ಒಳ ಮೀಸಲಾತಿ : ಇನ್ನೊಂದು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ

ಒಳಮೀಸಲಾತಿ ಸಮೀಕ್ಷೆಯ ವರದಿಯನ್ನು ಆಯೋಗವು ಒಂದು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲು ನಿರ್ಧರಿಸಿದೆ. ಜುಲೈ ತಿಂಗಳಾಂತ್ಯ ಅಥವಾ ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ವರದಿ ಸಲ್ಲಿಕೆಯ ನಿರೀಕ್ಷೆ ಇದೆ.;

Update: 2025-06-28 13:19 GMT

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ಇನ್ನು ಒಂದು ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. 

ಪರಿಶಿಷ್ಟ ಜಾತಿಯಲ್ಲಿ 101 ಸಮುದಾಯಗಳಿವೆ. ಆಯಾ ಸಮುದಾಯಗಳ ಜನಸಂಖ್ಯೆ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ ಸಹಿತ ವಿವಿಧ ಮಾಹಿತಿಗಳನ್ನು ನಿಖರವಾಗಿ ಸಂಗ್ರಹಿಸಲು ಆಯೋಗಕ್ಕೆ ಜವಾಬ್ದಾರಿ ನೀಡಲಾಗಿತ್ತು. ಮೇ 5ರಿಂದ ಸಮೀಕ್ಷೆ ಆರಂಭವಾಗಿದ್ದು, ಆರು ಬಾರಿ ವಿಸ್ತರಣೆಯಾಗಿದೆ.  ಇದಿಗ ಜೂನ್ 30ರವರೆಗೆ ಅವಕಾಶ ನೀಡಲಾಗಿದೆ. ಇದೇ ಕೊನೆಯ ಅವಕಾಶವಾಗಿದ್ದು, ನಂತರ ವಿಸ್ತರಣೆ ಮಾಡುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. 

ನ್ಯಾ.ನಾಗಮೋಹನ್‌ ದಾಸ್‌ ಆಯೋಗವು ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಆದರೆ, ಪೂರ್ಣಪ್ರಮಾಣದಲ್ಲಿ ಆಗದ ಕಾರಣಕ್ಕಾಗಿ ಆಯೋಗದ ಶಿಫಾರಸಿನಂತೆ ತಂತ್ರಜ್ಞಾನ ಬಳಸಿ ಮುಂದಿನ 40 ದಿನಗಳೊಳಗೆ ಉಪ ಜಾತಿಗಳ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಿತ್ತು. ಅದರಂತೆ ಸಮೀಕ್ಷೆ ಕೈಗೊಂಡ ಆಯೋಗವು ಮನೆ ಮನೆ ಭೇಟಿ, ಆನ್‌ಲೈನ್‌ನಲ್ಲಿ ನೋಂದಣಿ, ಆಯೋಗದ ಶಿಬಿರದಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಯಿತು. ಬೆಂಗಳೂರು ಒನ್‌, ಕರ್ನಾಟಕ ಒನ್‌ ಸೇರಿದಂತೆ ಇತರೆಡೆಗಳಲ್ಲಿ ನೋಂದಣಿ ಮಾಡಲು ಅವಕಾಶ ಕಲ್ಪಿಸಿ ಸಮೀಕ್ಷೆ ನಡೆಸಲಾಗಿದೆ. 

ಜೂನ್‌ ಅಂತ್ಯಕ್ಕೆ ಸಮೀಕ್ಷೆ ಮುಕ್ತಾಯಗೊಳ್ಳಲಿದೆ. ನಂತರ ಸಮೀಕ್ಷೆಯ ವರದಿಯನ್ನು ಸಿದ್ದಪಡಿಸಲಾಗುತ್ತದೆ. ಆಯೋಗವು ಒಂದು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲು ನಿರ್ಧರಿಸಿದೆ. ಜುಲೈ ತಿಂಗಳ ಅಂತ್ಯ ಅಥವಾ ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ವರದಿ ಸಲ್ಲಿಕೆಯ ನಿರೀಕ್ಷೆ ಇದೆ. ಬೆಂಗಳೂರಲ್ಲಿ ಶೇ. ೫೨ರಷ್ಟು ಸಮೀಕ್ಷೆಯಾಗಿದೆ. ಬೆಂಗಳೂರು ಹೊರತುಪಡಿಸಿದರೆ ಇನ್ನುಳಿದ ಜಿಲ್ಲೆಗಳಲ್ಲಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ನಗರದಲ್ಲಿ ವಾಸಿಸುವ ದಲಿತರಿಗೆ ಸಾಮಾಜಿಕ ಒತ್ತಡಗಳಿವೆ ಎಂಬುದನ್ನು ಅಲ್ಲಗಳೆಯಲಾಗದು. ಹೀಗಾಗಿ ಜಾತಿಯನ್ನು ಹೇಳಿಕೊಂಡಿಲ್ಲ. ಬೆಂಗಳೂರಿಗೆ ವಲಸೆ ಬಂದವರು ನೋಂದಣಿ ಮಾಡಿಕೊಂಡಿಲ್ಲ. ಈ ಕಾರಣಕ್ಕಾಗಿ ಬೆಂಗಳೂರಲ್ಲಿ ಹಿನ್ನಡೆಯಾಗಿರುವ ನಿರೀಕ್ಷೆ ಇದೆ ಎಂಬುದನ್ನು ಆಯೋಗವು ಸಮೀಕ್ಷೆ ವೇಳೆ ಪತ್ತೆ ಮಾಡಿದೆ.

