಅಂದರೆ ಜೂನ್ 5ರ ಪ್ರದರ್ಶನಗಳು ರದ್ದಾಗಿವೆ.
ಬುಕ್ಮೈ ಶೋ ವೆಬ್ಸೈಟ್ಗೆ ಪ್ರವೇಶಿಸಿ ಟಿಕೆಟ್ ಬುಕ್ ಮಾಡಲು ಹೋದರೆ ಜೂನ್ 5 ಪ್ರದರ್ಶನದ ಟಿಕೆಟ್ ಬುಕಿಂಗ್ ಆಯ್ಕೆಗೆ ಲಭ್ಯವಿಲ್ಲ. ಹೀಗಾಗಿ ಚಿತ್ರ ಮಂದಿರವೇ ಸಿನಿಮಾ ಪ್ರದರ್ಶನ ಮಾಡಿ ವಿವಾದ ಮೈಮೇಲೆ ಎಳೆದುಕೊಳ್ಳುವುದಕ್ಕೆ ಹಿಂಜರಿದಿವೆ ಎನ್ನಲಾಗಿದೆ.
ಬೆಂಗಳೂರಿನ ಒರಿಯನ್ ಮಾಲ್ನ 2ನೇ ಮಹಡಿಯಲ್ಲಿರುವ ಪಿವಿಆರ್ ಸಿನಿಮಾ ಹಾಲ್ನಲ್ಲಿ ಜೂನ್ 3ರಿಂದ ಜೂನ್ 10 ರವರೆಗಿನ ಸಿನಿಮಾ ಪ್ರದರ್ಶನ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ "ಥಗ್ ಲೈಫ್" ಚಿತ್ರಕ್ಕೆ ಯಾವುದೇ ಸ್ಲಾಟ್ಗಳು ಲಭ್ಯವಿಲ್ಲ. ಇದರ ಬದಲಿಗೆ, ಈ ಸಿನಿಮಾ ಹಾಲ್ನಲ್ಲಿ ಮೂರು ಬೇರೆ ಚಿತ್ರಗಳಾದ ತೆಲುಗಿನ ಖಲೇಜಾ, ಇಂಗ್ಲಿಷ್ನ ಕರಾಟೆ ಕಿಡ್: ಲೆಜೆಂಡ್ಸ್ ಮತ್ತು ಮಿಷನ್: ಇಂಪಾಸಿಬಲ್ - ದಿ ಫೈನಲ್ ರೆಕ್ಕೊನಿಂಗ್ ಟಿಕೆಟ್ಗಳು ಮಾತ್ರ ಲಭವಿದೆ.
ಅಭಿಮಾನಿಗಳಲ್ಲಿ ನಿರಾಸೆ, ಕೋರ್ಟ್ ತೀರ್ಪಿನತ್ತ ಗಮನ
ಕಮಲ್ ಹಾಸನ್ ಅವರು "ಥಗ್ ಲೈಫ್" ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಇದು ಆಕ್ಷನ್ ಮತ್ತು ಡ್ರಾಮಾ ಒಳಗೊಂಡ ದೊಡ್ಡ ಬಜೆಟ್ನ ಪ್ರಾಜೆಕ್ಟ್ ಆಗಿದೆ. ಈ ಚಿತ್ರವು ಭಾರತೀಯ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದರೆ, ಭಾಷಾ ವಿವಾದದಿಂದಾಗಿ ಚಿತ್ರದ ಬಿಡುಗಡೆಗೆ ಕರ್ನಾಟಕದಲ್ಲಿ ಸಮಸ್ಯೆ ಆಗಿದೆ,
ಕನ್ನಡಪರ ಸಂಘಟನೆಗಳ ಹೋರಾಟದ ಭಯ ಹಾಗೂ ಸರ್ಕಾರ ಮಟ್ಟದಲ್ಲಿ ಕಮಲ್ ಹೇಳಿಕೆಗೆ ಪ್ರತಿರೋಧ ವ್ಯಕ್ತಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡಬೇಕು ಹಾಗೂ ಪೊಲೀಸ್ ಭದ್ರತೆ ನೀಡಬೇಕು ಎಂದು ವಿತರಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ತೀರ್ಪಿನ ಬಳಿಕ ಬೆಂಗಳೂರಿನಲ್ಲಿ ಅದರ ಬಿಡುಗಡೆಯ ಭವಿಷ್ಯ ನಿರ್ಧಾರವಾಗಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಅಭಿಮಾನಿಗಳು ಈ ವಿವಾದದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಮಲ್ ಹಾಸನ್ ಸರ್ ಅವರ ಚಿತ್ರಕ್ಕಾಗಿ ಎಷ್ಟು ದಿನದಿಂದ ಕಾಯುತ್ತಿದ್ದೇವೆ, ಇಂತಹ ವಿವಾದದಿಂದ ಬಿಡುಗಡೆ ತಡವಾದರೆ ನಿಜಕ್ಕೂ ಬೇಸರ," ಎಂದು ಹೇಳಿಕೊಂಡಿದ್ದಾರೆ.
ಏನಿದು ವಿವಾದ?
ಚೆನ್ನೈನಲ್ಲಿ ನಡೆದ 'ತಗ್ ಲೈಫ್' ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಕಮಲ್ ಹಾಸನ್, "ಕನ್ನಡ ಭಾಷೆಯು ತಮಿಳಿನಿಂದ ಜನಿಸಿದೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಕರ್ನಾಟಕದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡ ಪರ ಸಂಘಟನೆಗಳು ಮತ್ತು ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ಹಲವರು ಇದನ್ನು ಕನ್ನಡಿಗರ ಭಾವನೆಗೆ ಧಕ್ಕೆ ತರುವಂತಹ ಹೇಳಿಕೆ ಎಂದು ಟೀಕಿಸಿದ್ದಾರೆ.
ಈ ವಿವಾದದ ಹಿನ್ನೆಲೆಯಲ್ಲಿ, ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ (KFCC) ಕಮಲ್ ಹಾಸನ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸದಿದ್ದರೆ, ಅವರ 'ತಗ್ ಲೈಫ್' ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಆದರೆ, ಕಮಲ್ ಹಾಸನ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಲು ನಿರಾಕರಿಸಿದ್ದು, ತಾವು ತಪ್ಪು ಮಾಡಿರುವುದು ಸಾಬೀತಾದರೆ ಮಾತ್ರ ಕ್ಷಮೆ ಕೇಳುವುದಾಗಿ ಪ್ರತಿಕ್ರಿಯಿಸಿದ್ದಾರೆ