ಹಾವೇರಿ ಜಿಲ್ಲೆ ನೋಂದಣಿಯಲ್ಲಿ ಮೊದಲ ಜಿಲ್ಲೆ:

ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆಯಲ್ಲಿ ಹಾವೇರಿ ಜಿಲ್ಲೆಯು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದು, ಹೆಚ್ಚು ಜನರನ್ನು ನೋಂದಾಯಿಸಿರುವ ಮೊದಲ ಜಿಲ್ಲೆಯಾಗಿದೆ. ಸಮೀಕ್ಷೆಯಲ್ಲಿ 2,99,513 ಮಂದಿ ನೋಂದಾಯಿಸಿಕೊಂಡಿದ್ದಾರೆ. ಶೇ.111ರಷ್ಟು ಸಮೀಕ್ಷೆಯಾಗಿದೆ. ಉಳಿದ ಜಿಲ್ಲೆಗಳಾದ ಗದಗ ಜಿಲ್ಲೆಯಲ್ಲಿ ಶೇ.೧೦೮ ರಷ್ಟು, ದಾವಣಗೆರೆ ಶೇ.108, ಉಡುಪಿ ಶೇ.106,  ಬಾಗಲಕೋಟೆ ಶೇ.105,  ಉತ್ತರ ಕನ್ನಡ ಶೇ.106,  ಧಾರವಾಡ ಶೇ.104, ಮಂಡ್ಯ ಶೇ.103,  ̆ ಹಾಸನ ಶೇ.102, ಚಾಮರಾಜನಗರ ಮತ್ತು ತುಮಕೂರು ಶೇ.101 ಮತ್ತು ವಿಜಯಪುರ ಶೇ.100ರಷ್ಟು ಸಮೀಕ್ಷೆಯಾಗಿದೆ ಎಂದು ಆಯೋಗವು ತಿಳಿಸಿದೆ. (2011 ಜನಗಣತಿ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ. ಪ್ರಸ್ತುತ ಕುಟುಂಬಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಸಮೀಕ್ಷೆಯು ಪ್ರತಿಶತ ದಾಟಿದೆ)

ಎಂಟು ಜಿಲ್ಲೆಗಳಲ್ಲಿ ಶೇ 95ರಿಂದ ಶೇ. 99ರಷ್ಟು ಸಮೀಕ್ಷೆಯಾಗಿದೆ. ಚಿಕ್ಕಮಗಳೂರು ಶೇ.೯೯,  ಚಿತ್ರದುರ್ಗ ಶೇ.೯೭, ಕೊಪ್ಪಳ  ಶೇ.೯೭,  ರಾಯಚೂರು ಮತ್ತು ಶಿವಮೊಗ್ಗ ಶೇ. ೯೭, ಬೆಳಗಾವಿ, ಕೊಡಗು ಮತ್ತು ಬಳ್ಳಾರಿ ಶೇ.೯೬,  ವಿಜಯನಗರ ಶೇ.೯೫ರಷ್ಟು ಸಮೀಕ್ಷೆಯಾಗಿದೆ. ೮ ಜಿಲ್ಲೆಗಳಲ್ಲಿ ಶೇ 89ರಿಂದ ಶೇ 94ರಷ್ಟು ಗಣಕೀಕರಣ ಆಗಿದೆ. ಮೈಸೂರು ಶೇ.94, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಕೋಲಾರದಲ್ಲಿ ಶೇ.೯೩, ಚಿಕ್ಕಬಳ್ಳಾಪುರ ಶೇ. ೯೧,  ಯಾದಗಿರಿ ಶೇ.೯೦, ಬೀದರ್ ಶೇ.೯೦, ದಕ್ಷಿಣ ಕನ್ನಡ ಶೇ.89 ಜನ ಒಳಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಶೇ.೮೬ರಷ್ಟು ಸಮೀಕ್ಷೆಯಾಗಿದೆ. ಬೆಂಗಳೂರಲ್ಲಿ ಶೇ.೫೧ರಷ್ಟು ಆಗಿದ್ದು, ತಿಂಗಳ ಅಂತ್ಯಕ್ಕೆ ಶೇ.೫೨ರಷ್ಟು  ಆಗಲಿದೆ ಎಂದು ಹೇಳಿದೆ. 

ರಾಜಧಾನಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆ ನಡೆದೇ ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ಮನೆ ಮನೆಗೆ ಸ್ಟಿಕ್ಕರ್‌ ಅಂಟಿಸುವ ಕೆಲಸವನ್ನು ಬಿಬಿಎಂಪಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ದೂರು ಕೇಳಿ ಬರುತ್ತಿವೆ.

ಕಳೆದ ಒಂದೂವರೆ ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಕುಟುಂಬದ ಸರ್ವೇ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಶೇ.91 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಬೆಂಗಳೂರು ನಗರದಲ್ಲಿ ಶೇ.50 ರಷ್ಟು ಸಮೀಕ್ಷೆ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಮೀಕ್ಷೆ ಪೂರ್ಣಗೊಂಡ ಮನೆಗಳನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಬಿಬಿಎಂಪಿಯ ಮುಖ್ಯ ಆಯುಕ್ತರು ಸ್ಟಿಕ್ಕರ್‌ ಅಂಟಿಸುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು. ಕಳೆದ ಜೂ.23 ರಿಂದ ನಗರದಲ್ಲಿ ಸ್ಟಿಕ್ಕರ್‌ ಅಂಟಿಸುವ ಕಾರ್ಯ ಆರಂಭಿಸಲಾಗಿದೆ. ಆದರೆ, ಇದೀಗ ಸಮೀಕ್ಷೆ ನಡೆದೇ ಸ್ಟಿಕ್ಕರ್‌ ಅಂಟಿಸುತ್ತಿರುವ ಕುರಿತು ವ್ಯಾಪಕ ದೂರು ಕೇಳಿ ಬರುತ್ತಿವೆ.

ಸಮೀಕ್ಷೆ ನಡೆಸದೆ ಸ್ಟಿಕ್ಕರ್‌ ಅಂಟಿಸಿದ ಆರೋಪ

ಬೆಂಗಳೂರಿನ ಹಲವೆಡೆ ಮನೆ ಮನೆ ಭೇಟಿ ನೀಡಿ ಸ್ಟಿಕರ್‌ ಅಂಟಿಸಲಾಗುತ್ತಿದೆ. ಸ್ಟಿಕ್ಕರ್‌ ಅಂಟಿಸುವ ಮುನ್ನ ಸಮೀಕ್ಷೆ ಕಾರ್ಯ ಮುಕ್ತಾಯವಾಗಿದೆ ಎಂಬುದನ್ನು ಮನೆಯ ಸದಸ್ಯರಿಂದ ಖಾತರಿ ಪಡಿಸಿಕೊಳ್ಳಬೇಕು. ಆದರೆ, ಆ ಕಾರ್ಯ ಮಾಡದೆ ಬೇಕಾ ಬಿಟ್ಟಿ ಸ್ಟಿಕ್ಕರ್‌ ಅಂಟಿಸುವ ಕೆಲಸ ಮಾಡಲಾಗುತ್ತಿದೆ . ಬಿಬಿಎಂಪಿಯ ಸಿಬ್ಬಂದಿ ಎಲ್ಲಾ ಮನೆಗೂ ಸ್ಟಿಕ್ಕರ್‌ ಅಂಟಿಸುವ ಕೆಲಸ ಮಾಡುತ್ತಿಲ್ಲ. ಪ್ರತಿ ಮೂರು ಅಥವಾ ನಾಲ್ಕು ಮನೆ ಬಳಿಕ ಒಂದು ಮನೆಗೆ ಸ್ಟಿಕ್ಕರ್‌ ಅಂಟಿಸುತ್ತಿದ್ದಾರೆ. ಸ್ಟಿಕ್ಕರ್‌ ಅಂಟಿಸಿದ ಯಾವುದೇ ಮನೆಯಲ್ಲಿಯೂ ಸಮೀಕ್ಷೆ ಕಾರ್ಯ ಮಾಡಿಲ್ಲ. ಸಮೀಕ್ಷೆಯ ಬಗ್ಗೆ ಆ ಮನೆಯ ಸದಸ್ಯರಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಆರೋಪ ನಿರಾಕರಿಸಿದ ನ್ಯಾ.ನಾಗಮೋಹನ್‌ ದಾಸ್‌

ಸಮೀಕ್ಷೆ ಮಾಡದೆ ಸ್ಟಿಕ್ಕರ್‌ ಅಂಟಿಸುವ ಬಗ್ಗೆ ಮತ್ತು ಸಮೀಕ್ಷೆ ಕುರಿತು 'ದ ಫೆಡರಲ್‌ ಕರ್ನಾಟ'ಕ ಜೊತೆಗೆ ಮಾತನಾಡಿದ ನ್ಯಾ.ಎಚ್‌.ಎನ್‌. ನಾಗಮೋಹನ್‌ದಾಸ್‌, ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೋಂದಣಿಯಾಗಿಲ್ಲ. ಬೆಂಗಳೂರು ನಗರವನ್ನು ದೃಷ್ಟಿಯಲ್ಲಿದ್ದುಕೊಂಡು, ಸಮೀಕ್ಷಾ ಅವಧಿಯನ್ನು ವಿಸ್ತರಿಸಲಾಗಿತ್ತು. ಆದರೆ ಜೂನ್ 30ರ ನಂತರ ಮತ್ತೆ ವಿಸ್ತರಣೆ ಮಾಡುವುದಿಲ್ಲ. ಬೆಂಗಳೂರಲ್ಲಿ ಶೇ.೫೨ರಷ್ಟು ಸಮೀಕ್ಷೆ ನಡೆದಿದೆ. ಶೀಘ್ರದಲ್ಲಿಯೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದರು. 

ಇನ್ನು, ಸ್ಟಿಕರ್‌ ಅಂಟಿಸುವ ಕುರಿತು ಕೆಲವು ಆರೋಪಗಳು ಕೇಳಿಬಂದಿದೆ. ಆದರೆ, ವಾಸ್ತವಕ್ಕೆ ದೂರವಾದುದು. ಸ್ಟಿಕರ್‌ ಅಂಟಿಸಿದ ಮೇಲೆ ಮನೆಗೆ ತೆರಳಿದ್ದೇವೆ ಎಂದರ್ಥ. ಎಸ್‌ಸಿ ಹೊರತುಪಡಿಸಿ ಇತರೆ ಜಾತಿ, ಧರ್ಮದ ವ್ಯಕ್ತಿಗಳ ಮನೆಗೆ ತೆರಳಿದಾಗ ಅಲ್ಲಿಯೂ ಸ್ಟಿಕ್ಕರ್‌ ಅಂಟಿಸಬೇಕಾಗುತ್ತದೆ. ಎಸ್‌ಸಿ ಜನಾಂಗದವರು ಮಾಹಿತಿ ನೀಡಲು ನಾನಾ ಕಾರಣಗಳಿಗಾಗಿ ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರು ನಗರ ಹಿಂದಿನಂತಿಲ್ಲ ಕೋವಿಡ್‌ ಬಂದ ಬಳಿಕ ಹಲವು ಮಂದಿ ಸ್ವಂತ ಊರುಗಳಿಗೆ ತೆರಳಿದ್ದಾರೆ. ಬೆಂಗಳೂರು ಹೊರತು ಪಡಿಸಿ ಇತರೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ೪೨ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಇಲ್ಲದಂತಾಗಿದೆ. ಆನ್‌ಲೈನ್‌ನಲ್ಲಿ ಅವಕಾಶ ಇರುವ ಕಾರಣ  ಕೆಲವು ನಿಮಿಷಗಳ ಕಾಲ ಸಮಯ ತೆಗೆದುಕೊಂಡು ಮಾಹಿತಿಯನ್ನು ನಮೂದಿಸಬಹುದಾಗಿದೆ. ಆದರೆ ಬೆಂಗಳೂರಿನ ಜನತೆ ಮಾಡಿಲ್ಲ. ಆಯೋಗವು ಸಂಪೂರ್ಣವಾಗಿ ಶ್ರಮ ಹಾಕಿ ಸಮೀಕ್ಷೆ ನಡೆಸಿದೆ ಎಂದು ತಿಳಿಸಿದರು. 

Tags:    

Similar News